ಮುತ್ತತ್ತಿ ಅರಣ್ಯದಲ್ಲಿ ಗಂಧದ ಮರ ಕಡಿಯುತ್ತಿದ್ದವರ ಸೆರೆ
ಮಳವಳ್ಳಿ, ಜುಲೈ 15: ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ಐವರನ್ನು ಅರಣ್ಯ ಸಿಬ್ಬಂದಿ ಬಂಧಿಸಿರುವ ಘಟನೆ ಹಲಗೂರು ಸಮೀಪದ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೂಲತಃ ಕನಕಪುರ ತಾಲ್ಲೂಕು ಕಾಳೇಗೌಡನ ದೊಡ್ಡಿ ಗ್ರಾಮದ ನಿವಾಸಿ ಕುಮಾರ, ಮಲ್ಲೇಶ, ಶೀನಾ, ಕಬ್ಬಾಳ, ಗಿರಿ ಎಂಬುವರೇ ಬಂಧಿತರು. ಸೀನಾ ಸಿಕ್ಕ ಎಂಬಾತ ತಲೆ ಮರೆಸಿಕೊಂಡಿದ್ದಾನೆ.
ಮುತ್ತತ್ತಿ ಸಂರಕ್ಷಿತ ಅರಣ್ಯ ವಲಯದ ಬಸವನಬೆಟ್ಟ ವ್ಯಾಪ್ತಿಯ ಜೇನುಕಲ್ಲು ಎಂಬ ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಅಲ್ಲಿದ್ದ ಗಂಧದ ಮರವನ್ನು ಕಡಿದು ಸಾಗಿಸಲು ಯತ್ನಿಸುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಬಸವರಾಜು, ಸಿದ್ದರಾಮು, ಪ್ರಕಾಶ್, ಶಿವರಾಜು ಎಂಬುವವರಿಗೆ ಮರ ಕಡಿಯುತ್ತಿರುವ ಸದ್ದು ಕೇಳಿಸಿದೆ.

ಹೀಗಾಗಿ ಸ್ಥಳಕ್ಕೆ ತೆರಳಿ ಅರಣ್ಯ ಸಿಬ್ಬಂದಿ ದಾಳಿ ಮಾಡಿದ್ದಾರೆ. ಈ ವೇಳೆ ಓಡಿ ಹೋಗಲು ಐವರು ಕಳ್ಳರು ಯತ್ನಿಸಿದರಾದರೂ ಅದು ಸಾಧ್ಯವಾಗದೆ ಸಿಕ್ಕಿ ಬಿದ್ದಿದ್ದಾರೆ. ಸೀನಾ ಸಿಕ್ಕ ಎಂಬಾತ ಪರಾರಿಯಾಗಿದ್ದಾನೆ.
ಐವರು ಆರೋಪಿಗಳಿಂದ ಗಂಧದ ಮರದ ತುಂಡುಗಳು, ಮರ ಕಡಿಯಲು ಬಳಸಿದ್ದ ಮಚ್ಚು ಇನ್ನಿತರ ಹತ್ಯಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಹಲಗೂರು ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಕುಮಾರ್, ಪ್ರವೀಣ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.












Click it and Unblock the Notifications