ಮಂಡ್ಯದಲ್ಲಿ ಜಮೀರ್ ಅಹ್ಮದ್ ಮಾಲೀಕತ್ವದ ಬಸ್ ತಡೆ ಹಿಡಿದ ಜನರು
Recommended Video
ಮಂಡ್ಯ, ನವೆಂಬರ್ 28: ಕನಗನಮರಡಿ ಗ್ರಾಮದಲ್ಲಿ ಸಂಭವಿಸಿದ ಬಸ್ ದುರಂತ ಜನರು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಸಚಿವ ಜಮೀರ್ ಅಹ್ಮದ್ ಅವರ ಮಾಲೀಕತ್ವದ ಬಸ್ ಪರವಾನಗಿ ಇಲ್ಲದೆ ಸಂಚರಿಸುತ್ತಿದೆ ಎಂದು ಆರೋಪಿಸಿದ ಮಂಡ್ಯದ ಜನರು ಬಸ್ ಅನ್ನು ತಡೆಗಟ್ಟಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
ಜಮೀರ್ ಅಹ್ಮದ್ ಅವರಿಗೆ ಸೇರಿದ ನ್ಯಾಷನಲ್ ಬಸ್ ಪರವಾನಗಿ ಇಲ್ಲದೆ ಸಂಚರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೃಷ್ಣರಾಜಪೇಟೆ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಅನ್ನು ಕೃಷ್ಣರಾಜ ಪೇಟೆ ಬಳಿ ಅಡ್ಡಗಟ್ಟಿದ್ದರು.
ಮಂಡ್ಯ ಬಸ್ ದುರಂತ: ಸಂತ್ರಸ್ತರ ಕುಟುಂಬಕ್ಕೆ 1.5 ಕೋಟಿ ಬಿಡುಗಡೆಗೆ ಸಿದ್ಧತೆ
ಶನಿವಾರ ಬೆಳಿಗ್ಗೆ ಪಾಂಡವರಪುರದಿಂದ ಹೊರಟಿದ್ದ ರಾಜಕುಮಾರ್ ಬಸ್ ಕನಗನಮರಡಿ ಬಳಿ ನಾಲೆಗೆ ಬಿದ್ದು 30 ಜನರ ಸಾವಿಗೆ ಕಾರಣವಾಗಿತ್ತು. ಹಳೆಯದಾದ ಆ ಬಸ್ ಪರವಾನಗಿ ಇಲ್ಲದೆ ಸಂಚರಿಸುತ್ತಿತ್ತು ಎನ್ನಲಾಗಿದೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪರವಾನಗಿ ಇಲ್ಲದ ಮತ್ತು ಸಂಚಾರಕ್ಕೆ ಯೋಗ್ಯವಲ್ಲದ ಬಸ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಆದರೆ, ಕುಮಾರಸ್ವಾಮಿ ಸೂಚನೆಗೆ ಸಾರಿಗೆ ಅಧಿಕಾರಿಗಳು ಕಿವಿಗೊಟ್ಟಿಲ್ಲ ಎಂದು ಆರೋಪಿಸಲಾಗಿದೆ.
ಪೊಲೀಸರಿಗೆ ಒಪ್ಪಿಸಿದರು
ಜಮೀರ್ ಅಹ್ಮದ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಯ ಆರಕ್ಕೂ ಹೆಚ್ಚು ಬಸ್ಗಳು ನಿತ್ಯವೂ ಕೆಆರ್ ಪೇಟೆಯಿಂದ ನಾಗಮಂಗಲ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿವೆ. ಆದರೆ, ಹೆಚ್ಚಿನ ಬಸ್ಗಳು ಕೆಆರ್ ಪೇಟೆಯವರೆಗೆ ಬರಲು ಪರವಾನಗಿ ಇಲ್ಲದೆ ಹೋದರೂ ಬರುತ್ತಿವೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ. ಸಾರ್ವಜನಿಕರು ತಾವು ಹಿಡಿದ ಬಸ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಿಸಿಯೂಟ ಇಲ್ಲದಿದ್ದರೆ ಕನಗನವಾಡಿ ಬಸ್ ಅಪಘಾತದಲ್ಲಿ ಮತ್ತಷ್ಟು ಮಕ್ಕಳು ಬಲಿಯಾಗಬೇಕಿತ್ತು
ಖಾಸಗಿ ಬಸ್ ಮಾಲೀಕರ ಲಾಬಿ
ಸಾರ್ವಜನಿಕರು ತಡೆಹಿಡಿದ ಬಸ್ ಜಮೀರ್ ಅಹ್ಮದ್ ಅವರ ಚಿಕ್ಕಪ್ಪ ಅತಾವುಲ್ಲಾ ಎಂಬುವವರುಗೆ ಸೇರಿದ್ದು ಎನ್ನಲಾಗಿದೆ. ಆ ಬಸ್ ಬೆಂಗಳೂರಿನಿಂದ ಮೇಲುಕೋಟೆವರೆಗೆ ಸಂಚರಿಸಲು ಮಾತ್ರ ಪರವಾನಗಿ ಹೊಂದಿತ್ತು.
ಮಂಡ್ಯದಲ್ಲಿ ಖಾಸಗಿ ಬಸ್ಗಳ ಹಾವಳಿ ಹೆಚ್ಚಿದ್ದು, ಜಿಲ್ಲೆಯಲ್ಲಿ 450ಕ್ಕೂ ಹೆಚ್ಚು ಖಾಸಗಿ ಬಸ್ಗಳು ಓಡಾಡುತ್ತಿವೆ. ಇವುಗಳಿಗೆ ಸಾರಿಗೆ ಕಚೇರಿಯಿಂದ ಫಿಟ್ನೆಸ್ ಸರ್ಟಿಫಿಕೆಟ್ ಸುಲಭವಾಗಿ ದೊರಕುತ್ತವೆ ಎಂಬ ಆರೋಪಗಳಿವೆ.
ಇಲ್ಲಿ ಖಾಸಗಿ ಬಸ್ ಮಾಲೀಕರ ಲಾಬಿ ಹೆಚ್ಚು. ಹೀಗಾಗಿ ಹೆಚ್ಚಿನ ಕಡೆಗೆ ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಸಾರಿಗೆ ಸಂಸ್ಥೆ ಬಸ್ಗಳ ಸಂಚಾರಕ್ಕೆ ಸಾರ್ವಜನಿಕರು ಒತ್ತಾಯಿಸುತ್ತಾರೆ. ಹೀಗೆ ಕೆಎಸ್ ಆರ್ ಟಿಸಿ ಬಸ್ ಬಿಟ್ಟರೂ ಖಾಸಗಿಯವರ ಲಾಬಿಯಿಂದಾಗಿ ಅವುಗಳ ಸಂಚಾರ ನಿಲ್ಲಿಸಲಾಗುತ್ತವೆ ಎಂದು ಆರೋಪಿಸಲಾಗಿದೆ.
ಕನಗನಮರಡಿ ಭೀಕರ ಬಸ್ ದುರಂತದಲ್ಲಿ ಪಾರಾಗಿ ಬಂದ ಗಿರೀಶ್ ಹೇಳಿದ್ದೇನು?
ಬಸ್ ಸಂಚಾರ ನಿಲ್ಲಿಸಿದ್ದವು
ಕನಗನಮರಡಿ ಬಸ್ ದುರಂತದ ಬೆನ್ನಲ್ಲೇ ಪರವಾನಗಿ ರಹಿತ ಬಸ್ಗಳ ಓಡಾಟದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದವು. ಹೀಗಾಗಿ ಎಚ್ಚರಿಕೆ ವಹಿಸಿದ್ದ ಖಾಸಗಿ ಬಸ್ಗಳು ಈ ಮಾರ್ಗದಲ್ಲಿ ಓಡಾಟ ನಿಲ್ಲಿಸಿದ್ದವು. ಆದರೆ, ಎರಡು ದಿನಗಳಲ್ಲಿ ಅದರ ಕಾವು ತಣ್ಣಗಾದ ಬಳಿಕ ಮತ್ತೆ ಸಂಚಾರ ಆರಂಭಿಸಿದ್ದವು. ಹೀಗೆ ಖಾಸಗಿ ಬಸ್ಗಳು ಕೆಆರ್ ಪೇಟೆಯಲ್ಲಿ ಕಾಣಿಸಿಕೊಂಡಿದ್ದು ಜನರನ್ನು ಸಿಟ್ಟಿಗೆಬ್ಬಿಸಿತು. ಆಸರೆ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಬಸ್ ತಡೆದ ಸಾರ್ವಜನಿಕರು ಅದರ ಪರವಾನಗಿ ಬಗ್ಗೆ ವಿಚಾರಿಸಿದರು.
ಅಪಾಯಕ್ಕೆ ಅಹ್ವಾನ
ವಿ.ಸಿ. ನಾಲೆಗೆ ತಡೆಗೋಡೆ ಇದ್ದಿದ್ದರೆ ಇಷ್ಟು ಭೀಕರವಾದ ದುರಂತ ಸಂಭವಿಸುತ್ತಿರಲಿಲ್ಲ. ತಡೆಗೋಡೆ ಇದ್ದಿದ್ದರೆ ಅವಘಡದ ಪ್ರಮಾಣ ಕಡಿಮೆಯಾಗುತ್ತಿತ್ತೇನೋ. ಪಾಂಡವಪುರ-ಮಂಡ್ಯ ಮಾರ್ಗವೇ ಅಪಾಯಕಾರಿಯಾಗಿದೆ.
ಕನಗನಮರಡಿ ಗ್ರಾಮದಿಂದ ಮಂಡ್ಯಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೂಡ ಬಹಳ ಕಿರಿದಾಗಿದೆ. ಅಲ್ಲದೆ ಅದರಲ್ಲಿಯೂ ಕೊರಕಲುಗಳು ಬಿದ್ದಿವೆ. ಸ್ವಲ್ಪ ನಿಯಂತ್ರಣ ತಪ್ಪಿದರೂ ವಾಹನಗಳು ನಾಲೆಗೆ ಬೀಳುವ ಅಪಾಯ ಹೆಚ್ಚು. ಈ ಭಾಗದ ಸುಮಾರು 20 ಗ್ರಾಮಗಳ ಜನರು ಇದೇ ಮಾರ್ಗದಲ್ಲಿ ಓಡಾಡುತ್ತಾರೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕ. ಇಲ್ಲಿನ ರಸ್ತೆಗಳು ದುರಸ್ತಿಯಾಗದೆ, ಡಾಂಬರ್ ಕಂಡು ದಶಕವೇ ಕಳೆದಿದೆ.