ಮಂಡ್ಯ ಉಪ ಚುನಾವಣೆ : ಬಿಜೆಪಿ, ಜೆಡಿಎಸ್ ಬಲಾಬಲ
ಮಂಡ್ಯ, ಅಕ್ಟೋಬರ್ 30 : ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎದುರಾಳಿಗಳು. ಕಾಂಗ್ರೆಸ್ ಸಹ ಜೆಡಿಎಸ್ ಜೊತೆ ಕೈ ಜೋಡಿಸಿದೆ.
ನವೆಂಬರ್ 3ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಮಂಡ್ಯದ ಚುನಾವಣೆ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹೋರಾಟ. ಮೊದಲ ಬಾರಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದೆ.
ಮಂಡ್ಯ ಚುನಾವಣೆ : ಸಿದ್ದರಾಮಯ್ಯ ಸಭೆ ವಿಫಲ, ಕಾಂಗ್ರೆಸ್ ಪ್ರಚಾರವಿಲ್ಲ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವ ಪರಿಣಾಮ ಬಿಜೆಪಿ ಎದುರಾಳಿಯಾಗಿದೆ. ಮಾಜಿ ಕೆಎಎಸ್ ಅಧಿಕಾರಿ ಡಾ.ಸಿದ್ದರಾಮಯ್ಯ ಅವರು ಬಿಜೆಪಿ ಸೇರಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಮಂಡ್ಯ ಚುನಾವಣೆ : ಎಡವಟ್ಟು ಮಾಡಿಕೊಂಡ ಎಲ್.ಆರ್.ಶಿವರಾಮೇಗೌಡ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆದರೂ ಪ್ರಚಾರದಲ್ಲಿ ಅದು ಕಂಡು ಬರುತ್ತಿಲ್ಲ. ಕೆಲವು ಕಾಂಗ್ರೆಸ್ ನಾಯಕರು ಒಮ್ಮತದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಪರವಾಗಿ ಪ್ರಚಾರ ಮಾಡುತ್ತಿಲ್ಲ. ಕಾಂಗ್ರೆಸ್ ಬಿಟ್ಟು, ಜೆಡಿಎಸ್ ಸೇರಿದ್ದ ಶಿವರಾಮೇಗೌಡರು ಕಾಂಗ್ರೆಸ್ ನಾಯಕರ ವಿಶ್ವಾಸಗಳಿಸಲು ವಿಫಲರಾಗಿದ್ದಾರೆಯೇ?......
ರಾಮನಗರ ಉಪ ಚುನಾವಣೆ : ಜೆಡಿಎಸ್, ಬಿಜೆಪಿ ಬಲಾಬಲವೇನು?
ಎಲ್.ಆರ್.ಶಿವರಾಮೇಗೌಡ ಬಲ
ಮಂಡ್ಯ ಜಿಲ್ಲೆ ಈಗ ಜೆಡಿಎಸ್ ಭದ್ರಕೋಟೆ. 2014ರ ಚುನಾವಣೆಯಲ್ಲಿಯೂ ಜೆಡಿಎಸ್ನ ಸಿ.ಎಸ್.ಪುಟ್ಟರಾಜು ಸಂಸದರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ನಿಂದ ಜೆಡಿಎಸ್ಗೆ ಬಂದಿರುವ ಎಲ್.ಆರ್.ಶಿವರಾಮೇಗೌಡ ಅವರು ಉಪ ಚುನಾವಣೆಯಲ್ಲಿ ಅಭ್ಯರ್ಥಿ.
ಜೆಡಿಎಸ್ ಪಕ್ಷದ ವರ್ಚಸ್ಸು, ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಹೆಸರಿನ ಬಲ. ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಇರುವುದು, ಕಾಂಗ್ರೆಸ್ ಜೆಡಿಎಸ್ ಜೊತೆ ಕೈ ಜೋಡಿಸಿರುವುದು ಶಿವರಾಮೇಗೌಡರಿಗೆ ಶಕ್ತಿ ತುಂಬಿದೆ.
ಅಭ್ಯರ್ಥಿ ಆಯ್ಕೆ ಬಗ್ಗೆ ಜೆಡಿಎಸ್ನಲ್ಲಿರುವ ಚಿಕ್ಕ ಅಪಸ್ವರ, ಕೊನೆ ಕ್ಷಣದಲ್ಲಿ ಟಿಕೆಟ್ ವಂಚಿತರಾದ ಲಕ್ಷ್ಮೀ ಅಶ್ವಿನ್ ಗೌಡ ತಟಸ್ಥರಾಗಿರುವುದು. ಕಾಂಗ್ರೆಸ್ ನಾಯಕರು ಜೆಡಿಎಸ್ ಜೊತೆ ಮುನಿಸಿಕೊಂಡಿರುವುದು ಹಿನ್ನಡೆಗೆ ಕಾರಣವಾಗಬಹುದು.
ಡಾ.ಸಿದ್ದರಾಮಯ್ಯ
ಡಾ.ಸಿದ್ದರಾಮಯ್ಯ ಅವರು ಮಾಜಿ ಕೆಎಎಸ್ ಅಧಿಕಾರಿ. ಸರ್ಕಾರಿ ಕೆಲಸದಿಂದ ನಿವೃತ್ತರಾದ ಅವರು ಚುನಾವಣಾ ಕಣಕ್ಕಿಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಬಲ. ದೊಡ್ಡಪ್ಪ 2 ಬಾರಿ ಮಂಡ್ಯ ಶಾಸಕರಾಗಿ ಮಾಡಿದ ಕೆಲಸಗಳು ಅವರ ಶಕ್ತಿ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಆರ್.ಅಶೋಕ ಅವರು ಡಾ.ಸಿದ್ದರಾಮಯ್ಯ ಪರವಾಗಿ ಬಿರುಸಿನಿಂದ ಪ್ರಚಾರ ಮಾಡುತ್ತಿದ್ದಾರೆ.
ರಾಜಕೀಯ ಅನುಭವಿಲ್ಲ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯನ್ನು ಎದುರಿಸುವಷ್ಟು ಪ್ರಬಲವಾಗಿಲ್ಲ ಎಂಬುದು ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವಾಗಬಹುದಾಗಿದೆ.
ಬಿಜೆಪಿಯ ಸಾಧನೆ ಏನು?
ಇದುವರೆಗೂ ಕ್ಷೇತ್ರದಲ್ಲಿ ನಡೆದ 19 ಚುನಾವಣೆಯಲ್ಲಿ 14ರಲ್ಲಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿಲ್ಲ. 1991 ರಲ್ಲಿ ಡಿ.ರಾಮಲಿಂಗಯ್ಯ 161153 ಮತ ಪಡೆದಿದ್ದರು. 2009ರಲ್ಲಿ ಎಲ್.ಆರ್.ಶಿವರಾಮೇಗೌಡ ಅವರು 144875 ಮತ ಮತ್ತು 2014ರ ಚುನಾವಣೆಯಲ್ಲಿ ಪ್ರೊ.ಶಿವಲಿಂಗಯ್ಯ 86996 ಮತಗಳನ್ನು ಪಡೆದಿದ್ದರು.
ಜೆಡಿಎಸ್ ಭದ್ರಕೋಟೆ
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮಂಡ್ಯವನ್ನು ಜೆಡಿಎಸ್ ಒಂದೂವರೆ ದಶಕದಿಂದ ತನ್ನವಶದಲ್ಲಿ ಇಟ್ಟುಕೊಂಡಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಸಮ್ಮಿಶ್ರ ಸರ್ಕಾರದ ಇಬ್ಬರು ಸಚಿವರು ಜಿಲ್ಲೆಯಲ್ಲಿದ್ದಾರೆ. ಇಂತಹ ಪ್ರಭಾವನ್ನು ಬಿಜೆಪಿಗೆ ಹೇಗೆ ಮುರಿಯಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಬಲ ಸಿಗಲಿದೆಯೇ?
ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ನಡೆ ಇನ್ನೂ ನಿಗೂಢವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ನಾಯಕರ ಜೊತೆ ಸಭೆ ನಡೆಸಿ ಜೆಡಿಎಸ್ ಬೆಂಬಲಸಬೇಕು ಎಂದು ಸೂಚಿಸಿದ್ದಾರೆ.
ಆದರೆ, ತಳಮಟ್ಟದ ಕಾರ್ಯಕರ್ತರಲ್ಲಿ ಇನ್ನೂ ಅಸಮಾಧಾನ ಹೋಗಿಲ್ಲ. ನವೆಂಬರ್ 3ರಂದು ನಡೆಯುವ ಚುನಾವಣೆಯಲ್ಲಿ ಕಾರ್ಯಕರ್ತರು ಶಿವರಾಮೇಗೌಡರ ಪರವಾಗಿ ಮತದಾನ ಮಾಡಲಿದ್ದಾರೆಯೇ? ಕಾದು ನೋಡಬೇಕಿದೆ.