Bengaluru-Mysuru expressway: ಮಾ. 12ರಂದು ಮಂಡ್ಯದಲ್ಲಿ 1.8 ಕಿ.ಮೀ. ರೋಡ್ ಶೋ ನಡೆಸಲಿರುವ ಪ್ರಧಾನಿ, ಸಿದ್ಧತೆ ಹೇಗಿದೆ?
ಮಾರ್ಚ್ 12ರಂದು ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗಾಗಿ ಮಂಡ್ಯಕ್ಕೆ ಪ್ರಧಾನಿ ನರೇಂದ್ರಮೋದಿ ಅವರು ಆಗಲಿಸಲಿದ್ದಾರೆ. ಹಾಗಾದರೆ ರೋಡ್ ಶೋಗೆ ಯಾವ ರೀತಿಯಲ್ಲಿ ಸಿದ್ಧತೆ ಮಾಡಿದ್ದಾರೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮಂಡ್ಯ, ಮಾರ್ಚ್, 09: ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗೆ ಮಾರ್ಚ್ 12ರಂದು ನಗರಕ್ಕೆ ಪ್ರಧಾನಿ ನರೇಂದ್ರಮೋದಿ ಅವರು ಆಗಲಿಸಲಿದ್ದಾರೆ. ಅಲ್ಲದೇ ನಗರದೊಳಗೆ 1.8 ಕಿ.ಮೀ.ವರೆಗೆ ರೋಡ್ ಶೋ ಕೂಡ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರವಾಸಿಮಂದಿರ ವೃತ್ತದಿಂದ ಮೈ ಶುಗರ್ ಫ್ಯಾಕ್ಟರಿ ಸರ್ಕಲ್ವರೆಗೆ ರೋಡ್ ಶೋ ನಡೆಯಲಿದೆ. ಬಳಿಕ ಕಾರಿನಲ್ಲಿ ತೆರಳುವ ನರೇಂದ್ರ ಮೋದಿಯವರು ರಸ್ತೆ ಪಕ್ಕದಲ್ಲಿ ನಿಂತು ವೀಕ್ಷಿಸುವ ಗ್ರಾಮಸ್ಥರತ್ತಲೂ ಕೈ ಬೀಸಲಿದ್ದಾರೆ. ಮದ್ದೂರು ತಾಲೂಕು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವೇದಿಕೆಗೆ ಹೋಗುವ ಮುನ್ನ ನಿಗಧಿತ ಸ್ಥಳದಲ್ಲಿ ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ.

ಕಾಲ್ನಡಿಗೆಯಲ್ಲಿ ಸಾಗಲಿರುವ ಪ್ರಧಾನಿ
ರಸ್ತೆ ಉದ್ಘಾಟನೆಗೆ ನಿಗಧಿಪಡಿಸಿರುವ ಸ್ಥಳದಲ್ಲಿ ಸ್ವಲ್ಪ ದೂರ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ತೆರಳುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಿಳೆಯರು ಬೆಲ್ಲದ ಆರತಿ ಮಾಡಿ ಸ್ವಾಗತಿಸಲಿದ್ದಾರೆ. ಬಳಿಕ ದಶಪಥ ಹೆದ್ದಾರಿಯನ್ನು ಟೇಪು ಕತ್ತರಿಸುವ ಮೂಲಕ ಉದ್ಘಾಟಿಸಲಿದ್ದಾರೆ. ದಶಪಥ ರಸ್ತೆ ಉದ್ಘಾಟನೆ ಬಳಿಕ ನೇರವಾಗಿ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ವೇದಿಕೆಗೆ ತೆರಳಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ವಿವಿಧ ಜಿಲ್ಲೆಗಳಿಂದ ಆಗಮಿಸಲಿರುವ ಜನ
ಮಂಡ್ಯ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲು ಜಿಲ್ಲೆಯ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಸುತ್ತಮತ್ತಲಿನ ಗ್ರಾಮಗಳಿಂದ ಕಾಲ್ನಡಿಗೆಯಲ್ಲೇ ವೇದಿಕೆಗೆ ಗ್ರಾಮಸ್ಥರು ಬರಲು ಸಿದ್ಧತೆ ನಡೆಸಿದ್ದಾರೆ. ಸ್ವಲ್ಪ ದೂರವಿರುವ ಗ್ರಾಮಗಳಿಂದ ದ್ವಿಚಕ್ರ ವಾಹನ ಇಲ್ಲವೇ ಇತರೆ ಖಾಸಗಿ ವಾಹನಗಳಲ್ಲೂ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ.
3 ಸಾವಿರ ಸಾರಿಗೆ ಬಸ್ಗಳ ವ್ಯವಸ್ಥೆ
ಜಿಲ್ಲೆಯ ವಿವಿಧ ತಾಲೂಕುಗಳಿಂದ ಕಾರ್ಯಕ್ರಮಕ್ಕೆ ಬರಲು ಜನರಿಗೆ ಸುಮಾರು 3 ಸಾವಿರಕ್ಕೂ ಹೆಚ್ಚಿನ ಸಾರಿಗೆ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ಚಾಮರಾಜನಗರ, ಹಾಸನ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾರಿಗೆ ಬಸ್ಗಳನ್ನು ನಿಯೋಜಿಸಲಾಗಿದೆ. ಎಲ್ಲ ಗ್ರಾಮಗಳಿಗೂ ಸರ್ಕಾರಿ ಬಸ್ಸುಗಳು ತೆರಳಿ ಜನರನ್ನು ಕರೆತರಲು ಸಿದ್ಧತೆ ನಡೆಸಲಾಗಿದೆ.

34 ಮರಗಳ ಮಾರಣ ಹೋಮ
ಪ್ರಧಾನಮಂತ್ರಿ ನರೇಂದ್ರಮೋದಿ ರೋಡ್ ಶೋಗಾಗಿ ರಾತ್ರೋರಾತ್ರಿ 34 ಮರಗಳನ್ನು ಕಡಿದು ಹಾಕಲಾಗಿದೆ. ರಸ್ತೆಗೆ ಅಡ್ಡಲಾಗಿರುವ ಮರಗಳ ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವ ಬದಲು ಮರಗಳ ಅರ್ಧ ಭಾಗವನ್ನೇ ಕಡಿದುಹಾಕಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಒಣಗಿಹೋಗಿರುವ ಮರಗಳನ್ನು ಕತ್ತರಿಸುವುದಕ್ಕೆ ವರ್ಷಾನುಗಟ್ಟಲೇ ಸತಾಯಿಸುವ ಅರಣ್ಯ ಇಲಾಖೆ ಸಿಬ್ಬಂದಿ, ಇದೀಗ ರಾತ್ರೋರಾತ್ರಿ ಮರಗಳ ಮಾರಣಹೋಮ ನಡೆಸಿದ್ದಾರೆ. ಮರಗಳನ್ನು ಕಡಿದುಹಾಕಿರುವ ಬಗ್ಗೆ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಯಾರೂ ಹೊಣೆ ಹೊತ್ತುಕೊಳ್ಳದೇ ಜಾರಿಕೊಳ್ಳುತ್ತಿದ್ದಾರೆ.
ಒಂದು ಪಥಕಷ್ಟೇ ಡಾಂಬರು ಹಾಕಲಾಗಿದೆ
ನರೇಂದ್ರ ಮೋದಿ ರೋಡ್ ಶೋ ನಡೆಸಲಿರುವ ರಸ್ತೆಯನ್ನು ಸ್ವಚ್ಛಗೊಳಿಸಲಾಗಿದೆ. ವಿಭಜಕಕ್ಕೆ ಬಣ್ಣ ಬಳಿದು ರಸ್ತೆಯ ಎರಡೂ ಬದಿಗಳಲ್ಲೂ ಬ್ಯಾರಿಕೇಡ್ ಅಳವಡಿಸುವುದರೊಂದಿಗೆ ಜಿಲ್ಲಾಡಳಿತ ಬಿರುಸಿನ ತಯಾರಿ ನಡೆಸಿದೆ. ರೋಡ್ ಶೋ ನಡೆಯಲಿರುವ ಹೆದ್ದಾರಿಯ ಒಂದು ಪಥದ ರಸ್ತೆಗೆ ಡಾಂಬರು ಹಾಕಲಾಗಿದೆ.
ಇನ್ನೊಂದು ರಸ್ತೆಯನ್ನು ಯಥಾಸ್ಥಿತಿಯಲ್ಲೇ ಉಳಿಸಲಾಗಿದೆ. ಇದರಿಂದ ಒಂದು ಪಥ ಡಾಂಬರು ಹೊಳಪಿನಿಂದ ಕೂಡಿದ್ದರೆ, ಮತ್ತೊಂದು ಪಥ ಡಾಂಬರನ್ನೇ ಕಾಣದೆ ಒಣಗಿದೆ. ರೋಡ್ ಶೋಗೆ ಸಹಸ್ರಾರು ಜನರು ಭಾಗವಹಿಸುವುದರಿಂದ ಜಿಲ್ಲಾಡಳಿತ ಅಗತ್ಯವಾಗಿ ಕೈಗೊಳ್ಳಬೇಕಾದ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಸಜ್ಜಾಗಿದೆ.












Click it and Unblock the Notifications