ಮಂಡ್ಯ; ಇದೇ ವರ್ಷ ಮೈ ಷುಗರ್ ಕಾರ್ಖಾನೆ ಪುನರಾರಂಭ
ಮಂಡ್ಯ, ಫೆಬ್ರವರಿ 23; "2019-20ರಿಂದ ಸ್ಥಗಿತಗೊಂಡಿದ್ದ ಮೈ ಷುಗರ್ ಕಾರ್ಖಾನೆಯನ್ನು ಇದೇ ವರ್ಷದಲ್ಲಿ ಪುನರಾರಂಭಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯ ಸರ್ಕಾರ ಮಂಡ್ಯ ರೈತರ ಪರವಾಗಿದೆ" ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಹೇಳಿದರು.
ಬುಧವಾರ ಸಚಿವರು ಮಂಡ್ಯ ನಗರದ ಮೈ ಷುಗರ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಜಿಲ್ಲಾಧಿಕಾರಿಗಳಾದ ಎಸ್. ಅಶ್ವತಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಖಾನೆಗೆ ಭೇಟಿ ಬಳಿಕ ಮಾತನಾಡಿದ ಸಚಿವರು, "ತನ್ನದೇ ಇತಿಹಾಸವನ್ನು ಹೊಂದಿರುವ ಮೈ ಷುಗರ್ ಕಂಪನಿಯನ್ನು ಪುನಃಶ್ಚೇತನಗೊಳಿಸುವಲ್ಲಿ ಸರ್ಕಾರ ಮಂಡ್ಯ ಜನತೆಯ ಪರವಾಗಿಯೇ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ರೈತರಿಗೆ ಯಾವುದೇ ಆತಂಕ ಬೇಡ" ಎಂದರು.

"ಈ ಸಂಬಂಧ ಈಗಾಗಲೇ ತಾಂತ್ರಿಕ ಸಮಿತಿ ಹಾಗೂ ಆರ್ಥಿಕ ಸಮಿಯೊಂದನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಮೈ ಷುಗರ್ ಕಂಪನಿ ಬಂದ್ ಆಗದಂತೆ ಕಂಪನಿಯನ್ನು ಪ್ರಾರಂಭ ಮಾಡಲಾಗುವುದು" ಎಂದು ಭರವಸೆ ನೀಡಿದರು.
"ಮೈ ಶುಗರ್ ಕಂಪನಿಯ ಮತ್ತದೇ ಹಿಂದಿನ ವೈಭವವನ್ನು ನೋಡುವುದು ನಮ್ಮೆಲ್ಲರ ಗುರಿಯಾಗಿದ್ದು, ಕಾರ್ಖಾನೆಯ ಬಗ್ಗೆ ಒಳ್ಳೆಯ ಸುದ್ದಿಯನ್ನೇ ನಿಮಗೆ ನೀಡುತ್ತೇನೆ. ರಾಜ್ಯದಲ್ಲಿ ಇರುವ ಇತರೆ ಸರ್ಕಾರಿ ಕಾರ್ಖಾನೆಗಳನ್ನೂ ಕೂಡ ಉಳಿಸಿಕೊಳ್ಳುವಲ್ಲಿ ಶ್ರಮಿಸುತ್ತೇನೆ" ಎಂದು ಸಚಿವರು ಹೇಳಿದರು.
"ಮೈಸೂರು ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಸಂಬಂಧ ಆಡಳಿತ, ಹಣಕಾಸು ಹಾಗೂ ತಾಂತ್ರಿಕ ವರದಿಯನ್ನು ನಿಗದಿತ ಸಮಯದೊಳಗೆ ಪಡೆದು ಅದರ ಆಧಾರದ ಮೇಲೆ ಶೀಘ್ರದಲ್ಲಿಯೇ ಕಾರ್ಖಾನೆಯನ್ನು ಪುನರಾರಂಭಗೊಳಿಸಲಾಗುವುದು" ಎಂದು ತಿಳಿಸಿದರು.
"ಸಕ್ಕರೆ ಕಾರ್ಖಾನೆ ಸಂಬಂಧ ಮುಖ್ಯಮಂತ್ರಿಗಳ ಆದೇಶದಂತೆ ಕಾರ್ಯನಿರ್ವಹಿಸಲು ಹಾಗೂ ಕಾರ್ಯನಿರ್ವಹಣೆಯಲ್ಲಿ ವಿಳಂಬವಾಗದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಲಾಗುವುದು ಖಾಸಗೀಕರಣದ ವಿಚಾರವಾಗಿ ಮಂಡ್ಯದ ರೈತರು ಚಿಂತಿಸುವಂತಿಲ್ಲ" ಎಂದರು.
"ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ಥಿಗೊಳಿಸಲು ತುರ್ತು ಅಗತ್ಯವಿರುವ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ" ಎಂದು ಸಚಿವರು ಹೇಳಿದರು.
ನಷ್ಟಕ್ಕೆ ಸಿಲುಕಿದ ಕಾರ್ಖಾನೆ; ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಯುವ ಜನರ ಜೀವನಾಡಿಯಾಗಿತ್ತು. ನಷ್ಟದ ಹಳಿಗೆ ಇಳಿದ ಕಾರ್ಖನೆಯನ್ನು ಲಾಭಕ್ಕೆ ತರಲು ಸರ್ಕಾರಗಳು ಮಾಡಿದ ಪ್ರಯತ್ನ ಫಲಕೊಡಲಿಲ್ಲ.
ಸುಮಾರು ಮೂರು ವರ್ಷದಿಂದ ಕಾರ್ಖಾನೆಗೆ ಬೀಗ ಜಡಿಯಲಾಗಿದೆ. ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಲು ರೈತರು ವಿರೋಧ ಮಾಡಿದ್ದರು. ಸರ್ಕಾರವೇ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರ ನಿಯೋಗದೊಂದಿಗೆ ಎಚ್. ಡಿ. ಕುಮಾರಸ್ವಾಮಿ ಯಡಿಯೂರಪ್ಪ ಭೇಟಿ ಮಾಡಿದ್ದರು. ಆಗ ಖಾಸಗಿಯವರಿಗೆ ನೀಡುವುದಿಲ್ಲ ಎಂಬ ಭರವಸೆ ಸಿಕ್ಕಿತ್ತು.
2008ರ ಬಳಿಕ ಸರ್ಕಾರಗಳು ಕಾರ್ಖಾನೆ ಪುನಶ್ಚೇತನಕ್ಕೆ 520 ಕೋಟಿ ಹಣ ನೀಡಿವೆ. ಆದರೂ ಸಹ ಕಾರ್ಖಾನೆ ಸುಮಾರು 400 ಕೋಟಿ ನಷ್ಟದಲ್ಲಿದೆ. ಈಗ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕಾರ್ಖಾನೆ ಪುನಃ ಆರಂಭಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇದೆ.
ವಿಧಾನಸಭೆ ಅಧಿವೇಶನದಲ್ಲಿಯೂ ಕಾರ್ಖಾನೆ ಪುನಶ್ಚೇತನದ ಬಗ್ಗೆ ಚರ್ಚೆ ನಡೆದಿತ್ತು. ಆಗ ವಿಧಾನ ಪರಿಷತ್ತಿನಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪರವಾಗಿ ಉತ್ತರ ನೀಡಿದ್ದ ಸಚಿವ ಮುರುಗೇಶ ನಿರಾಣಿ, "ಮೈ ಷುಗರ್ ಏಷ್ಯಾದ ಮೊದಲ ಸಕ್ಕರೆ ಕಾರ್ಖನೆ. ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಸಭೆ ಮಾಡಿ ತೀರ್ಮಾನ ಮಾಡೋಣ ಎಂದಿದ್ದರು. ಆದರೆ ಸಭೆ ಆಗಿಲ್ಲ" ಎಂದು ಹೇಳಿದ್ದರು.
"ಈಗ ಖಾಸಗಿ ಅವರು ಲೀಸ್ ಪಡೆದ ಬೇರೆ ಬೇರೆ ಕಾರ್ಖನೆ ಚೆನ್ನಾಗಿ ನಡೆಯುತ್ತಿದೆ. ಸರ್ಕಾರವೂ ಖಾಸಗಿಯೋ ಒಟ್ಟಿನಲ್ಲಿ ಕಾರ್ಖನೆ ಚೆನ್ನಾಗಿ ನಡೆದು ರೈತರಿಗೆ ಅನುಕೂಲವಾಗಬೇಕು" ಎಂದು ಸಚಿವರು ತಿಳಿಸಿದ್ದರು.












Click it and Unblock the Notifications