ಹುತಾತ್ಮ ಯೋಧ ಗುರುವಿನ ಮನೆಗೆ ಬಾರದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ಮೈಸೂರು, ಫೆಬ್ರವರಿ 15:ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಿನ್ನೆ ಗುರುವಾರ (ಫೆ.14) ನಡೆದ ಉಗ್ರರ ದಾಳಿಯಲ್ಲಿ ಮಂಡ್ಯದ ವೀರ ಕನ್ನಡಿಗ ಗುರು ಅವರು ಹುತಾತ್ಮರಾಗಿದ್ದಾರೆ. ಅವರ ಹುಟ್ಟೂರಾದ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಇತ್ತ ಸಾವಿನ ಸುದ್ದಿ ತಿಳಿದು ಹಲವು ಗಂಟೆಗಳೇ ಕಳೆದರೂ ಗುರುವಿನ ಮನೆಗೆ ಮಂಡ್ಯ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಕನಿಷ್ಠ ಸೌಜನ್ಯಕ್ಕೂ ಸಹ ಅವರ ಮನೆಗೆ ಭೇಟಿ ನೀಡಿಲ್ಲ ಎನ್ನಲಾಗಿದೆ. ರಾಜಕೀಯ ಕಚ್ಚಾಟಕ್ಕೆ ಬರುವ ಜನಪ್ರತಿನಿಧಿಗಳು ದೇಶಸೇವೆ ಮಾಡುವವರನ್ನು ಮರೆತು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಕುಮಾರಸ್ವಾಮಿ ಮಾತ್ರ ಕರೆ ಮಾಡಿ ಸಾಂತ್ವಾನ ತಿಳಿಸಿದ್ದಾರೆ. ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಕಲ್ಲು ಹೊಡೆದರೆ ಸಾಕು ಅಲ್ಲಿಗೆ ತೆರಳುತ್ತಾರೆ. ಆದರೆ ನಮ್ಮ ದೇಶಕ್ಕಾಗಿ ಪ್ರಾಣ ತೆತ್ತ ಯೋಧನನ್ನು ನೋಡೋಕೆ ಬರಲು ಇವರಿಗೆ ಸಮಯಾವಕಾಶ ಇಲ್ಲ ಎಂದು ಇಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಇಂದು ಸಂಜೆ 4ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಸದ್ಯ ಸಂಸದ ಎಲ್.ಆರ್ ಶಿವರಾಮೇಗೌಡ ಸಹ ಭೇಟಿ ನೀಡಿದ್ದಾರೆ. ಯಾರು ಕೂಡ ಪರಿಹಾರ ನೀಡುವ ಕುರಿತು ಚಕಾರ ಎತ್ತಿಲ್ಲ ಎನ್ನಲಾಗಿದೆ. ಇತ್ತ ಹುತಾತ್ಮ ಯೋಧನ ಕುಟುಂಬಕ್ಕೆ ಜಿಲ್ಲಾಡಳಿತ ನೆರವು ಘೋಷಿಸಿದೆ. ಗ್ರಾಮದ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಮಂಜುಶ್ರೀ ಯೋಧನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸಿಆರ್ಪಿಎಫ್ ಕಚೇರಿಯಿಂದ ಮಾಹಿತಿ ಪಡೆದಿದ್ದೇವೆ. ಯೋಧ ಹುತಾತ್ಮರಾದ ಬಗ್ಗೆ ಖಚಿತಪಡಿಸಿಕೊಂಡಿದ್ದೇವೆ. ಇಂದು ಅಥವಾ ನಾಳೆ ಹುಟ್ಟೂರಿಗೆ ಪಾರ್ಥಿವ ಶರೀರ ಬರುವ ನಿರೀಕ್ಷೆ ಇದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಡಿಸಿ ಮಂಜುಶ್ರೀ ಹೇಳಿದ್ದಾರೆ.
ಗುರು ಅವರ ಪಾರ್ಥಿವ ಶವವನ್ನು ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿ ಜಾಗದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ನಂತರ ಎಳನೀರು ಮಾರ್ಕೆಟ್ ಹಿಂಭಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.












Click it and Unblock the Notifications