ನಾಟಿ ಕೋಳಿ ಸಾಂಬಾರ್ ನಲ್ಲಿ ಮುದ್ದೆ ನುಂಗಿ ಗೆದ್ದ ಮೀಸೆ ಈರೇಗೌಡ
ಮಂಡ್ಯ, ಜುಲೈ 02: ಎಲ್ಲರ ಗಮನಸೆಳೆದ ನಾಟಿ ಕೋಳಿ ಸಾಂಬಾರ್ ನಲ್ಲಿ ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಮೀಸೆ ಈರೇಗೌಡ ಎಂಬುವರು ಸುಮಾರು ಮೂರೂವರೆ ಕೆ.ಜಿ. ಮುದ್ದೆ ಸೇವಿಸುವ ಮೂಲಕ ವಿಜಯ ಸಾಧಿಸಿದ್ದಾರೆ. ಇದರಿಂದ ಆನೆಬಲ ಸಿನಿಮಾದಲ್ಲಿ ನಟಿಸುವ ಅವಕಾಶವೂ ಹುಡುಕಿಕೊಂಡು ಬಂದಂತಾಗಿದೆ.
ನಾಟಿ ಕೋಳಿ ಸಾಂಬಾರ್ ನಲ್ಲಿ ರಾಗಿಮುದ್ದೆ ಉಣ್ಣುವ ಜಿಲ್ಲಾ ಮಟ್ಟದ ಸ್ಪರ್ಧೆ ಜು.1 ರಂದು ಮಂಡ್ಯ ತಾಲೂಕಿನ ಮಂಗಲ ಗ್ರಾಮದ ಶ್ರೀ ಮಾರಮ್ಮನ ದೇವಾಲಯದ ಆವರಣದಲ್ಲಿ ನಡೆಯಿತು. ಈ ಸ್ಪರ್ಧೆಗೆ ಸುಮಾರು 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಮಂಡ್ಯದಲ್ಲಿ ಮುದ್ದೆ ಉಣ್ಣೊ ಸ್ಪರ್ಧೆ, ಮುದ್ದೆ ತಿನ್ನಿ ಸಿನಿಮಾ ಸ್ಟಾರ್ ಆಗಿ!
ಸ್ಪರ್ಧೆಯಲ್ಲಿ ಪೈಪೋಟಿ ತೀವ್ರವಾಗಿ ನಡೆದು ಅರಕೆರೆ ಗ್ರಾಮದ ಮೀಸೆ ಈರೇಗೌಡ ಅವರು ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಇಷ್ಟಕ್ಕೂ ಇವರು ತಿಂದಿದ್ದು, ತಲಾ ಅರ್ಧ ಕೆ.ಜಿ.ಯ ಆರೂವರೆ ಮುದ್ದೆ. ಇನ್ನು ಚಿಕ್ಕರಸಿನಕರೆ ಸುರೇಶ್ ಐದು ಮುಕ್ಕಾಲು ಮುದ್ದೆ ತಿಂದು ದ್ವಿತೀಯ, ನರಸೀಪುರ ತಾಲೂಕು ಮೇಗಲಕೊಪ್ಪಲು ಗ್ರಾಮದ ರಾಮಮೂರ್ತಿ ಐದೂವರೆ ಮುದ್ದೆ ತಿಂದು ತೃತೀಯ ಸ್ಥಾನ ಪಡೆದಿದ್ದಾರೆ.
ಇವರನ್ನು ಹೊರತು ಪಡಿಸಿ ಉಳಿದಂತೆ ಎಚ್.ಡಿ.ಕೋಟೆಯ ಯೋಗೇಶ್, ಕಾರೆಪುರ ನಾಗೇಶ್, ಕಾರಸವಾಡಿ ಗ್ರಾಮದ ನಂದೀಶ್, ಶಂಕರೇಗೌಡ ಮೊದಲಾದವರು ಸಮಾಧಾನಕರ ಬಹುಮಾನ ಪಡೆದರು. ಸ್ಪರ್ಧೆಯ ವಿಶೇಷತೆ ಏನೆಂದರೆ ಸ್ಪರ್ಧಿಗಳಿಗಾಗಿ ಅರ್ಧ ಕೆ.ಜಿ.ಯಂತೆ ಒಂದೊಂದು ಮುದ್ದೆಯನ್ನು ತಯಾರು ಮಾಡಲಾಗಿತ್ತಲ್ಲದೆ, ಅರ್ಧ ಕ್ವಿಂಟಾಲ್ ನಾಟಿಕೋಳಿ ಮಾಂಸದ ಸಾರನ್ನು ಮಾಡಲಾಗಿತ್ತು. ಕಾಗೆಹಳ್ಳದದೊಡ್ಡಿ ಜಯಮ್ಮ ಎಂಬ ಮಹಿಳೆಯು ಭಾಗವಹಿಸಿ ಪುರುಷರಿಗೆ ಸ್ಪರ್ಧೆ ನೀಡಿದ್ದು ವಿಶೇಷವಾಗಿತ್ತಲ್ಲದೆ, ಅವರು ಒಂದು ಕೆ.ಜಿ. ಮುದ್ದೆಯನ್ನು ನುಂಗಿ ಹುಬ್ಬೇರುವಂತೆ ಮಾಡಿದರು.
ರಾಗಿ ಮುದ್ದೆ ಉಂಡು ಗೆಲುವು ಪಡೆದ ವಿಜೇತರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ ರೂ. ನಗದು ಹಾಗೂ ಪಾರಿತೋಷಕ, ದ್ವಿತೀಯ 3500 ರೂ., ತೃತೀಯ 2 ಸಾವಿರ ರೂ., 4 ಮತ್ತು 5ನೇ ಸ್ಥಾನಕ್ಕೆ ಸಮಾಧಾನಕರವಾಗಿ 1 ಸಾವಿರ ರೂ. ನಗದು ಹಾಗೂ ಪಾರಿತೋಷಕ ನೀಡಲಾಯಿತು.