ಬದಲಾದ ಮಂಡ್ಯ ರಾಜಕೀಯ ಪರಿಸ್ಥಿತಿ: ಸುಮಲತಾ ಅಂಬರೀಶ್ ಮುಂದಿನ ನಡೆಯೇನು?
ಸಂಸದೆ ಸುಮಲತಾ ಅಂಬರೀಶ್ ಅವರು ಕೇಂದ್ರ ರಾಜಕಾರಣದಲ್ಲಿ ಇರುತ್ತಾರಾ? ಅಥವಾ ರಾಜ್ಯರಾಜಕೀಯಕ್ಕೆ ಬರುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಈ ಕುರಿತಂತೆ ಹಲವು ಅಭಿಪ್ರಾಯಗಳ ಕೇಳಿ ಬರುತ್ತಿದ್ದು, ಇದುವರೆಗೆ ಸುಮಲತಾ ಅಂಬರೀಶ್ ಮಾತ್ರ ನಿರ್ಧಾರಗಳನ್ನು ಪ್ರಕಟಿಸಿಲ್ಲ.
ಮಂಡ್ಯ, ಮಾರ್ಚ್ 1: ರಾಜಕಾರಣದಲ್ಲಿ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಒಂದಷ್ಟು ಬದಲಾವಣೆಗಳು ಆಗುವ ಸಾಧ್ಯತೆ ಕಂಡು ಬಂದಿದೆ. ಅದರಲ್ಲೂ ಎಲ್ಲರ ದೃಷ್ಟಿ ಸುಮಲತಾ ಅಂಬರೀಶ್ ಅವರ ನಡೆಯತ್ತಲೇ ನೆಟ್ಟಿರುವುದು ಕುತೂಹಲ ಕೆರಳಿಸಿದೆ. ಸುಮಲತಾ ಅಂಬರೀಶ್ ಅವರು ಕೇಂದ್ರ ರಾಜಕಾರಣದಲ್ಲಿ ಇರುತ್ತಾರಾ? ಅಥವಾ ರಾಜ್ಯರಾಜಕೀಯಕ್ಕೆ ಬರುತ್ತಾರಾ ಎಂಬ ಚರ್ಚೆ ಶುರುವಾಗಿದೆ.
ಈ ಕುರಿತಂತೆ ಒಂದರ ಮೇಲೊಂದರಂತೆ ಅಭಿಪ್ರಾಯಗಳು ಜನವಲಯದಲ್ಲಿ ಕೇಳಿ ಬರುತ್ತಿದ್ದು, ಇದುವರೆಗೆ ಸುಮಲತಾ ಅಂಬರೀಶ್ ಮಾತ್ರ ಯಾವುದೇ ನಿರ್ಧಾರಗಳನ್ನು ಪ್ರಕಟಿಸಿಲ್ಲ. ಸ್ಪಷ್ಟನೆಯನ್ನೂ ನೀಡುತ್ತಿಲ್ಲ. ಅವರ ಬೆಂಬಲಿಗರು ಬಿಜೆಪಿಯತ್ತ ಮುಖ ಮಾಡುತ್ತಿರುವುದರಿಂದಾಗಿ ರಾಜಕೀಯ ಪಡಸಾಲೆಯಲ್ಲಿ ಅವರ ಸುತ್ತಲೂ ಅಂತೆ ಕಂತೆಗಳ ಸುದ್ದಿ ಹರಿದಾಡುತ್ತಿದೆ.

ಮಂಡ್ಯದತ್ತ ಬಿಜೆಪಿ ಟಾರ್ಗೆಟ್ ಮಾಡಿದೆ. ಅಲ್ಲಿ ಶೂನ್ಯದಲ್ಲಿದ್ದ ಬಿಜೆಪಿ ನಿಧಾನವಾಗಿ ಸಂಘಟನೆಗೊಳ್ಳುತ್ತಿದೆ. ತಳಮಟ್ಟದಿಂದ ಸಂಘಟನೆಗೊಳ್ಳುತ್ತಿದ್ದರೂ ಅದು ಪ್ರಬಲವಾಗಿ ಬೆಳೆಯಲು ಸಾಧ್ಯವಾಗಿಲ್ಲ. ಅಲ್ಲಿ ಬೆಳವಣಿಗೆ ಕಾಣಬೇಕಾದರೆ ಘಟಾನುಘಟಿ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವುದು ಅನಿವಾರ್ಯವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಖಾತೆ ತೆರೆದು ಸಚಿವರೂ ಆಗಿರುವ ಡಾ. ನಾರಾಯಣಗೌಡರ ನಡೆ ಗೌಪ್ಯವಾಗಿದೆ.
ಮಂಡ್ಯದಲ್ಲಿ ಸುಮಲತಾರತ್ತ ಎಲ್ಲರ ನೋಟ
ಚುನಾವಣೆ ಹೊತ್ತಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ ಅದರ ಬಗ್ಗೆ ನಾರಾಯಣಗೌಡರು ಸ್ಪಷ್ಟನೆ ನೀಡುತ್ತಿಲ್ಲ. ಜೊತೆಗೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲು ಮುಂದಾಗದೆ ಇರುವುದನ್ನು ನೋಡಿದರೆ ಸಂಶಯಗಳು ಹುಟ್ಟಿಕೊಳ್ಳುತ್ತಿವೆ. ಜತೆಗೆ ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮಣಿಸಿ ಪ್ರಾಬಲ್ಯ ಸಾಧಿಸುವುದು ಕಷ್ಟಸಾಧ್ಯವಾಗಬಹುದು. ಜಿಲ್ಲೆಯಲ್ಲಿ ಪ್ರಬಲ ನಾಯಕರ ಕೊರತೆಯನ್ನು ಬಿಜೆಪಿ ಎದುರಿಸುತ್ತಿದ್ದು, ಸುಮಲತಾರತ್ತ ನೋಟ ಬೀರುತ್ತಿದ್ದಾರೆ.
ಸುಮಲತಾ ಅವರು ತೆಗೆದುಕೊಳ್ಳುವ ನಿರ್ಧಾರಗಳು ಅವರ ರಾಜಕೀಯ ಭವಿಷ್ಯದ ಮೇಲೆ ನಿಂತಿರುವುದರಿಂದ ತೂಗಿ ಅಳೆದು ತೀರ್ಮಾನ ಮಾಡಬೇಕಾಗಿದೆ. ಹೀಗಾಗಿ ಅವರು ಕಾದು ನೋಡುವ ತಂತ್ರವನ್ನು ಅನುಸರಿಸುವುದರಲ್ಲಿ ಎರಡು ಮಾತಿಲ್ಲ. ಇನ್ನು ಬಿಜೆಪಿ ಸುಮಲತಾ ಅವರ ಪುತ್ರ ಅಭಿಷೇಕ್ ಅವರನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನ ಮಾಡುತ್ತಿದೆ ಎನ್ನಲಾಗುತ್ತಿದೆ. ಅಭಿಷೇಕ್ ಅವರಿಗೆ ಮದ್ದೂರಿನಿಂದ ಟಿಕೆಟ್ ನೀಡಲಾಗುತ್ತದೆ ಎಂಬ ವದಂತಿಗಳು ಜೋರಾಗಿವೆ.

ಈಗಿನ ಪರಿಸ್ಥಿತಿ ಗಮನಿಸಿದರೆ ರಾಜ್ಯದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣ ಕಂಡುಬರುತ್ತಿಲ್ಲ. ಹೀಗಿರುವಾಗ ಸುಮಲತಾ ಅವರು ತಮ್ಮ ನಿರ್ಧಾರವನ್ನು ವಿಧಾನಸಭಾ ಚುನಾವಣೆ ಕಳೆಯಲಿ ಮುಂದೆ ನೋಡೋಣ ಎಂಬ ತಂತ್ರ ಅನುಸರಿಸಿದರೆ ಅಚ್ಚರಿಯಿಲ್ಲ. ವಿಧಾನ ಸಭಾ ಚುನಾವಣೆಗಿಂತಲೂ ಲೋಕಸಭಾ ಚುನಾವಣೆ ಅವರ ಗೆಲುವಿಗೆ ಪೂರಕವಾಗಲಿದೆ.
2024ರ ಲೋಕಸಭಾ ಚುನಾವಣೆ ಹೊತ್ತಿಗೆ ಸುಮಲತಾ ಅವರು ಕಳೆದ ಬಾರಿ(2019)ಯಂತೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಅವತ್ತಿದ್ದ ರಾಜಕೀಯ ಪರಿಸ್ಥಿತಿ ಇವತ್ತಿಲ್ಲ. ಅವರನ್ನು ಜನ ಪಕ್ಕಾ ರಾಜಕಾರಣಿಯಂತೆ ನೋಡುತ್ತಾರೆ. ಕಳೆದ ಐದು ವರ್ಷಗಳ ಸಾಧನೆಯನ್ನು ಜನರ ಮುಂದೆ ಇಡಲೇ ಬೇಕಾಗಿದೆ. ಜತೆಗೆ ಪಕ್ಷೇತರರಾಗಿ ನಿಂತು ಚುನಾವಣೆ ಎದುರಿಸುವುದು ಸುಲಭವಾಗಿ ಉಳಿದಿಲ್ಲ.
ಚುನಾವಣೆ ಸಮೀಪಿಸುತ್ತಿದ್ದಂತೆ ಬದಲಾದ ಮಂಡ್ಯದ ರಾಜಕೀಯ ವಾತಾವರಣ
2019ರ ಚುನಾವಣೆಯನ್ನು ನೆನಪಿಸಿಕೊಳ್ಳುವುದಾದರೆ ಅಂದು ಅನುಕಂಪದ ಅಲೆ, ಕುಟುಂಬ ರಾಜಕಾರಣದ ಆಕ್ರೋಶ, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ಸಹಕಾರವಿತ್ತು. ಹೀಗಾಗಿ ಸುಮಲತಾ ಅವರನ್ನು ಮಂಡ್ಯದ ಮತದಾರರು ಒಬ್ಬ ರಾಜಕಾರಣಿಯಂತೆ ನೋಡದೆ, ನಮ್ಮೂರಿನ ಹೆಣ್ಣುಮಗಳಂತೆ ನೋಡಿದರು. ಹಾಗಾಗಿ ಇಡೀ ಸರ್ಕಾರವೇ ಅವರ ವಿರುದ್ಧ ಕ್ಷೇತ್ರಕ್ಕೆ ಬಂದು ಕೆಲಸ ಮಾಡಿದರೂ, ಆರೋಪ, ನಿಂದನೆ, ಹಣ, ಹೆಂಡ ಹಂಚಿದರೂ ಮತದಾರರು ಕೈಬಿಡಲಿಲ್ಲ.
ಆ ಪರಿಸ್ಥಿತಿ ಈಗ ಇಲ್ಲದಾಗಿದೆ. ಮತದಾರರು ಸಂಸದರು ತಮಗೇನು ಮಾಡಿದ್ದಾರೆ? ತಮ್ಮ ಜಿಲ್ಲೆಗೆ ಯಾವ ಯೋಜನೆ ತಂದಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆಲ್ಲ ಉತ್ತರ ಹೇಳಬೇಕಾಗಿದೆ. ಅದರಲ್ಲೂ 2024ರ ಚುನಾವಣೆಯನ್ನು ಖರ್ಚು ವೆಚ್ಚವನ್ನು ಭರಿಸಿ ಚುನಾವಣೆ ಎದುರಿಸಬೇಕಾಗಿದೆ. ಕೇಂದ್ರದಲ್ಲಿ ಮೋದಿ ಹವಾ ಇರುವುದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.












Click it and Unblock the Notifications