'ಮಲಗ್ತೀವಿ ಮಣ್ಣಾಕಿ' ಮಂಡ್ಯದಲ್ಲೊಂದು ವಿಭಿನ್ನ ಚಳವಳಿ
ಮಂಡ್ಯ, ಜುಲೈ 12: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ವಿವಾದಕ್ಕೆ ಸಂಬಂಧಿಸಿದಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮದ್ದೂರಮ್ಮ ಕೆರೆಯಲ್ಲಿ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಲಗ್ತೀವಿ ಮಣ್ಣಾಕಿ ಎಂಬ ಈ ವಿಭಿನ್ನ ಚಳವಳಿ ನಡೆಸುತ್ತಿರುವ ಕಾರ್ಯಕರ್ತರು, ಬತ್ತಿದ ಕೆರೆಯಲ್ಲಿ ಗುಂಡಿ ತೋಡಿಕೊಂಡು ಅದರೊಳಗೆ ಮಲಗುತ್ತಿದ್ದಾರೆ! ನಾವು ಹೀಗೆ ಮಲಗುತ್ತೇವೆ, ನಮ್ಮ ಸಮಸ್ಯೆಗೆ ಸ್ಪಂದಿಸದ ರಾಜ್ಯ ಸರ್ಕಾರ ನಮ್ಮ ಮೇಲೆ ಮಣ್ಣು ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಆರು ದಿನಗಳಿಂದ ಇಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ಜಿಲ್ಲಾಧ್ಯಕ್ಷ ಉಮಾಶಂಕರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಈಗಾಗಲೇ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.
ಜೂನ್ 29 ರಂದು ಮಂಡ್ಯದ ಕೆಆರ್ ಎಸ್(ಕೃಷ್ಣರಾಜ ಸಾಗರ) ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡಲಾಗಿತ್ತು. ಈ ಕುರಿತಂತೆ ಮಂಡ್ಯ, ಮೈಸೂರು ಭಾಗದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ತಮಿಳುನಾಡಿಗೆ ರಾತ್ರೋ ರಾತ್ರಿ ನೀರು ಬಿಟ್ಟ ಕ್ರಮವನ್ನು ವಿರೋಧಿಸಿ ಪ್ರತಿದಿನ ಪ್ರತಿಭಟನೆ ನಡೆಯುತ್ತಿದೆ.












Click it and Unblock the Notifications