ಮಂಡ್ಯ: ಹಾವಾಡಿಗರ ಕುಟುಂಬಗಳಿಗೆ 40 ವರ್ಷದಿಂದ ಮನೆ ಕೊಡದ ಸರ್ಕಾರ
ಮಂಡ್ಯ, ಸೆಪ್ಟೆಂಬರ್, 27: ಜಿಲ್ಲೆಯ ಯತ್ತಂಬಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 40 ವರ್ಷಗಳಿಂದಲೂ ಹಾವಾಡಿಗ ಸಮುದಾಯದ 6ಕ್ಕೂ ಹೆಚ್ಚು ಕುಟುಂಬಗಳು ಮೂಲ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಹಾಗೂ ವಾಸಿಸಲು ಯೋಗ್ಯವಾದ ಮನೆಯಿಲ್ಲದೆ ಅನಾಥವಾಗಿ ಬದುಕುತ್ತಿದ್ದು, ಇವರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಕಸಬ ಹೋಬಳಿಯ ಯತ್ತಂಬಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಂತ ಸೂರಿಲ್ಲದೆ, ಇತ್ತ ಮೂಲಭೂತ ಸೌಕರ್ಯಗಳಿಲ್ಲದೆ ಸುಮಾರು 40 ವರ್ಷಗಳಿಂದಲೂ ನೆಲೆಸಿದ್ದಾರೆ. ಇವರ ಜೀವನ ಕೂಲಿ ಕೆಲಸದಿಂದ ಸಾಗಿದೆ. ಹಾವಾಡಿಗ ವೃತ್ತಿಯಿಂದ ಬಂದಂತಹ ಆದಾಯದಲ್ಲಿ ಜೀವನವನ್ನು ಹೇಗೋ ಸಾಗಿಸುತ್ತಿದ್ದರು. ಆದರೆ ಪ್ರಸ್ತುತ ಕಾನೂನಾತ್ಮಕವಾಗಿ ಪ್ರಾಣಿ ಹಿಂಸೆ ಮಾಡುವುದು ಅಪರಾಧ ಆಗಿರುವುದರಿಂದ ಹಾವು ಆಡಿಸುವ ವೃತ್ತಿಯನ್ನು ನಿಲ್ಲಿಸಿದ್ದು, ಕೃಷಿ ಸಂಬಂಧಿತ ಅಥವಾ ಬೇರೆ ಇನ್ನಾವುದೋ ಕೂಲಿಯನ್ನು ಆಶ್ರಯಿಸಿದ್ದಾರೆ. ಕೂಲಿ ಕೆಲಸ ಇಲ್ಲದ ವೇಳೆ ಒಪ್ಪತ್ತಿನ ಊಟಕ್ಕೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತುಂಬಾ ವರ್ಷಗಳಿಂದಲೂ ಬೇರೆಯವರ ಖಾಸಗಿ ಜಮೀನಿನಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ. ಕೂಲಿ ಕೆಲಸವನ್ನು ಆಶ್ರಯಿಸಿಕೊಂಡು ಬದುಕು ದೂಡುತ್ತಿದ್ದಾರೆ. ಹಾವಾಡಿಗ ಕುಟುಂಬಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇವಲ ಬೆರಳೆಣಿಕೆಯ ಮಕ್ಕಳು ಮಾತ್ರ ಪೂರೈಸಿದ್ದಾರೆ. ಇಬ್ಬರು ಮಾತ್ರ ಎಸ್ಎಸ್ಎಲ್ಸಿ ಮಾಡಿದ್ದು, ಇಬ್ಬರು ಹೆಣ್ಣು ಮಕ್ಕಳು ಪದವಿಪೂರ್ವ ಶಿಕ್ಷಣ ಪೂರೈಸಿದ್ದಾರೆ. ಪದವಿ ಶಿಕ್ಷಣವನ್ನು ಯಾರೂ ಪೂರೈಸಿಲ್ಲ.

ನಿವೇಶನ ಮಂಜೂರು ಮಾಡಲು ಕ್ರಮ
ಯತ್ತಂಬಾಡಿ ಗ್ರಾಮ ಪಂಚಾಯತಿ ಪಿಡಿಒ ಲೋಕೇಶ್ ಈ ಸಮಸ್ಯೆ ಕುರಿತು ಮಾತನಾಡಿ, "ಸುಮಾರು 6ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಬಹಳ ವರ್ಷಗಳಿಂದಲೂ ವಾಸವಾಗಿವೆ. ಪ್ರಸ್ತುತ ಮನೆ ನಿರ್ಮಿಸಿಕೊಳ್ಳಲು ಇವರಿಗೆ ಸ್ವಂತ ನಿವೇಶನ ಇಲ್ಲ. ಆದ್ದರಿಂದ ವಸತಿ ಯೋಜನೆಯಡಿ ಲಾನುಭವಿಗಳ ಆಯ್ಕೆ ಪಟ್ಟಿಯಿಂದ ಕೈ ಬಿಡಲು ರಾಜೀವ್ಗಾಂಧಿ ವಸತಿ ನಿಗಮಕ್ಕೆ ಮನವಿ ಕಳುಹಿಸಲಾಗಿದೆ. ಯತ್ತಂಬಾಡಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಅಂತರವಳ್ಳಿ, ಹುಲ್ಲಾಹಳ್ಳಿ, ದಡಮಹಳ್ಳಿ, ಹೊಸಪುರ ಮತ್ತು ಗೊಲ್ಲರ ದೊಡ್ಡಿ ನಿವೇಶನ ರಹಿತ ಸುಮಾರು 256 ಕುಟುಂಬಗಳಿಗೆ ನಿವೇಶನವನ್ನು ಹಂಚಿಕೆ ಮಾಡಲು ಜಾಗವನ್ನು ಮಂಜೂರ ಮಾಡಿಕೊಡಬೇಕು. ಜಾಗವನ್ನು ಮಂಜೂರ ಮಾಡಿಕೊಡಬೇಕು ಎಂದು ತಹಶೀಲ್ದಾರ್ ಮತ್ತು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಲಾಗಿದೆ," ಎಂದು ತಿಳಿಸಿದರು.

ಖಾಸಗಿ ಜಮೀನಿನಲ್ಲಿ ಹಾವಡಿಗರ ಬದುಕು
ನಮ್ಮ ಕುಲ ಕಸುಬು ಹಾವಾಡಿಗ ವೃತ್ತಿಗೆ ಕಾನೂನಿನ ಬೆಂಬಲ ಇಲ್ಲ. ಹಾಗಾಗಿ ನಮ್ಮ ವೃತ್ತಿಯನ್ನು ನಿಲ್ಲಿಸಿದ್ದೇವೆ. ನಾವು ಬಹಳ ವರ್ಷಗಳಿಂದಲೂ ಇಲ್ಲಿ ನೆಲೆಸಿದ್ದೇವೆ. ಇತರರಂತೆ ನೆಮ್ಮದಿಯುತ ಜೀವನ ನಡೆಸಲು, ಮೂಲಭೂತ ಸೌಕರ್ಯಗಳು ಇರುವಂತಹ ಮನೆಗಳಿಲ್ಲ. ಬೇರೆ ಖಾಸಗಿಯವರ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೂ ಇತರರಂತೆ ಸ್ವಂತ ಸೂರು ಬೇಕು ಎಂದು ಹಲವು ಬಾರಿ ಸಂಬಂಧ ಪಟ್ಟ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ದಯವಿಟ್ಟು ನಮಗೆ ನಿವೇಶನ ನೀಡಿ ಎಂದು ಹಾವಾಡಿಗ ಸಮುದಾಯದ ಮಹಿಳೆ ಮುತ್ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಣ್ಣೀರಲ್ಲಿ ಕೈತೊಳೆಯುತ್ತಿರುವ ಹಾವಾಡಿಗರು
ಸುಮಾರು 40 ವರ್ಷಗಳಿಂದಲೂ ಹಾವಾಡಿಗ ಸಮುದಾಯದ ಕುಟುಂಬಗಳು ವಾಸವಾಗಿದೆ. ಇವರಿಗೆ ಸ್ವಂತ ಮನೆಯಿಲ್ಲದೆ ಅನಾಥವಾಗಿ ಬದುಕುತ್ತಿದ್ದಾರೆ. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಈ ನಿರಾಶ್ರಿತ ಕುಟುಂಬಗಳು ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿರುವುದು ಈ ದೇಶದ ದುರಂತವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಾಗಲಿ ಇವರ ಸಮಸ್ಯೆ ಪರಿಹರಿಸಲು ಮುಂದೆ ಬರುತ್ತಿಲ್ಲ ಎಂದು ಬೆಳ್ತೂರು ಹೋಬಳಿ ಬಿಎಸ್ಪಿ ಕಾರ್ಯದರ್ಶಿ ಶಿವಕುಮಾರ್ ಕಿಡಿಕಾರಿದರು.
ಹಾವಾಡಿಗರ ಬದುಕು ದಯನೀಯ ಸ್ಥಿತಿಯಲ್ಲಿರವುದು ವಿಪರ್ಯಾಸದ ಸಂಗತಿಯಾಗಿದೆ. ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತಗಳು ಕೈಕಟ್ಟಿ ಕುಳಿತಿದೆ. ಹಾಗೂ ಹಾವಾಡಿಗರ ಕುಟುಂಬಗಳ ಬಗ್ಗೆ ತಾತ್ಸಾರ ಮನೋಭಾವ ಹೊಂದಿದೆ. ಮೂಲಭೂತ ಸೌಕರ್ಯಗಳ ಜೊತೆಗೆ ಇವರಿಗೆ ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಸ್ಥಳೀಯರಾದ ಸಿದ್ದಲಿಂಗ ಮೂರ್ತಿ ಆಗ್ರಹಿಸಿದ್ದಾರೆ.

ಹಾವಾಡಿಗರ ಸಮಸ್ಯೆಗೆ ಅಧಿಕಾರಿಗಳ ಸ್ಪಂದನೆ
ನಿವೇಶನ ಮತ್ತು ವಸತಿ ರಹಿತ ಹಾವಾಡಿಗ ಕುಟುಂಬಗಳ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ತಹಶೀಲ್ದಾರರಿಗೆ ನಿವೇಶನಕ್ಕೆ ಜಾಗ ಗುರುತಿಸಿಕೊಡುವಂತೆ ಮತ್ತು ನಿವೇಶನ ಮಂಜೂರಾತಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಳವಳ್ಳಿ ತಾಲೂಕು ಪಂಚಾಯತಿ ಇಒ ರಾಮಲಿಂಗಯ್ಯ ಭರವಸೆ ನೀಡಿದ್ದಾರೆ. ಹಾವಾಡಿಗ ಸಮುದಾಯದವರ ನಿವೇಶನ ಸಮಸ್ಯೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಒಂದು ವೇಳೆ ಹಾವಾಡಿಗ ಸಮುದಾಯದ ನಿವೇಶನ ರಹಿತರ ಸಮಸ್ಯೆ ಇದ್ದರೆ ಕೂಡಲೇ ಕ್ರಮ ವಹಿಸಲಾಗುವುದು ಎಂದು ಮಳವಳ್ಳಿ ತಹಶೀಲ್ದಾರ್ ಎಂ.ವಿಜಯಣ್ಣ ಭರವಸೆ ನೀಡಿದರು.












Click it and Unblock the Notifications