N Chaluvaraya Swamy: ಸುಮಲತಾ ಜೆಡಿಎಸ್ ಪರ ನಿಂತರೆ ಅಂಬರೀಶ್ ಅವರನ್ನ ಮತ್ತೆ ಕಳೆದುಕೊಂಡಂತೆ- ಚಲುವರಾಯಸ್ವಾಮಿ
ಮಂಡ್ಯ ಏಪ್ರಿಲ್ 1: ಮಂಡ್ಯ ಲೋಕಸಭಾ ಚುನಾವಣೆ ಅಖಾಡ ರಂಗೇರುತ್ತಿದೆ. ಆರೋಪಗಳು ಪ್ರತ್ಯಾರೋಪಗಳು ಈಗಾಗಲೇ ಶುರುವಾಗಿದೆ. ಈ ನಡುವೆ ಮಾಜಿ ಸಿಎಂ ಹಾಗೂ ಮಂಡ್ಯದ ಮೈತ್ರಿ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ಅವರನ್ನು ಭೇಟಿ ಮಾಡಿರುವುದು ವಿಪಕ್ಷದ ಆಕ್ರೋಶಕ್ಕೆ ಗುರಿಯಾಗಿದೆ.
ಹೌದು.. ಎಚ್ಡಿ ಕುಮಾರಸ್ವಾಮಿ ಅವರು ಸುಮಲತಾ ಅವರನ್ನು ಭೇಟಿ ಮಾಡಿದ್ದಕ್ಕೆ ಸಚಿವ ಚಲುವರಾಯಸ್ವಾಮಿ ಟೀಕೆ ಮಾಡಿದ್ದಾರೆ. ಟಿವಿ9 ಸಂದರ್ಶನದ ವೇಳೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, 'ಮಂಡ್ಯದಲ್ಲಿ ಕಳೆದ ಬಾರಿ ಕಣ್ಣೀರು ಹಾಕಿಕೊಂಡು ಸಾಲ ಮನ್ನ ಮಾಡುತ್ತೇನೆಂದು ಮತಗಿಟ್ಟಿಸಿಕೊಂಡರು. ಆದರೆ ಅವರು ಕೊಟ್ಟ ಮಾತು ಉಳಿಸಿಕೊಂಡರಾ? ಮೈತ್ರಿ ಮಾಡಿಕೊಳ್ಳುವುದಿಲ್ಲ ಅಂದರು, ಆದರೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ್ರು. ಬಿಜೆಪಿ ಪಕ್ಷವನ್ನು ಬೈದಾಡಿಕೊಂಡು ಕಾಂಗ್ರೆಸ್ಗೆ ಬಂದರು ಸಿಎಂ ಆದರು. ಈಗ ಮತ್ತೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಅವರೆಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ?' ಎಂದು ಪ್ರಶ್ನೆ ಮಾಡಿದರು.

'ಎಣ್ಣೆ ಸೀಗೇಕಾಯಿ ತರ ಮಾತನಾಡಿ ಈಗ ಅಕ್ಕ ಅಂತ ಮಾತನಾಡುತ್ತಿದ್ದಾರೆ. ಒಂದು ವೇಳೆ ಗೆಲುವಿನ ಬಗ್ಗೆ ವಿಶ್ವಾಸ ಕುಮಾರಸ್ವಾಮಿ ಅವರಿಗೆ ಇದ್ದಿದ್ದರೆ ಅವರು ಸುಮಲತಾ ಅವರನ್ನು ಭೇಟಿ ಆಗುತ್ತಿರಲಿಲ್ಲ. ಅವರಿಗೆ ಸೋಲಿನ ಭೀತಿ ಇದೆ. ಅದಕ್ಕಾಗಿ ಅವರು ಸುಮಲತಾ ಅವರನ್ನು ಭೇಟಿ ಮಾಡಿದ್ದಾರೆ. ಸುಮಲತಾ ಅವರು ಆತ್ಮ ಸಾಕ್ಷಿಯಾಗಿ ನಿರ್ಧಾರ ತೆಗೆದುಕೊಳ್ಳಲಿ' ಎಂದು ಹೇಳಿದರು.
'ಕಳೆದ ಬಾರಿ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ಎಷ್ಟೇಲ್ಲಾ ಕೆಟ್ಟದಾಗಿ ಮಾತನಾಡಿ ಈಗ ಅಕ್ಕ ಅಂದರೆ ಅದನ್ನು ಸುಮಲತಾ ಅವರು ಯೋಚನೆ ಮಾಡಬೇಕು. ಸುಮಲತಾ ಅವರು ಅಷ್ಟೇಲ್ಲಾ ಮಾತನಾಡಿದವರ ಪರ ನಿಂತುಕೊಂಡರೆ ಒಂದು ಸಲ ನಾವು ಈಗಾಗಲೇ ಅಂಬರೀಶ್ ಅವರನ್ನು ಕಳೆದುಕೊಂಡಿದ್ದೇವೆ. ಈಗ ಎರಡನೇ ಸಲ ನಾವು ಅಂಬರೀಶ್ ಅವರನ್ನು ಕಳೆದುಕೊಂಡಂತಾಗುತ್ತದೆ' ಎಂದು ಚಲುವರಾಯಸ್ವಾಮಿ ಅವರು ಹೇಳಿದ್ದಾರೆ.

ಸುಮಲತಾ ಅವರು ಜೆಡಿಎಸ್ಗೆ ಬೆಂಬಲಿಸಿದರೆ ಅಂಬರೀಶ್ ಅವರನ್ನು ನಾವು ಮತ್ತೊಮ್ಮೆ ಕಳೆದುಕೊಂಡಂತೆ, ಹೀಗಾಗಿ ಸುಮಲತಾ ಅವರು ಆತ್ಮ ಸಾಕ್ಷಿಯಾಗಿ ನಿರ್ಧಾರ ತೆಗೆದುಕೊಳ್ಳಲಿ. ನಮಗೆ ಬೆಂಬಲ ನೀಡಲಿ ಎಂದು ಅವರು ಕಿವಿ ಮಾತು ಹೇಳಿದ್ದಾರೆ.
ಸುಮಲತಾ ಸಭೆ
ಕಳೆದ ದಿನ ಸಂಸದೆ ಸುಮಲತಾ ಅವರು ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಲ್ಲಿ ಮಂಡ್ಯ ಬೆಂಬಲಿಗರೊಂದಿಗೆ ಮಹತ್ವದ ಸಭೆ ನಡೆಸಿದರು. ಎಲ್ಲರ ಅಭಿಪ್ರಾಯ ತೆಗೆದುಕೊಂಡ ಅವರು, ತಮ್ಮ ಮನೆ ಮುಂದೆ ನೆರದಿದ್ದ ನೂರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ಏಪ್ರಿಲ್ 3ರಂದು ಮಂಡ್ಯಕ್ಕೆ ಬರುತ್ಥೇನೆ. ಜೊತೆಗೆ ಅಲ್ಲಿಯೇ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದರು. ಹೀಗಾಗಿ ಸುಮಲತಾ ಅವರ ಮುಂದಿನ ನಡೆ ಭಾರೀ ಕುತೂಹಲವನ್ನು ಮೂಡಿಸಿದೆ.
ಸುಮಲತಾ ಮುಂದಿನ ನಡೆ ಏನು?
ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ಸೂಚಿವ ವೇಳೆ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರಲಿಲ್ಲ. ಯಾವಾಗ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತೋ ಮೂರು ಕ್ಷೇತ್ರಗಳಿಂದ ತಮ್ಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವುದಾಗಿ ಒಪ್ಪಂದ ಮಾಡಿಕೊಂಡಿತು. ಒಪ್ಪಂದಂತೆ ಬಿಜೆಪಿ ಕೋಲಾರ, ಮಂಡ್ಯ ಮತ್ತು ಹಾಸನ ಮೂರು ಕ್ಷೇತ್ರಗಳನ್ನು ಮೈತ್ರಿ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ.
ಮಂಡ್ಯದಿಂದ ಸ್ಪರ್ಧಿಸಲು ಸುಮಲತಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಬಿಜೆಪಿ ಟಿಕೆಟ್ ಅವರಿಗೆ ಸಿಗಲಿಲ್ಲ. ಬದಲಿಗೆ ಎಚ್ಡಿ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಒಟ್ಟುಗೂಡಿ ಕಾಂಗ್ರೆಸ್ ವಿರುದ್ಧ ಸೆಣಸಲಿವೆ.
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸುಮಲತಾ ಅವರ ಮುಂದಿನ ನಡೆ ಭಾರೀ ಕುತೂಹಲವನ್ನು ಮೂಡಿಸಿದೆ. ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸುಮಲತಾ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಸುಮಲತಾ ಮೈತ್ರಿ ಪಕ್ಷ ಅಂದರೆ ಎಚ್ಡಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡ್ತಾರಾ? ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications