ಎರಡು ಸಿಟಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಾಗಿ ಹತ್ತಾರು ಹಳ್ಳಿಗಳಿಗೆ ತೊಂದರೆ ಸಲ್ಲದು: ಸುಮಲತಾ ಆಕ್ರೋಶ
ಮಂಡ್ಯ, ಸೆಪ್ಟೆಂಬರ್ 3 : ಹೆದ್ದಾರಿ ನಿರ್ಮಾಣದಿಂದಾಗಿ ಲಕ್ಷಾಂತರ ಮಂದಿಗೆ ಅನುಕೂಲವಾಗಬಹುದು. ಆದರೆ ಇದರೊಟ್ಟಿಗೆ ರೈತರ ಬದುಕೂ ಹಸನಾಗಬೇಕು. ಈ ನಿಟ್ಟಿನಲ್ಲಿ ಕಾಮಗಾರಿ ನಡೆಯಬೇಕು ಎಂಬುದು ನನ್ನ ಉದ್ದೇಶವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದರು.
ಭಾರಿ ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಆಗಿರುವ ಲೋಪದೋಷಗಳ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.
ಪ್ರತಾಪ್ ಸಿಂಹ ಏನ್ ದೊಡ್ಡ ಎಂಜಿನಿಯರಾ? ಅವರಿಂದ ಕಲಿಯಬೇಕಾ?: ಕುಮಾರಸ್ವಾಮಿ ವ್ಯಂಗ್ಯ
ಸರ್ವೀಸ್ ರಸ್ತೆ ನಿರ್ಮಾಣವಾಗಿ ಒಂದು ತಿಂಗಳಲ್ಲಿ ದೊಡ್ಡ ಬಿರುಕು ಬಿಟ್ಟಿ, ಭಾರಿ ವಾಹನ ಇನ್ನೂ ಓಡಾಡುತ್ತಿಲ್ಲ, ಇನ್ನೂ ಮಳೆ ಬರುವ ಸಾಧ್ಯತೆಯಿದೆ. ಆದರೆ ಈಗಲೇ ರಸ್ತೆಯಲ್ಲಿ ಇಂತಹ ಬಿರುಕು ಬಿಟ್ಟಿದೆ,ಲ ಸ್ಲ್ಯಾಬ್ ಕೂಡ ಕುಸಿದಿದೆ. ಉದ್ಘಾಟನೆಯಾದ ರಸ್ತೆ ಈ ಪರಿಸ್ಥಿತಿಯಾದರೆ ಮುಂದಿನ ಜನವಾಬ್ದಾರಿ ಯಾರದು. ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ನಂತರ ಈ ರಸ್ತೆಯನ್ನು ಉದ್ಘಾಟನೆ ಮಾಡಲಿ ಎಂದು ಸುಮಲತಾ ತಿಳಿಸಿದರು.
ಮದ್ದೂರಿನ ನಿಡಘಟ್ಟದಿಂದ ಶ್ರೀರಂಗಪಟ್ಟಣದ ಗಡೀ ಭಾಗದವರೆವಿಗೂ ಸುಮಾರು 16 ರಿಂದ 20 ಕಡೆಗಳಲ್ಲಿ ನ್ಯೂನತೆಗಳು ಕಂಡುಬಂದಿವೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ಪರಿಶೀಲನೆ ನಡೆಸುವಂತೆ ಮಾಡಿದ್ದ ಮನವಿಗೆ ಸ್ಪಂಧಿಸಿದ ಸಚಿವರು ಭೇಟಿ ನೀಡಿದ್ದಾರೆ. ಅವರಿಗೆ ಎಲ್ಲ ಸಮಸ್ಯೆಗಳ ಬಗ್ಗೆಯೂ ತಿಳಿಸಿದ್ದೇನೆ. ನಾನು ತಿಳಿಸುವುದಕ್ಕಿಂತಲೂ ಹೆಚ್ಚಾಗಿ ಜನರೇ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.
ರೈತಾಪಿ ಜನ ತಮ್ಮ ಮನೆಗಳು, ಹೊಲ ಗದ್ದೆಗಳಿಗೆ ಹೋಗುವುದು, ಜಾನುವಾರುಗಳನ್ನು ಕರೆದೊಯ್ಯುವುದಕ್ಕೆ ಸರಿಯಾದ ಸರ್ವೀಸ್ ರಸ್ತೆ ಇಲ್ಲ. ಅಲ್ಲಿ ಫುಟ್ಪಾತ್ ನಿರ್ಮಿಸಿಲ್ಲ. ದೊಡ್ಡ ಪ್ರಮಾಣದ ಚರಂಡಿಗಳನ್ನು ನಿರ್ಮಾಣ ಮಾಡಿಲ್ಲ. ತೇಪೆ ಸಾರಿಸುವಂತಹ ಕೆಲಸ ಮಾಡಿದ್ದಾರೆ. ಇದರಿಂದಾಗಿ ನೀರು ಸರಾಗವಾಗಿ ಚರಂಡಿ ಮೂಲಕ ಸಾಗದೆ ರಸ್ತೆಯಲ್ಲೇ ಉಳಿಯುತ್ತದೆ. ಜೊತೆಗೆ ಅಕ್ಕ ಪಕ್ಕದ ಜಮೀನುಗಳಿಗೂ ನುಗ್ಗಿ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ ಎಂದು ಆರೋಪಿಸಿದರು.
ಕೆಳ ಸೇತುವೆಗಳೇ ಸರಿಯಾಗಿಲ್ಲ
ಮದ್ದೂರಿನಲ್ಲಿ ಮೇಲು ಸೇತುವೆ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಮದ್ದೂರಿನಿಂದ ಮಳವಳ್ಳಿ-ಕೊಳ್ಳೇಗಾಲ ಕಡೆಗೆ ಹೋಗುವುದು ಹೇಗೆ ಎಂಬುದರ ಬಗ್ಗೆ ಯೋಜನೆ ರೂಪಿಸಿಲ್ಲ. ದೂರದವರೆಗೆ ಸಾಗಿ ಮತ್ತೆ ವಾಪಸ್ಸು ಬರುವಂತಾಗಿದೆ. ಇಂತಹ ಅವೈಜ್ಞಾನಿಕ ಕಾಮಗಾರಿಯನ್ನು ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಕೆಳ ಸೇತುವೆಗಳೇ ಸರಿಯಾಗಿಲ್ಲ. ಮತ್ತೆ ಕೆಲವೆಡೆ ಮೇಲುಸೇತುವೆ ಗೋಡೆಗಳಿಂದಾಗಿ ನೀರು ನಿಂತು ಪಜೀತಿಯಾಗುತ್ತಿದೆ. ಇಂತಹ ಹಲವಾರು ಸಮಸ್ಯೆಗಳು ಹೆದ್ದಾರಿಯಲ್ಲಿ ನಮಗೆ ಕಾಣಸಿಗುತ್ತವೆ ಎಂದು ವಿವರಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು, ಅವೈಜ್ಞಾನಿಕ ಕಾಮಗಾರಿಯೇ ಕಾರಣ: ಸಂಸದೆ ಸುಮಲತಾ
ಜನರ ಸಮಸ್ಯೆಗಳು ದೂರಾಗಿಸುವ ಪ್ರಯತ್ನ
ಸಮಸ್ಯೆಗಳ ಬಗ್ಗೆ ನಾವು ತೆರೆದಿಡುವ ಪ್ರಯತ್ನ ಮಾಡಿದ್ದೇವೆ. ಅದು ಸಾಮಾಜಿಕ ಜಾಲತಾಣದಲ್ಲೂ ಮಾಡಿದ್ದೇವೆ. ಜನರ ಬಳಿ ಬಂದೇ ಜನರ ಸಮಸ್ಯೆ ಬಗೆಹರಿಸಬೇಕೆಂದೇನೂ ಇಲ್ಲ. ಒಟ್ಟಾರೆ ಜನರ ಸಮಸ್ಯೆಗಳು ದೂರಾಗಿ ಉತ್ತಮ ಬದುಕು ರೂಪಿಸುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಹಾಕಿದ್ದೇವೆ. ವಿರೋಧಿಗಳ ಟೀಕೆಗಳಿಗೆ ಕಿವಿಗೊಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಳೆಯ ಅವಾಂತರದಿಂದ ಸಮಸ್ಯೆ ಶುರು
ಬೆಂಗಳೂರಿನಿಂದ ಮೈಸೂರಿಗೆ ತೆರಳಲು 3 ಗಂಟೆಗಳ ಅವಧಿ ಬೇಕಿತ್ತು. ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಕೇವಲ 1.15 ಗಂಟೆಯಲ್ಲಿ ಹೋಗಬಹುದು. ಒಂದುಮುಕ್ಕಾಲು ಗಂಟೆಗಳ ಕಾಲ ಉಳಿತಾಯವಾಗಲಿದೆ. ಇದು ಒಳ್ಳೆಯ ಕೆಲಸವಲ್ಲವೇ ಎಂದು ಪ್ರಶ್ನಿಸಿದ ಅವರು, ವರ್ಷಪೂರ್ತ ಸುರಿಯುವ ಮಳೆ ಕೇವಲ ಎರಡೇ ಗಂಟೆಯಲ್ಲಿ ಬಂದರೆ ಏನು ಮಾಡಲು ಸಾಧ್ಯ? ಮಳೆಯ ಅವಾಂತರದಿಂದ ಸಮಸ್ಯೆ ಶುರುವಾಗಿದೆ. ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಅಷ್ಟೆ ಎಂದು ಹೇಳಿದರು.
ನಿತಿನ್ ಗಡ್ಕರಿ ಬೆಂಗಳೂರಿಗೆ ಬಂದಾಗ ಸಮಸ್ಯೆಗೆ ಮನವರಿಕೆ
ಮುಖ್ಯ ಹೆದ್ದಾರಿ ಕಾಮಗಾರಿ ತುಂಬಾ ಚೆನ್ನಾಗಿದೆ. ನಾನು ಈ ಮುನ್ನವೂ ಪರಿಶೀಲನೆ ಮಾಡಿದ್ದೇನೆ. ಸರ್ವೀಸ್ ರಸ್ತೆಗಳಲ್ಲಿ ಸ್ವಲ್ಪ ತೊಂದರೆಗಳು ಕಾಣಿಸಿಕೊಂಡಿವೆ. ಇನ್ನು ಹೆದ್ದಾರಿ ಕಾಮಗಾರಿ ಪ್ರಾರಂಭವಾಗುವ ಮುನ್ನವೇ ಎಲ್ಲೆಲ್ಲಿ ಮೇಲು ಸೇತುವೆಗಳನ್ನು ಮಾಡಬೇಕು ಎಂಬುದರ ಬಗ್ಗೆಯೂ ಯೋಜನೆ ರೂಪಿಸಲಾಗಿತ್ತು. ನಂತರ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ ಮತ್ತಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಈಗ ಇನ್ನೂ ಐದಾರು ಕಡೆಗಳಲ್ಲಿ ಮೇಲು ಸೇತುವೆಯ ಅಗತ್ಯತೆ ಇದೆ ಎಂದು ಜನರು ಒತ್ತಡ ಹಾಕುತ್ತಿದ್ದಾರೆ. ಏನೇ ಬದಲಾವಣೆ ಮಾಡಿದರೂ ಕೇಂದ್ರ ಸರಕಾರದ ಅನುಮತಿ ಪಡೆಯಬೇಕಾಗಿರುತ್ತದೆ. ಸೆಪ್ಟೆಂಬರ್ 5, 6, 7ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರಿಗೆ ಬರುವವರಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಟ್ಟು ಎಲ್ಲವನ್ನೂ ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು