ರೈತ ಮುಖಂಡ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ
ಮಂಡ್ಯ, ಫೆಬ್ರವರಿ 18: ರೈತ ಮುಖಂಡ, ಮೇಲುಕೋಟೆ ಕ್ಷೇತ್ರದ ಸರ್ವೋದಯ ಪಕ್ಷದ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯಕ್ರಿಯೆಯನ್ನು ಬುಧವಾರದಂದು ಕ್ಯಾತನಹಳ್ಳಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಪುತ್ರ ದರ್ಶನ್ ಹೇಳಿದ್ದಾರೆ.
ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ಪುಟ್ಟಣ್ಣಯ್ಯ ಅವರು ಎದೆ ನೋವಿನಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಮಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಕಸಬಾ ಹೋಬಳಿ ಕ್ಯಾತನಹಳ್ಳಿ ಗ್ರಾಮದ ಕೆ.ಎಸ್. ಶ್ರೀಕಂಠೇಗೌಡ ಹಾಗೂ ಶ್ರೀಮತಿ ಕೆ.ಎಸ್. ಶಾರದಮ್ಮ ದಂಪತಿಯ ಜೇಷ್ಠಪುತ್ರರಾಗಿ ದಿನಾಂಕ 23.12.1949ರಲ್ಲಿ ಜನಿಸಿದ ಕೆ.ಎಸ್. ಪುಟ್ಟಣ್ಣಯ್ಯ ಕರ್ನಾಟಕ ರೈತ ಸಂಘದ ಏಕೈಕ ಧೀಮಂತ ಹೋರಾಟಗಾರ, ಜನಪ್ರತಿನಿಧಿಯಾಗಿದ್ದರು.

ವಿದ್ಯಾಭ್ಯಾಸ : ಹುಟ್ಟೂರಿನಲ್ಲಿಯೇ ಎಸ್.ಎಸ್.ಎಲ್.ಸಿ.ಯನ್ನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮುಗಿಸಿದರು. ಮೈಸೂರಿನ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣ, ಮೈಸೂರಿನ ಡಿ. ಬನುಮಯ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.
ಈ ರೀತಿ ವಿದ್ಯಾರ್ಥಿಯಾಗಿದ್ದಾಗಲೇ ಹಳ್ಳಿಗಾಡುಗಳಲ್ಲಿ ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ಬಡ ಮಹಿಳೆಯರು ಅನುಭವಿಸುತ್ತಿದ್ದ ಯಾತನಮಯ ಜೀವನಗಳನ್ನು ಕಣ್ಣಾರೆ ಕಂಡಿದ್ದರು.
ಕೆ.ಎಸ್. ಪುಟ್ಟಣ್ಣಯ್ಯ ಅವರು ತಮ್ಮ ಮುಂದಿನ ವ್ಯಾಸಂಗಕ್ಕೆ ಹಾಗೂ ಸರ್ಕಾರಿ ನೌಕರಿಗೆ ಎಡತಾಕದೆ ದೀನ ದಲಿತರುಗಳ ಏಳಿಗೆಗಾಗಿ ದುಡಿಯುವ ಅಚಲ ವಿಶ್ವಾಸದಿಂದ ಮಂಡ್ಯ ಜಿಲ್ಲೆಯಲ್ಲಿ ಈ ರೀತಿ ಕಷ್ಟ ಜೀವಿಗಳಿಗೆ ಸ್ಪಂದಿಸತೊಡಗಿದರು.
ರಾಜಕೀಯ ಪ್ರವೇಶ: ಎಸ್.ಡಿ. ಜಯರಾಂ ರವರ ಮಾರ್ಗದರ್ಶನದಲ್ಲಿ ಆಗಸ್ಟ್ 1983ರಲ್ಲಿ ಕರ್ನಾಟಕ ರಾಜ್ಯರೈತ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಪಾದಾರ್ಪಣೆಮಾಡಿದರು.
ತಮ್ಮ ಬಾಲ್ಯದಿಂದಲೂ ಬೇರೂರಿದ್ದ ಕೃಷಿಕರು, ಕೂಲಿಕಾರ್ಮಿಕರು, ಮಹಿಳೆಯರ ಶೋಷಣೆ ಇನ್ನಿತರ ಬಡ ಜನಾಂಗದವರುಗಳ ಏಳಿಗೆಗೆ ಶ್ರಮಿಸಬೇಕೆಂಬ ಮಹಾದಾಸೆಯಿಂದ ಎಲ್ಲಾ ವರ್ಗದವರ ಪ್ರೀತಿ ಪಾತ್ರರಾಗಿ ಸಾಮಾನ್ಯ ಕಾರ್ಯಕರ್ತರಿಂದ ಪಾಂಡವಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾಗಿ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ಹಾಗೂ ಮೈಸೂರು ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಗಳಾಗಿ ಜನಪರ ಕಾರ್ಯಗಳನ್ನು ನೆರವೇರಿಸಿಕೊಂಡು ಬಂದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ 1999 ರಿಂದ 2012ರ ವರೆಗೆ ಸಮರ್ಥವಾಗಿ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದು ಸರ್ವವರ್ಗದವರನ್ನು ಒಗ್ಗೂಡಿಸಿ ಸಂಘವನ್ನು ಮುನನೆಡಿಸಿಕೊಂಡು ಬಂದರು. ಸರ್ವರಿಗೂ ಸೇವಾ ಸೌಲಭ್ಯಗಳ ಒದಗಿಸಿಕೊಂಡು ಬಂದ ಕೀರ್ತಿ ಕೆ.ಎಸ್. ಪುಟ್ಟಣ್ಣಯ್ಯನವರಿಗೆ ಸಲ್ಲಿರುತ್ತವೆ. ನಂತರ ಕರ್ನಾಟಕರಾಜ್ಯ ರೈತ ಸಂಘದ ಬೆಂಬಲಿನ ರಾಜಕೀಯ ಪಕ್ಷವಾದ, 'ಸರ್ವೋದಯ ಕರ್ನಾಟಕ ಪಕ್ಷ'ದ ಕಾರ್ಯಾಧ್ಯಕ್ಷರಾಗಿ ಈವರೆವಿಗೂ ಸೇವೆಸಲ್ಲಿಸುತ್ತಿರುತ್ತಾರೆ.
1994ನೇ ಇಸವಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರರಾದರು. ನಂತರ ಸತರ ಮೂರು ಬಾರಿ ಸೋಲಿನ ಕಹಿ ಉಂಡಿದ್ದರು. ಆದರೆ, ಈ ಬಾರಿ ಜಾಣ್ಮೆಯಿಂದ, ಜನ ಪ್ರೀತಿಯಿಂದ ಪುಟ್ಟಣ್ಣಯ್ಯ ಅವರು ಸರ್ವೋದಯ ಪಕ್ಷದ ಮೂಲಕ ಮತ್ತೊಮ್ಮೆ ಜನಪ್ರತಿನಿಧಿಯಾದರು. ನಂತರ ಇತ್ತೀಚೆಗೆ ಸ್ವರಾಜ್ ಇಂಡಿಯಾ ಪಕ್ಷ ಸೇರಿ ಚುನಾವಣೆ ಸ್ಪರ್ಧಿಸಲು ಸಿದ್ಧರಾಗುತ್ತಿದ್ದರು.












Click it and Unblock the Notifications