ಮಂಡ್ಯದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಲಾಕಪ್ಡೆತ್ ಪ್ರಕರಣ: PSI, ಪೇದೆಗಳಿಗೆ ತಲಾ 2 ಲಕ್ಷ ದಂಡ ವಿಧಿಸಿ ತೀರ್ಪು
ಮಂಡ್ಯ, ಜನವರಿ, 10: ಹತ್ತು ವರ್ಷಗಳ ಹಿಂದೆ ನಡೆದಿದ್ದ ಲಾಕಪ್ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ಪೆಕ್ಟರ್ ಹಾಗೂ ಇಬ್ಬರು ಪೇದೆಗಳಿಗೆ ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿ ಮಾನವ ಹಕ್ಕುಗಳ ಆಯೋಗ ಮಧ್ಯಂತರ ತೀರ್ಪು ನೀಡಿದೆ.
ಮದ್ದೂರು ತಾಲೂಕಿನ ಬೆಳತೂರು ಗ್ರಾಮದ ಮೂರ್ತಿ ಎಂಬಾತನ ಲಾಕಪ್ಡೆತ್ ಪ್ರಕರಣದಲ್ಲಿ ಸಬ್ ಇನ್ಸ್ಪೆಕ್ಟರ್ ಆನಂದ್ ಕುಮಾರ್, ಪೇದೆಗಳಾದ ಮಾದೇಶ್ ಮತ್ತು ಮಲ್ಲಿಕಾರ್ಜುನ ಚುಲ್ಕಿ ಅವರು ದಂಡ ಶಿಕ್ಷೆಗೆ ಗುರಿಯಾದವರಾಗಿದ್ದಾರೆ. ಮೂರ್ತಿ ಸಾವಿನ ಪ್ರಕರಣ ಕುರಿತಂತೆ ಇತ್ತೀಚೆಗೆ ಆದೇಶ ನೀಡಿರುವ ಆಯೋಗ ಮೃತನ ಮಕ್ಕಳಿಗೆ ಹಣ ನೀಡುವಂತೆ ತೀರ್ಪು ನೀಡಿದೆ. ಮೃತನ ಮಕ್ಕಳಿಗಾಗಿ ಸಬ್ ಇನ್ಸ್ಪೆಕ್ಟರ್ ಆನಂದಕುಮಾರ್, ಪೇದೆಗಳಾದ ಮಾದೇಶ್ ಮತ್ತು ಮಲ್ಲಿಕಾರ್ಜುನ ಚುಲ್ಕಿ ಅವರ ವೇತನದಲ್ಲಿ ತಲಾ 2 ಲಕ್ಷ ರೂಪಾಯಿಗಳನ್ನು ಹಿಡಿಯುವಂತೆ ಮಹತ್ವದ ತೀರ್ಪು ನೀಡಿದೆ.
ಘಟನೆಯ ಸಂಪೂರ್ಣ ಹಿನ್ನೆಲೆ
2013ರ ಜುಲೈ 11ರಂದು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮದ್ದೂರು ತಾಲೂಕಿನ ಬೆಳತೂರು ಗ್ರಾಮದ ಮೂರ್ತಿ ಎಂಬಾತನನ್ನು ಠಾಣೆಗೆ ಕರೆತಂದಿದ್ದರು. ವಿಚಾರಣೆ ಹೆಸರಿನಲ್ಲಿ ಪೊಲೀಸರು ಮೂರ್ತಿಯನ್ನು ತೀವ್ರ ವಿಚಾರಣೆ ನಡೆಸಿದ್ದರು. ಆಗ ಪೊಲೀಸರ ತೀವ್ರವಾದ ವಿಚಾರಣೆಯಿಂದ ಜುಲೈ 13ರಂದು ಮೂರ್ತಿ ಠಾಣೆಯಲ್ಲೇ ಅಸುನೀಗಿದ್ದನು. ಬಳಿಕ ಆತನ ಮೃತದೇಹವನ್ನು ಸಾಗಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಭಾರೀ ಕಸರತ್ತು ನಡೆಸಿದ್ದರು ಎನ್ನುವ ಭಯಾನಕ ಸತ್ಯವೊಂದು ಬಯಲಾಗಿತ್ತು.

ಮೂವರಿಗೂ ತಲಾ 2 ಲಕ್ಷ ರೂ. ದಂಡ
ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಮೂರ್ತಿ ಸಾವಿನ ಪ್ರಕರಣವನ್ನು ಖಂಡಿಸಿ ಪೊಲೀಸರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದವು. ಮೂರ್ತಿ ಅವರದ್ದು ಸಹಜ ಸಾವಲ್ಲ. ಅದು ಲಾಕಪ್ ಡೆತ್ ಎಂದು ಪ್ರಬಲವಾಗಿ ದನಿ ಎತ್ತಿದರು. ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಕೆ.ಆರ್ ರವೀಂದ್ರ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ ಮೃತನ ಕುಟುಂಬಕ್ಕೆ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ಅಧಿಕಾರಿಗಳು, ಸಬ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ಸೇರಿ ಮೂವರಿಗೂ ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಆ ಹಣವನ್ನು ಅವರ ಸಂಬಳದಲ್ಲಿ ಕತ್ತರಿಸಿ, ಮೃತನ ಇಬ್ಬರು ಪತ್ನಿಯರು, ನಾಲ್ವರು ಮಕ್ಕಳ ಹೆಸರಿನಲ್ಲಿ ತಲಾ ಒಂದು ಲಕ್ಷ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಬೇಕೆಂದು ಆದೇಶಿಸಿದ್ದಾರೆ.
ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ
ಇದು ಮಧ್ಯಂತರ ತೀರ್ಪಾಗಿದ್ದು, ಮೃತನ ಕುಟುಂಬದ ಸದಸ್ಯರಿಗೆ ಇನ್ನೂ ಹೆಚ್ಚಿನ ನ್ಯಾಯ ಕಲ್ಪಿಸಲು ತಮ್ಮ ಹೋರಾಟ ಮುಂದುವರೆಸುವುದಾಗಿ ಹೇಳಿದ ಅವರು, ಸರ್ಕಾರ ತಕ್ಷಣ ಆರೋಪಿಗಳ ವೇತನದಲ್ಲಿ ಹಣವನ್ನು ಹಿಡಿದು ಸಂತ್ರಸ್ತರ ಕುಟುಂಬಕ್ಕೆ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ದೂರುದಾರ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಎಚ್ಚರಿಸಿದರು.












Click it and Unblock the Notifications