ಕೆರೆ ತುಂಬಿಸಲು ಒಪ್ಪಿದ ಸರ್ಕಾರ: ಮಂಡ್ಯದಲ್ಲಿ ಪ್ರತಿಭಟನೆಗೆ ತೆರೆ
ಮಂಡ್ಯ, ಆಗಸ್ಟ್ 10: ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಇಲ್ಲಿನ ನಾಲೆಗಳಿಗೆ ನೀರುಬಿಡಬೇಕೆಂದು ಮಂಡ್ಯ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.
ಭರ್ತಿಯಾಗಲಿವೆ ಕಾವೇರಿ ಕಣಿವೆಯ ಕೆರೆ-ಕಟ್ಟೆಗಳು : ಸಿದ್ದು
ನಾಲೆಗಳಿಗೆ ಸರ್ಕಾರ ನೀರು ಬಿಟ್ಟಿದ್ದರಿಂದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮದ್ದೂರಮ್ಮನ ಕೆರೆಯಂಗಳದಲ್ಲಿ ಕೆರೆ-ಕಟ್ಟೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ 34 ದಿನಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ತೆರೆ ಎಳೆದಿದ್ದಾರೆ.
ಪ್ರತಿಭಟನೆಯನ್ನು ಆರಂಭದಿಂದಲೂ ವಿಭಿನ್ನವಾಗಿ ನಡೆಸಿಕೊಂಡು ಬಂದಿದ್ದ ವೇದಿಕೆಯ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿದ್ದರು. ಆದರೂ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಕೊನೆಗೆ ಆಗಸ್ಟ್ 9 ರಂದು ಸರ್ಕಾರ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಸಿಹಿ ಹಂಚಿ ಸಂಭ್ರಮ ಆಚರಿಸಿ ಪ್ರತಿಭಟನೆ ಅಂತ್ಯಗೊಳಿಸಲಾಯಿತು.
ಧರಣಿಗೆ ಕೊನೆಯಿಲ್ಲ, ಸರ್ಕಾರದ ಮನಸ್ಸು ಕರಗಿಲ್ಲ!
ಇದುವರೆಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆಗಳು ನಡೆದಿದ್ದವು. ಗುಂಡಿಯಲ್ಲಿ ಮಲಗಿ, ಎದೆಯ ಮೇಲೆ ಚಪ್ಪಡಿ ಕಲ್ಲು ಇಟ್ಟುಕೊಂಡು, ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರ ಅಣಕು ತಿಥಿ ನಡೆದಿದ್ದವು ಆದರೆ ಇದ್ಯಾವುದಕ್ಕೂ ಸರ್ಕಾರ ಸೊಪ್ಪು ಹಾಕಿರಲಿಲ್ಲ.
ಮತ್ತೊಂದೆಡೆ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರು ಮಂಡ್ಯದ ಸರ್ ಎಂ.ವಿ. ಪ್ರತಿಮೆ ಎದುರು ಹಾಗೂ ಶ್ರೀರಂಗಪಟ್ಟಣದಲ್ಲಿ ಒಂದು ವಾರದಿಂದ ನಡೆಸುತ್ತಿದ್ದರು. ಸರ್ಕಾರದ ನಿರ್ಧಾರದಿಂದ ಸದ್ಯ ಎಲ್ಲ ಪ್ರತಿಭಟನೆಗಳು ನಿಂತಿವೆ. ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.