ಮಂಡ್ಯದಲ್ಲಿ ಹೊಸ ಮನೆ: ಎಚ್ಡಿಕೆ ಹೇಳಿಕೆಗೆ ಸಂಸದೆ ಸುಮಲತಾ ತಿರುಗೇಟು
ಮಂಡ್ಯ, ಸೆಪ್ಟೆಂಬರ್ 1: ನಟ ಅಂಬರೀಶ್ ತವರು ನೆಲವಾದ ಮಂಡ್ಯ ಜಿಲ್ಲೆಯಲ್ಲಿ ಮನೆ ನಿರ್ಮಾಣ ಮಾಡಲು ಸಂಸದೆ ಸುಮಲತಾ ಅಂಬರೀಶ್ ಮುಂದಾಗಿದ್ದಾರೆ. ಮನೆ ನಿರ್ಮಾಣದ ಗುದ್ದಲಿ ಪೂಜೆ ಬುಧವಾರ ನಡೆಯಿತು.
ಈ ಹಿಂದೆ ಲೋಕಸಭಾ ಚುನಾವಣೆ ಗೆದ್ದ ವೇಳೆ ಸುಮಲಾತಾ ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡಿ, ಇಲ್ಲೇ ಇರುತ್ತೇನೆ ಎಂದು ಹೇಳಿದ್ದರು. ಅಂದು ಹೇಳಿದಂತೆ ಇಂದು ಮಂಡ್ಯದಲ್ಲಿ ಮನೆ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದರು.
ಇನ್ನು ಮನೆ ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ ಪುತ್ರ ಅಭಿಷೇಕ್ ಅಂಬರೀಶ್, ನಟರಾದ ದರ್ಶನ್, ಯಶ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಭಾಗಿಯಾಗಿದ್ದರು.
ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು
"ಅವರು ಏನು ಬೇಕಾದರು ಮಾತನಾಡಲಿ, ಅವರು ಹೃದಯವಂತರು ಹೃದಯವಂತಿಕೆ ಇರುವವರು. ಮನೆ ಮಾಡುವ ಸಂದರ್ಭಗಳಲ್ಲಿ ಒಳ್ಳೆಯ ಹಾರೈಕೆ ಮಾಡಿದರೆ ಸಂತೋಷ ಪಡುತ್ತಿದ್ದೆ. ಬೇರೆ ಮಾತನಾಡಿದ್ದರೆ ನಾನು ಪ್ರತಿಕ್ರಿಯೆ ನೀಡಲ್ಲ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಮನೆ ನಿರ್ಮಿಸುವ ವಿಚಾರವಾಗಿ ಎಚ್ಡಿಕೆ ಹೇಳಿಕೆಗೆ ಮದ್ದೂರು ತಾಲೂಕಿನ ಕೆ. ಕೋಡಿಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಸುಮಲತಾ ಅಂಬರೀಶ್, "ಅವರು ಮಾತನಾಡಿರುವ ಅರ್ಥ ಏನು ಅಂತಾ ಗೊತ್ತಿಲ್ಲ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಅವರೇ ಹೇಳಬೇಕು. ನಾನು ಮಾತುಗಳಲ್ಲಿ ಮಾತ್ರ ಅಲ್ಲ ಕೆಲಸ ಮಾಡಿ ತೋರಿಸುತ್ತೇನೆ. ಅವರು ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರೆ ಧನ್ಯವಾದ ಹೇಳುತ್ತೇನೆ. ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು," ಎಂದು ಟಾಂಗ್ ನೀಡಿದರು.
ಎಚ್ಡಿಕೆ
ಹೇಳಿಕೆ
ಏನು?
"ಮಂಡ್ಯದಲ್ಲಿ
ಸಂಸದೆ
ಸುಮಲತಾ
ಅವರು
ಮನೆ
ಮಾಡಿದರೆ
ಸಂತೋಷ.
ಇದರಿಂದ
ನಮ್ಮ
ಮೇಲಿನ
ಒತ್ತಡ
ಕಡಿಮೆ
ಆಗುತ್ತದೆ.
ಮಂಡ್ಯದ
ಜನರ
ಸಮಸ್ಯೆ
ಕೇಳಿ
ಅವರು
ಬಗೆಹರಿಸಲಿ,"
ಎಂದಿದ್ದಾರೆ.
ಬಳಿಕ ಪತ್ರಕರ್ತರು ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಮನೆ ಮಾಡುವ ವಿಚಾರವಾಗಿ ಪ್ರಶ್ನೆ ಮಾಡಿದಾಗ, "ಅದರ ಅಗತ್ಯವೇನೂ ಇಲ್ಲ. ಕ್ಷೇತ್ರದಲ್ಲಿ ಮನೆ ಮಾಡುವುದೇ ಮುಖ್ಯವಲ್ಲ. ಮನೆ ಮಾಡುವುದರಿಂದಲೇ ಎಲ್ಲ ಸಮಸ್ಯೆ ಬಗೆಹರಿಯುವುದಿಲ್ಲ," ಎಂದು ಪರೋಕ್ಷವಾಗಿ ಕುಟುಕಿದರು.
"ಕ್ಷೇತ್ರದಲ್ಲಿ ಮನೆ ಮಾಡಿದ ಬಳಿಕ ಮನೆಯೊಳಗೆ ಕುಳಿತರೆ ಪ್ರಯೋಜನ ಆಗಲ್ಲ. ನಾನು ರಾಮನಗರ, ಚನ್ನಪಟ್ಟಣದಲ್ಲಿ ಮನೆ ಮಾಡಿದ್ದೀನಾ? ಸಾ.ರಾ. ಮಹೇಶ್ ಕೂಡ ಕೆ.ಆರ್. ನಗರದಲ್ಲಿ ಮನೆ ಮಾಡಿಲ್ಲ. ಆದರೂ ನಾವು ಜನರೊಂದಿಗೆ ಸಂಪರ್ಕದಲ್ಲಿದ್ದೇವೆ. ಜನರೊಂದಿಗೆ ಹೇಗೆ ಸಂಪರ್ಕದಲ್ಲಿ ಇರಬೇಕು ಎನ್ನುವುದು ನಮ್ಮ ಮೇಲೆಯೇ ಇದೆ," ಎಂದು ಅಭಿಪ್ರಾಯಪಟ್ಟರು.