ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ, ಇಲ್ಲೇ ಇರಲು ಬಂದಿಲ್ಲ- ಸಂಸದೆ ಸುಮಲತಾ
ರಾಜ್ಯ ರಾಜಕಾರಣಕ್ಕೆ ಬರಬೇಕು, ಚುನಾವಣೆಗೆ ನಿಲ್ಲಬೇಕು ಎನ್ನುವುದು ಅಷ್ಟು ಸುಲಭದ ವಿಚಾರ ಅಲ್ಲ. ಅದೊಂದು ದೊಡ್ಡ ನಿರ್ಧಾರ ಆಗುತ್ತದೆ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಲು ಇದು ಸಮಯವಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯ, ಮಾರ್ಚ್ 1: ನಾನು ಯಾವ ಪಕ್ಷ ಸೇರಬೇಕು, ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂಬ ಬಗ್ಗೆ ಮತ್ತೊಮ್ಮೆ ಜನಾಭಿಪ್ರಾಯ ಕೇಳುತ್ತೇನೆ. ಸಮಯ ಬಂದಾಗ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ಪಕ್ಷ ಸೇರ್ಪಡೆ ನಿಲುವನ್ನು ಸ್ಪಷ್ಟಪಡಿಸದೆ ಗೊಂದಲದಲ್ಲೇ ಉಳಿಸಿದ್ದಾರೆ.
ಮದ್ದೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಬರಬೇಕು, ಚುನಾವಣೆಗೆ ನಿಲ್ಲಬೇಕು ಎನ್ನುವುದು ಅಷ್ಟು ಸುಲಭದ ವಿಚಾರ ಅಲ್ಲ. ಅದೊಂದು ದೊಡ್ಡ ನಿರ್ಧಾರ ಆಗುತ್ತದೆ. ಚುನಾವಣೆಗೆ ಎಷ್ಟು ದಿನ ಎನ್ನುವುದು ಮುಖ್ಯವಲ್ಲ. ಗೆಲ್ಲಲು ಅನುಕೂಲಕರ ವಾತಾವರಣ ಎಷ್ಟಿದೆ ಎನ್ನುವುದು ಮುಖ್ಯ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಲು ಇದು ಸಮಯವಲ್ಲ. ಆ ಸಮಯ ಬಂದಾಗ ನಾನು ಎಲ್ಲರ ಸಮ್ಮುಖದಲ್ಲಿ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

ನಾನು ರಾಜಕೀಯಕ್ಕೆ ಬಂದಿರುವುದೇ ಒಂದು ಆಕಸ್ಮಿಕ. ನಾನು ಪೂರ್ಣ ಪ್ರಮಾಣದಲ್ಲಿ ಇಲ್ಲೇ ಇರಲು ಬಂದಿಲ್ಲ. ಚುನಾವಣೆಗೆ ನಿಲ್ಲುವ, ರಾಜಕೀಯ ಪಕ್ಷ ಸೇರುವ ಅಥವಾ ಸ್ವತಂತ್ರವಾಗಿ ಉಳಿಯುವ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದ ಸುಮಲತಾ, ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ನನಗೆ ಆಹ್ವಾನವಿದೆ. ಆ ಪಕ್ಷಗಳ ನಾಯಕರು ನನ್ನ ಜೊತೆ ಮಾತನಾಡಿದ್ದಾರೆ. ಯಾವ ಪಕ್ಷ ಸೇರಬೇಕೆಂಬ ಬಗ್ಗೆ ನಾನಿನ್ನೂ ನಿರ್ಧಾರ ಮಾಡಿಲ್ಲ ಎಂದರು.
ದಶಪಥ ಹೆದ್ದಾರಿ ಉದ್ಘಾಟನೆ ವೇಳೆ ಸಂಸದೆಯಾಗಿ ಪ್ರಧಾನಮಂತ್ರಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನಾನು ಕೆಲವು ವಿಚಾರದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದೇನೆ. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಪಕ್ಷ ಸೇರುವ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಾನು ಮತ್ತೊಮ್ಮೆ ಜನಾಭಿಪ್ರಾಯ ಕೇಳುತ್ತೇನೆ. ಒಂದು ನಿರ್ಧಾರ ತಗೊಂಡಾಗ ಅದಕ್ಕೆ ವಿರೋಧ ಇರೋದು ಸಾಮಾನ್ಯ. ಎಲ್ಲರ ಅಭಿಪ್ರಾಯವನ್ನೂ ಪಡೆಯುತ್ತೇನೆ. ನಂತರ ನನ್ನ ನಿರ್ಧಾರ ತಿಳಿಸುವುದಾಗಿ ಹೇಳಿದರು.
ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಮಾತನಾಡಿದ ಸುಮಲತಾ, ರವೀಂದ್ರ ಶ್ರೀಕಂಠಯ್ಯ ಅಹಂಕಾರ ತುಂಬಿದ ವ್ಯಕ್ತಿ ಹಾಗಾಗಿ ಅವರನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ, ಅವರು ಯಾರು ಯಾರನ್ನು ಭೇಟಿ ಮಾಡುತ್ತಾರೆ ಎಂದು ತಲೆಕೆಡಿಸಿಕೊಳ್ಳುವ ಬದಲು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ರವೀಂದ್ರಗೆ ತಿರುಗೇಟು ನೀಡಿದರು.
ರಸ್ತೆ ಗುದ್ದಲಿಪೂಜೆಗೆ ಹೋಗಿದ್ದ ವೇಳೆ ಜನರೇ ರವೀಂದ್ರ ಅವರನ್ನು ಗ್ರಾಮಸ್ಥರೇ ವಾಪಸ್ಸು ಕಳುಹಿಸಿದ್ದರು. ಇನ್ನು ಸಚ್ಚಿದಾನಂದ ಅವರ ಬಗ್ಗೆ ಮಾತನಾಡುವ ನೈತಿಕತೆಯಾದರೂ ಏನು ಎಂದು ಪ್ರಶ್ನಿಸಿದರು. ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಅವರು ಆ ಸ್ಥಾನಕ್ಕೆ ಹೋಗಲು ಅಂಬರೀಶ್ ಅವರ ಕೊಡುಗೆ ಏನು ಎನ್ನುವುದ ನೆನಪು ಮಾಡಿಕೊಳ್ಳಬೇಕು. ಅವರು ಯಾವ ಉದ್ದೇಶದಿಂದ ನನ್ನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕಯರ್ತರು ಭಾಗವಹಿಸಬಾರದು ಎಂದು ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.












Click it and Unblock the Notifications