ಸೆ.30. ರಿಂದ ಮಂಡ್ಯ ಮೈ ಶುಗರ್ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಸಚಿವ ಕೆ.ಗೋಪಾಲಯ್ಯ
ಮಂಡ್ಯ, ಸೆಪ್ಟೆಂಬರ್ 17: ಜಿಲ್ಲೆಯ ಜನರ ಜೀವನಾಡಿ ಮೈ ಶುಗರ್ ಸಕ್ಕರೆ ಕಾರ್ಖಾನೆ ಪುನಾರಂಭ ಕುರಿತು ಸರಕಾರ ನುಡಿದಂತೆ ನಡೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಈಗಾಗಲೇ ಕಾರ್ಖಾನೆ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಗಿದೆ. ಮೊದಲ ಬಾಯ್ಲರ್ ಈಗಾಗಲೇ ಆರಂಭಗೊಂಡಿದ್ದು ಎರಡನೇ ಬಾಯ್ಲರ್ ಗೆ ಇದೇ 19 ರಂದು ಚಾಲನೆ ನೀಡಲಾಗುವುದು. ಇದೇ 30 ರಿಂದ ರೈತರಿಂದ ಸಂಪೂರ್ಣ ಕಬ್ಬು ಖರೀದಿಸಿ ಅರೆಯುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಕಬ್ಬು ಖರೀದಿ ತಡವಾದ ಹಿನ್ನೆಲೆಯಲ್ಲಿ ಬೇರೆ ಕಾರ್ಖಾನೆಯವರು ಈಗಾಗಲೇ ಒಂದು ಲಕ್ಷ ಟನ್ ಕಬ್ಬು ಖರೀದಿ ಮಾಡಿದ್ದಾರೆ. ನಮ್ಮ ಕಾರ್ಖಾನೆಯಿಂದ ಶೇ. ನೂರರಷ್ಟು ಕಬ್ಬು ಖರೀದಿ ಮಾಡಲಾಗುವುದು. ಜಿಲ್ಲೆಯ ಎಲ್ಲಾ ತಾಲ್ಲೂಕಿನ ರೈತರ ಕಬ್ನು ಖರೀದಿ ಮಾಡಲಾಗುತ್ತದೆ. ಕಾರ್ಖಾನೆ ಆರಂಭ ಕುರಿತು ಮಾತುಕೊಟ್ಟಂತೆ ನಡೆದುಕೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಸೆಪ್ಟೆಂವರ್ 30 ರ ನಂತರ ಕಾರ್ಖಾನೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಗುವುದು. ಶಾಶ್ವತವಾಗಿ ಈ ಕಾರ್ಖಾನೆ ನಡೆಯಬೇಕೆನ್ನುವುದು ಸರಕಾರದ ಆಶಯವಾಗಿದೆ ಎಂದರು.

ಸೆಪ್ಟೆಂಬರ್ 1ರಂದು ಸಾಂಕೇತಿಕ ಚಾಲನೆ
ಜಿಲ್ಲೆಯ ಜೀವನಾಡಿ, ಹಾಗೂ ಸರಕಾರು ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾದ ಮೈಷುಗರ್ ಕಾರ್ಖಾನೆಗೆ ಕಬ್ಬಿನ ಕಂತೆ ಹಾಕುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಗುರುವಾರ ಚಾಲನೆ ನೀಡಿದ್ದರು. ರಾಜ್ಯದ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಷುಗರ್, ಇದು ರೈತರ ಬದುಕಿನ ಜೀವನಾಡಿಯಾಗಿದ್ದು, ಲಾಭದಾಯಕವಾಗಿ ನಡೆಯುವಂತಾಗಬೇಕು. ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಅವರ ಇಚ್ಚೆಯಂತೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ನಡೆಯಲಿದೆ ಎಂದು ಭರವಸೆ ನೀಡಿದ್ದರು.
ಸದ್ಯ 4 ಸಾವಿರ ಟನ್ ಕಬ್ಬು ಅರೆಯುವ ನಿಟ್ಟಿನಲ್ಲಿ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಲಾಗಿದೆ. ಇನ್ನೂ ಸಣ್ಣ ಪುಟ್ಟ ಸಮಸ್ಯೆಗಳು ಇವೆ. ಪ್ರಾಯೋಗಿಕವಾಗಿ ಕಾರ್ಖಾನೆಯನ್ನು ಚಾಲನೆ ಮಾಡಲಾಗಿದೆ. ಇದರಿಂದ ಎಲ್ಲೆಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೋ ಅವೆಲ್ಲವನ್ನೂ ಪರಿಹರಿಸಿ ಮುನ್ನಡೆಸಲಾಗುವುದು. ಎಂಟತ್ತು ದಿನಗಳ ನಂತರ ಮುಖ್ಯಮಂತ್ರಿಗಳನ್ನು ಕರೆಯಿಸಿ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಬಳಿಕ ಯಾವುದೇ ಕಾರಣಕ್ಕೂ ನಿಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್, ಜಿಲ್ಲಾಧಿಕಾರಿ ಎಸ್.ಅಶ್ವತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications