ಮಂಡ್ಯ ಬಸ್ ದುರಂತ : ಚಾಲಕ ಶಿವಣ್ಣ ಹೇಳುವುದೇನು?
ಮಂಡ್ಯ, ಡಿಸೆಂಬರ್ 10 : ಮಂಡ್ಯದಲ್ಲಿ ಖಾಸಗಿ ಬಸ್ ನಾಲೆಗೆ ಉರುಳಿದ್ದು ಹೇಗೆ? ಎಂದು ಬಸ್ಸಿನ ಚಾಲಕ ಶಿವಣ್ಣ ಹೇಳಿಕೆ ನೀಡಿದ್ದಾರೆ. ಈಜು ಬಾರದಿದ್ದರೂ ಶಿವಣ್ಣ ಘಟನೆಯಲ್ಲಿ ಬದುಕಿ ಬಂದಿದ್ದರು. ಮಂಡ್ಯ ನ್ಯಾಯಾಲಯ ಆರೋಪಿನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ನವೆಂಬರ್ 24ರಂದು ಮಂಡ್ಯ ಜಿಲ್ಲೆಯ ಪಾಂಡವಪುರದ ಕನಗನಮರಡಿಯಲ್ಲಿ ಖಾಸಗಿ ಬಸ್ ನಾಲೆಗೆ ಉರುಳಿ ಬಿದ್ದಿತ್ತು. ಈ ದುರಂತದಲ್ಲಿ 30 ಜನರು ಮೃತಪಟ್ಟಿದ್ದರು. ಬಸ್ಸಿನ ಚಾಲಕ ಶಿವಣ್ಣ ಘಟನೆ ನಡೆದ ದಿನದಿಂದ ತಲೆಮರೆಸಿಕೊಂಡಿದ್ದರು.
ಭಾನುವಾರ ಶಿವಣ್ಣನನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ ಮಧ್ಯಾಹ್ನ ಮಂಡ್ಯದ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಾಯಿತು. ಚಾಲಕ ಶಿವಣ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ.
ಪೊಲೀಸರ ವಶದಲ್ಲಿದ್ದ ಶಿವಣ್ಣ ಬಸ್ ನಾಲೆಗೆ ಉರುಳಿದ್ದು ಹೇಗೆ?, ಈಜು ಬಾರದಿದ್ದರೂ ತಾನು ಬದುಕಿದ್ದು ಹೇಗೆ? ಎಂಬುದನ್ನು ಪೊಲೀಸರಿಗೆ ವಿವರಿಸಿದ್ದಾನೆ....

ಚಾಲಕ ಶಿವಣ್ಣ ಹೇಳಿದ್ದೇನು?
'ಕನಗನಮರಡಿ ನಾಲೆಯ ಬಳಿ ಬರುವಾಗ ಬಸ್ ನಿಯಂತ್ರಣ ತಪ್ಪಿತು. ಆಗ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ನಾನು ಅದನ್ನು ತಪ್ಪಿಸಲು ಮುಂದಾದಾಗ, ಬಸ್ ನಾಲೆಗೆ ಉರುಳಿ ಬಿದ್ದಿತು' ಎಂದು ಶಿವಣ್ಣ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.

ಶಿವಣ್ಣ ಬದುಕಿದ್ದು ಹೇಗೆ?
ಬಸ್ ಚಾಲಕ ಶಿವಣ್ಣ ಅವರಿಗೆ ಈಜು ಬರುತ್ತಿರಲಿಲ್ಲ. 'ಸ್ಥಳೀಯರಾದ ಅಂಕೇಗೌಡ ಅವರು ಶಿವಣ್ಣನನ್ನು ರಕ್ಷಣೆ ಮಾಡಿದರು. ಸುಸ್ತಾಗಿದ್ದ ನನ್ನನ್ನು ಜಮೀನಿನ ಬಳಿ ಕೂರಿಸಿದರು. ನಡೆದುಕೊಂಡು ನಾನು ಬಸರಾಳು ಗ್ರಾಮಕ್ಕೆ ಹೋಗಿ ಅಲ್ಲಿಂದ ಬಸ್ ಮೂಲಕ ಬೆಂಗಳೂರಿಗೆ ಹೋದೆ' ಎಂದು ಶಿವಣ್ಣ ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಬಂಧನ
ನವೆಂಬರ್ 24ರಂದು ಬಸ್ ನಾಲೆಗೆ ಬಿದ್ದ ತಕ್ಷಣ ಬಸ್ ಚಾಲಕ ಶಿವಣ್ಣ ಪರಾರಿಯಾಗಿದ್ದರು. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದರು. ಸೋಮವಾರ ಮಂಡ್ಯ ನ್ಯಾಯಾಲಯಕ್ಕೆ ಆರೋಪಿನ್ನು ಹಾಜರು ಪಡಿಸಲಾಗಿತ್ತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

30 ಜನರ ಧಾರುಣ ಸಾವು
ಕನಗನಮರಡಿ ಬಸ್ ದುರಂತದ ಬಳಿಕ ಸರ್ಕಾರ ಈ ಮಾರ್ಗದಲ್ಲಿ 2 ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನು ಆರಂಭಿಸಿದೆ. ನಾಲೆಯ ಎಡಭಾಗದಲ್ಲಿ ರಸ್ತೆಗೆ ಹೊಂದಿಕೊಡಂತೆ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿದೆ.












Click it and Unblock the Notifications