ಕೌಟುಂಬಿಕ ಸಮಸ್ಯೆಗೆ ಬೇಸತ್ತು ವೃದ್ಧ ದಂಪತಿ ಆತ್ಮಹತ್ಯೆ
ಮಂಡ್ಯ, ನವೆಂಬರ್.21: ಕೌಟುಂಬಿಕ ಸಮಸ್ಯೆಯಿಂದಾಗಿ ವೃದ್ಧ ದಂಪತಿ ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.
ಬೊಮ್ಮೇನಹಳ್ಳಿ ಗ್ರಾಮದ ನಿವಾಸಿಗಳಾದ ಬೋರಲಿಂಗೇಗೌಡ(60), ಪತ್ನಿ ಲಕ್ಷ್ಮಮ್ಮ(52) ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿ.
ದಂಪತಿಗಳು ಸೋಮವಾರ ರಾತ್ರಿ ಮನೆಯಲ್ಲಿ ಬೇರೆ ಸದಸ್ಯರು ಮಲಗಿದ ವೇಳೆ ತಾವು ನಡುರಾತ್ರಿ ಎದ್ದು ಮನೆಯಿಂದ ಹೊರಬಂದು ಬಳಿಕ ನೇರವಾಗಿ ತಮ್ಮ ಜಮೀನಿಗೆ ತೆರಳಿದ್ದಾರೆ. ನಂತರ ಜಮೀನಿನಲ್ಲಿ ಬೆಳೆಗಳಿಗೆ ಕೀಟಬಾಧೆ ಹತೋಟಿಗಾಗಿ ಹಾಕುವ ಕ್ರಿಮಿನಾಶಕ ಮಾತ್ರೆಯನ್ನು ನುಂಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಂಗಳವಾರ ಬೆಳಗ್ಗೆ (ನ.20) ಮೃತ ದಂಪತಿ ಪುತ್ರ ರಾಜೇಶ್ ಎದ್ದು ನೋಡಿದಾಗ ಮನೆಯಲ್ಲಿ ತಂದೆತಾಯಿ ಕಾಣಿಸದೆ ಇದ್ದಾಗ ಹುಡುಕಾಟ ನಡೆಸಿದ್ದಾರೆ. ಆದರೆ ಅವರು ಮನೆಯಲ್ಲೂ ಕಾಣದೆ ಇದ್ದಾಗ ಎಲ್ಲಿ ಹೋಗಿರಬಹುದೆಂದು ಹುಡುಕಾಟ ನಡೆಸಿದ್ದಾರೆ.
ಕೊನೆಗೆ ಜಮೀನಿನ ಬಳಿ ಹೋಗಿ ಹುಡುಕಾಟ ನಡೆಸಿದಾಗ ಅಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ತಕ್ಷಣ ಪಟ್ಟಣದ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವೃದ್ಧ ದಂಪತಿಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಅವರ ಒಬ್ಬನೇ ಮಗನಾಗಿರುವ ರಾಜೇಶ್ ತಾವು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಮ್ಮ ತಂದೆ, ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ತೋರಿಸಿದರೂ ಗುಣಮುಖರಾದ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ. ಅವರ ಸಾವಿಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಶವವನ್ನು ಹಸ್ತಾಂತರಿಸಲಾಗಿದೆ. ಸಾವಿಗೆ ನಿಖರ ಕಾರಣ ಪೊಲೀಸರ ತನಿಖೆಯಿಂದಷ್ಟೆ ಹೊರ ಬರಬೇಕಾಗಿದೆ.












Click it and Unblock the Notifications