ಮಂಡ್ಯ: ವೃದ್ಧೆಯೊಬ್ಬರನ್ನು ಕೊಲೆ ಮಾಡಿ, ಚಿನ್ನಾಭರಣ ಕಳವು
ಮಂಡ್ಯ, ಜೂನ್ 23: ಮನೆಗೆ ನುಗ್ಗಿ ವೃದ್ಧೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿ, ಆಕೆಯ ಮೈ ಮೇಲಿದ್ದ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕರಿಕ್ಯಾತನಹಳ್ಳಿಯಲ್ಲಿ ತಡರಾತ್ರಿ ನಡೆದಿದೆ.
ಹನುಮೇಗೌಡರ ಪತ್ನಿ ಜಯಮ್ಮ (70) ಕೊಲೆಯಾದ ವೃದ್ಧೆ. ದುಷ್ಕರ್ಮಿಗಳು ತಡರಾತ್ರಿ ಮನೆಯ ಮುಂಬಾಗಿಲು ಹೊಡೆದು ಮನೆಗೆ ನುಗ್ಗಿದ್ದಾರೆ. ಮಹಿಳೆಯ ಮೈಮೇಲಿದ್ದ ಮಾಂಗಲ್ಯ ಸರ, ಓಲೆ, ಜುಮಕಿ, ಉಂಗುರ ಹಾಗೂ ಮಾಟಿ ಸೇರಿದಂತೆ ಸುಮಾರು 75 ಗ್ರಾಂ. ಗೂ ಹೆಚ್ಚು ತೂಕದ ಒಡವೆ ಕಿತ್ತುಕೊಂಡು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಪ್ರಕರಣ ಬೆಳಗಿನ ಜಾವ ಎಚ್ಚರವಾದಾಗ ಮನೆಯವರ ಗಮನಕ್ಕೆ ಬಂದಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೆಂಪೋ ಮಾಲೀಕನ ಕೊಲೆ ಶಂಕೆ
ಇದೇ ಸಂದರ್ಭದಲ್ಲಿ ಸೋಮವಾರ ರಾತ್ರಿ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮ-ಚುಂಚನಕಟ್ಟೆ ರಸ್ತೆಯಲ್ಲಿ ಟೆಂಪೋ ಟ್ರಾವೆಲ್ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಸಾಲಿಗ್ರಾಮದ ಟೆಂಪೋ ಟ್ರಾವಲರ್ ಮಾಲೀಕ ಆನಂದ್ (35) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಶ್ವಾನದಳದವರನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ. ಹತ್ಯೆಯನ್ನು ಮರೆಮಾಚಲು ಬೈಕ್ ಅಪಘಾತದ ರೀತಿಯಲ್ಲಿ ಬಿಂಬಿಸಲಾಗಿದೆ. ಹತ್ಯೆಗೆ ನಿಖರವಾದ ಕಾರಣ ಏನೆಂಬುದು ತಿಳಿದು ಬಂದಿಲ್ಲ.
ಸ್ಥಳಕ್ಕೆ ಕೆ.ಆರ್ ನಗರ ವೃತ್ತ ನಿರೀಕ್ಷಕ ರಾಜು, ಉಪ ನಿರೀಕ್ಷಕ ಚೇತನ್, ಸಾಲಿಗ್ರಾಮ ಉಪ ಠಾಣೆಯ ಉಪ ನಿರೀಕ್ಷಕಿ ಆರತಿ ಮತ್ತು ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಈ ಹತ್ಯೆ ಪ್ರಕರಣ ಬಹಳ ನಿಗೂಢವಾಗಿದ್ದು ಹಣಕಾಸಿನ ವಿಚಾರಕ್ಕೋ ಅಥವಾ ಬೇರೆ ಯಾವ ಕಾರಣಕ್ಕೆ ನಡೆದಿದೆ ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications