ಇಂದಿನಿಂದ ಮೇಲುಕೋಟೆಯಲ್ಲಿ ವೈಭವದ ವಜ್ರಮುಡಿ ಉತ್ಸವ
ಮಂಡ್ಯ, ಜುಲೈ 23: ಇಂದಿನಿಂದ ಮೇಲುಕೋಟೆಯಲ್ಲಿ ವಜ್ರಮುಡಿ ಉತ್ಸವ ಆರಂಭಗೊಳ್ಳಲಿದೆ. ಇಂದು ರಾತ್ರಿ ನಡೆಯಲಿರುವ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವಕ್ಕೆ ಸಾಕ್ಷಿಯಾಗಲು ಜನರು ಮೇಲುಕೋಟೆಯತ್ತ ಬರುತ್ತಿದ್ದಾರೆ. ಹೊರರಾಜ್ಯಗಳಿಂದಲೂ ಭಕ್ತರು ಬಂದಿದ್ದು, ಎಲ್ಲಾ ಛತ್ರಗಳೂ ಭಕ್ತರಿಂದ ಕಿಕ್ಕಿರಿದು ತುಂಬಿವೆ.
ಇಂದು ರಾತ್ರಿ 7 ಗಂಟೆಗೆ ಮಾದರಿಯ ಪ್ರಭಾವಳಿಯ ಚೆಲುವನಾರಾಯಣಸ್ವಾಮಿಗೆ ಕಿರೀಟ ಮತ್ತು ಗಂಡಭೇರುಂಡ ಪದಕ ತೊಡಿಸಲಾಗುತ್ತದೆ. ಶ್ರೀದೇವಿ, ಭೂದೇವಿಯರೊಂದಿಗೆ ಗರುಡಾರೂಢನಾಗಿ ಚೆಲುವನಾರಾಯಣ ಕಂಗೊಳಿಸಲಿದ್ದಾನೆ. ಒಂದು ಗಂಟೆಗಳ ಕಾಲ ಕೃಷ್ಣರಾಜಮುಡಿ ಉತ್ಸವ ಮಂಗಳವಾದ್ಯ, ದಿವ್ಯಪ್ರಬಂಧ ಪಾರಾಯಣದೊಂದಿಗೆ ನಡೆಯಲಿದೆ. ನಂತರ ದೇವಾಲಯದ ಒಳಭಾಗ ಪಡಿಯೇತ್ತ ನೆರವೇರುತ್ತದೆ.
ವೈರಮುಡಿ ಉತ್ಸವ ಮುಗಿಯುತ್ತಿದ್ದಂತೆ ದೇವಾಲಯದ ಮುಂಭಾಗ ಇರುವ ವಾಹನ ಮಂಟಪದಲ್ಲಿ ರಾಜಮುಡಿ ಉತ್ಸವ ನೆರವೇರುತ್ತದೆ. ಉತ್ಸವದ ವೇಳೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪಾರ್ಕಾವಣೆ ಪ್ರಕ್ರಿಯೆಯ ಪ್ರಸಾರಕ್ಕೆ ಬೃಹತ್ ಪರದೆಗಳನ್ನು ಅಳವಡಿಸಲಾಗಿದೆ.

ಜುಲೈ 24ರ ಸಂಜೆ 5 ಪ್ರಹ್ಲಾದ ಪರಿಪಾಲನ, 25ರ ಸಂಜೆ 5ರಿಂದ ಗಜೇಂದ್ರಮೋಕ್ಷ, 26ರಂದು ಬೆಳಿಗ್ಗೆ 11ಕ್ಕೆ ಸಾಂಕೇತಿಕ ರಥೋತ್ಸವ, 27ರಂದು ರಾತ್ರಿ 7ಕ್ಕೆ ತೆಪ್ಪೋತ್ಸವದ ಸಾಂಕೇತಿಕ ಉತ್ಸವ, 28ರ ಬೆಳಿಗ್ಗೆ 11 ಕಲ್ಯಾಣಿಯಲ್ಲಿ ತೀರ್ಥಸ್ನಾನ, ಪಟ್ಟಾಭಿಷೇಕ ನಡೆಯಲಿದೆ.
ವೈರಮುಡಿ ಅಂಗವಾಗಿ ರಾಜಬೀದಿ, ಪಂಚಕಲ್ಯಾಣಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ದೇವಾಲಯದ ರಾಜಗೋಪುರ ಏಳು ವರ್ಣಮಯ ಚಿತ್ತಾರದೊಂದಿಗೆ ಕಂಗೊಳಿಸಲಿದೆ. ಮೇಲುಕೋಟೆಗೆ ಬರುವ ಭಕ್ತರು ಮುಡಿ ಹರಕೆ ತೀರಿಸಲು ಮೂರು ಕಡೆ ಮುಡಿಕಟ್ಟೆ ತೆಗೆಯಲು ಸ್ಥಳ ಗುರುತಿಸಲಾಗಿದೆ. ದೇಗುಲದ ವತಿಯಿಂದ ಟಿಕೆಟ್ ವಿತರಿಸಲಾಗುತ್ತದೆ. ಕುಡಿಯುವ ನೀರಿನ ಪೂರೈಕೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಭಕ್ತರಿಗೆ ವ್ಯವಸ್ಥಿತ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮುಮ್ಮುಡಿ ಕೃಷ್ಣರಾಜ ಒಡೆಯರ್ ಪುತ್ರಭಾಗ್ಯ ಅಪೇಕ್ಷಿಸಿ ಚೆಲುವ ನಾರಾಯಣಸ್ವಾಮಿಗೆ ಕಟ್ಟಿಕೊಂಡಿದ್ದ ಹರಕೆ ಈಡೇರಿದ್ದರಿಂದ ವಜ್ರಖಚಿತ ಕಿರೀಟ ಮತ್ತು ಗಂಡಭೇರುಂಡ ಪದಕವನ್ನು ಸಮರ್ಪಿಸಿದ್ದಾರೆ. ಅಲ್ಲದೆ, ತಮ್ಮ ಜನ್ಮವರ್ಧಂತಿಯ ದಿನದಿಂದ ಹತ್ತು ದಿನಗಳ ಆಷಾಢ ಜಾತ್ರಾ ಮಹೋತ್ಸವವನ್ನೂ ಆರಂಭಿಸಿದ್ದರು. ಅಂದಿನಿಂದ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವ ನಡೆದುಕೊಂಡು ಬಂದಿದೆ.












Click it and Unblock the Notifications