Sumalatha: ಮಂಡ್ಯ ಕಾರ್ಯಕರ್ತರ ಸಭೆ ಕರೆದ ಸಂಸದೆ ಸುಮಲತಾ: ಮುಂದಿನ ನಡೆ, ನಿರ್ಧಾರ ಪ್ರಕಟಿಸುವ ಸಾಧ್ಯತೆ
ಬೆಂಗಳೂರು, ಮಾರ್ಚ್ 25: ಮಂಡ್ಯ ಲೋಕಸಭಾ ಕ್ಷೇತ್ರವು ನಾನಾ ಕಾರಣಗಳಿಂದ ಕುತೂಹಲದ ಕೇಂದ್ರ ಬಿಂದುವಾಗಿದೆ. ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಸೋಮವಾರ ಮಂಡ್ಯ ಕಾರ್ಯಕರ್ತರ ತುರ್ತು ಸಭೆ ಕರೆದಿದ್ದಾರೆ. ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಈ ಬಗ್ಗೆ ಸುಮಲತಾ ನಿರ್ಧಾರ ಏನು ಎಂಬುದು ಸಭೆ ಬಳಿಕ ತಿಳಿಯಲಿದೆ.
ಬಿಜೆಪಿಯ ಮಂಡ್ಯ ಕ್ಷೇತ್ರದ ಟಿಕೆಟ್ ನನಗೆ ಸಿಗಲಿದೆ ಎಂದುಕೊಂಡಿದ್ದ ಸುಮಲತಾ ಅವರಿಗೆ ಮಂಡ್ಯದ ಟಿಕೆಟ್ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ. ಮಂಡ್ಯ ಕ್ಷೇತ್ರ ಪಡೆದ ಜೆಡಿಎಸ್ ಟಿಕೆಟ್ ಘೋಷಣೆಗಾಗಿ ಚನ್ನಪಟ್ಟಣದಲ್ಲಿ ಸಭೆ ನಡೆಸುತ್ತಿದೆ. ಎಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.

ಇತ್ತ ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ಕರೆದಿರುವ ಸುಮಲತಾ ಅವರ ನಡೆ ಬಗ್ಗೆ ಸ್ಪಷ್ಟವಾಗಿಲ್ಲ. ಮಂಡ್ಯದಲ್ಲಿ ಸುಮಲತಾ ಅವರು ತಮ್ಮದೇ ಆದ ಮತಗಳನ್ನು ಹೊಂದಿದ್ದಾರೆ. ಮಂಡ್ಯ ಬಿಟ್ಟು ಹೋಗಲ್ಲ ಎಂದಿದ್ದ ಅವರು ಪಕ್ಷೇತರವಾಗಿ ಸ್ಪರ್ಧೆಗೆ ನಿರ್ಧರಿಸಿ ಮೈತ್ರಿ ಪಕ್ಷಗಳಿಗೆ ಠಕ್ಕರ್ ಕೊಡುತ್ತಾರಾ? ಎಂಬ ಪ್ರಶ್ನೆ ಉದ್ಭವವಾಗಿದೆ.
ಸಭೆ ಬಳಿಕ ಸುಮಲತಾ ಮೌನ ಮುರಿಯುವ ಸಾಧ್ಯತೆ
ಒಂದು ವೇಳೆ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಒಪ್ಪಿದರೆ ಅವರು ಮಂಡ್ಯದಿಂದ ಜೆಡಿಎಸ್ ಕಣಕ್ಕಿಳಿಸುವ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾರಾ? ಎಂಬ ಕೆಲವು ಪ್ರಶ್ನೆಗಳು ಸೃಷ್ಟಿಯಾಗಿವೆ. ಈ ಎಲ್ಲದರ ಕುರಿತು ಸುಮಲತಾ ಅವರು ಇಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಿದ್ದಾರೆ.

ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಸುಮಲತಾ ಅವರು ಕೈಗೊಳ್ಳುವ ನಿರ್ಧಾರ ಮೈತ್ರಿ ಪಕ್ಷಗಳಿಗೆ ಬಿಸಿ ತುಪ್ಪವಾಗಲಿದೆಯೇ? ಎಂಬ ಅನುಮಾನಗಳು ಕಾಡುತ್ತಿವೆ. ಬಿಜೆಪಿ ವರಿಷ್ಠರ ಮಾತಿಗೆ ಮಣಿದರೆ ಸುಮಲತಾ ಅವರಿಗೆ ಉತ್ತಮ ಸ್ಥಾನಮಾನ ಸಿಗುವ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿ ಬಂದಿವೆ. ಸಭೆ ಬಳಿಕ ಸುಮಲತಾ ಅವರು ಮೌನ ಮುರಿಯುವ ಸಾಧ್ಯತೆಗಳಿವೆ.
ನಾರಾಯಣಗೌಡರ ಸೆಳೆಯಲು ಕಾಂಗ್ರೆಸ್ ಯತ್ನ?
ಮಂಡ್ಯ ಕಾರ್ಯಕರ್ತರ ಸಭೆ ಕರೆದಿದ್ದಕ್ಕೆ ದೋಸ್ತಿ ಪಕ್ಷಗಳ ನಾಯಕರು ಸುಮಲತಾರನ್ನು ಭೇಟಿ ಮಾಡುವ ನಿರೀಕ್ಷೆಗಳು ಇವೆ. ಇತ್ತ ಬಿಜೆಪಿ-ಜೆಡಿಎಸ್ ಗೆ ಠಕ್ಕರ್ ಕೊಡಲು ಕಾಂಗ್ರೆಸ್ ಬಿಜೆಪಿ ನಾಯಕರಿಗೆ ಗಾಳ ಹಾಕುತ್ತಿದೆ. ಮಂಡ್ಯದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು, ಕಾಂಗ್ರೆಸ್ ಮತ್ತು ಸುಮಲತಾ ಮಧ್ಯ ಉತ್ತಮ ಬಾಂಧವ್ಯವಿದೆ. ಒಂದೇ ಕುಟುಂಬದಂತಿದ್ದೇವೆ ಎಂದು ಕಾಂಗ್ರೆಸ್ ನಾಯಕ ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.
ಬಿಜೆಪಿ ನಾಯಕ ನಾರಾಯಣಗೌಡರನ್ನು ಕಾಂಗ್ರೆಸ್ಗೆ ತರಲು ಮತ್ತೊಂದು ಕಡೆ ಕಸರತ್ತು ನಡೆಯುತ್ತಿದೆ. ಇದೆಲ್ಲ ಕಾರಣಗಳಿಂದ ಮಂಡ್ಯ ಕ್ಷೇತ್ರ ಕೌತುಕದ ಕೇಂದ್ರ ಬಿಂದುವಾಗಿದೆ. ಇಂದು ಈ ಎಲ್ಲ ಕುತೂಹಲಕ್ಕೆ ತೆರೆ ಬಿಳಲಿದೆ, ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆಗಳು ಇವೆ.












Click it and Unblock the Notifications