ಪೊಲೀಸರಿಂದ ಗಾಳಿಯಲ್ಲಿ ಗುಂಡು, ಅಶ್ರುವಾಯು, ಲಾಠಿ ಪ್ರಹಾರ
ಮಂಡ್ಯ, ಸೆಪ್ಟೆಂಬರ್ 09 : ಕಾವೇರಿ ನೀರಿಗಾಗಿ ರೈತರ ಹೋರಾಟ ಕೆ.ಆರ್.ಎಸ್.ನಲ್ಲಿ ತೀವ್ರಗೊಂಡಿದ್ದು, ನೀರನ್ನು ನಿಲ್ಲಿಸಲು ಕೆ.ಆರ್.ಎಸ್. ಒಳನುಗ್ಗಲು ಯತ್ನಿಸಿದ ಸಾವಿರಾರು ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ, ಗಾಳಿಯಲ್ಲಿ ಗುಂಡು ಹಾಗೂ ಅಶ್ರುವಾಯು ಸಿಡಿಸಿದ್ದಾರೆ.
ಮಧ್ಯಾಹ್ನ 12 ಗಂಟೆವರೆಗೂ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರು, ತಮಿಳುನಾಡಿಗೆ ಹರಿಯುತ್ತಿದ ಕಾವೇರಿಯನ್ನು ಸಿದ್ದರಾಮಯ್ಯ ಸರಕಾರ ನಿಲ್ಲಿಸದಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಕೃಷ್ಣ ರಾಜ ಸಾಗರಕ್ಕೆ ನುಗ್ಗಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. [LIVE: ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಸಿದ್ದರಾಮಯ್ಯ]
ಕಳೆದ ನಾಲ್ಕು ದಿನಗಳಿಂದಲೂ ಕಾವೇರಿ ನದಿ ನೀರು ನಿಲ್ಲಿಸುವಂತೆ ಹೋರಾಟ ನಡೆಸುತ್ತಿದ್ದರೂ, ಸಿದ್ದರಾಮಯ್ಯ ಅವರು ನಮ್ಮ ಹೋರಾಟವನ್ನು ಲೆಕ್ಕಿಸದೆ ಸುಮಾರು 18 ಸಾವಿರ ಕ್ಯುಸೆಕ್ ನೀರನ್ನು ಹರಿಸುತ್ತಿದ್ದಾರೆ. ಕೂಡಲೇ ನೀರನ್ನು ನಿಲ್ಲಿಸಬೇಕೆಂದು ಅವರು ಅಧಿಕಾರಿಗಳನ್ನು ಆಗ್ರಹಿಸಿದರು.
ಈ ಸಂದರ್ಭ ರೊಚ್ಚಿಗೆದ್ದ ರೈತರು ತಾವೇ ನೀರನ್ನು ನಿಲ್ಲಿಸಲು ಕೆ.ಆರ್.ಎಸ್. ಒಳನುಗ್ಗಲು ಯತ್ನಿಸಿದರು. ಇದರಿಂದಾಗಿ ಪೊಲೀಸರು ಮನಬಂದಂತೆ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದರು. ಇದಕ್ಕೂ ರೈತರು ಬಗ್ಗದೆ ಕೆ.ಆರ್.ಎಸ್. ಒಳನುಗ್ಗಲು ಯತ್ನಿಸಿದಾಗ ಅಶ್ರುವಾಯು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. [ತಿರುಗಿಯೂ ನೋಡದ ಅಂಬಿ, ಪದ್ಮಾವತಿಯೂ ನಾಪತ್ತೆ!]
ಅಶ್ರುವಾಯು ಮತ್ತು ಲಾಠಿ ಚಾರ್ಜನ್ನು ತಪ್ಪಿಸಿಕೊಳ್ಳಲು ಕೆಲ ರೈತರು ನದಿಗೆ ಹಾರಿದ್ದಾರೆ ಹಾಗೂ ಹಲವರು ಗದ್ದೆ ಬಯಲಿನಲ್ಲಿ ಎದ್ದುಬಿದ್ದು ಓಡಿದ್ದಾರೆ. ಪೊಲೀಸರು ರೈತರ ಮೇಲೆ ಮನಬಂದಂತೆ ಲಾಠಿ ಪ್ರಹಾರ ನಡೆಸಿದ್ದರಿಂದಾಗಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸರ್ಕಾರಕ್ಕೆ ಹಿಡಿಶಾಪ : ನೀರು ಕೊಡಲು ಆಗದ ಸರ್ಕಾರ ರೈತರ ಮೇಲೆ ಲಾಠಿ ಪ್ರಹಾರ ನಡೆಸಿರುವುದರಿಂದ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ. ಪೊಲೀಸರ ಲಾಠಿ ಪ್ರಹಾರದಿಂದ ರೊಚ್ಚಿಗೆದ್ದ ರೈತರು ಧಿಕ್ಕಾರ ಕೂಗಿ ಪೊಲೀಸರು ಮತ್ತು ಸಾರಿಗೆ ಬಸ್ಗಳ ಮೇಲೆ ಕಲ್ಲು ತೂರಿದ್ದಾರೆ.