ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ: ಜೆಡಿಎಸ್ ಕಾರ್ಯತಂತ್ರ ಶುರು
ಮಂಡ್ಯ, ಜೂನ್ 30: ಮಂಡ್ಯದಲ್ಲಿ ಮತ್ತೆ ತಳಮಟ್ಟದಿಂದ ಪಕ್ಷದ ಸಂಘಟನೆ ಮಾಡಬೇಕೆಂಬ ತೀರ್ಮಾನಕ್ಕೆ ಬಂದಿರುವ ಜೆಡಿಎಸ್ ಪಕ್ಷದ ನಾಯಕರು ಅದಕ್ಕೆ ಬೇಕಾದ ಕಸರತ್ತನ್ನು ಈಗಿನಿಂದಲೇ ಆರಂಭಿಸಿದ್ದಾರೆ. ಸದ್ಯ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ಘೋಷಣೆಯಾಗಿದ್ದು, ಆಗಸ್ಟ್ 16 ರಂದು ಚುನಾವಣೆ ನಡೆಯಲಿದೆ. ಆದ್ದರಿಂದ ಕಾಂಗ್ರೆಸ್ ಹಿಡಿತದಲ್ಲಿರುವ ಬ್ಯಾಂಕ್ ನ್ನು ತಮ್ಮದಾಗಿಸಿಕೊಳ್ಳಲು ಜೆಡಿಎಸ್ ನಾಯಕರು ರಾಜಕೀಯ ರಣತಂತ್ರ ಹೆಣೆಯತೊಡಗಿದ್ದಾರೆ.
Recommended Video
ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ ಒಂದಷ್ಟು ಬದಲಾವಣೆಯಾದಂತೆ ಕಂಡು ಬರುತ್ತಿದೆ. ಅದು ಕಳೆದ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಉಪ ಚುನಾವಣೆಯಲ್ಲಿ ಗೊತ್ತಾಗಿದೆ. ಹೀಗಾಗಿ ಇದು ಹೀಗೆಯೇ ಮುಂದುವರೆದರೆ ಮಂಡ್ಯದ ಹಿಡಿತ ಜೆಡಿಎಸ್ ಕೈಬಿಟ್ಟು ಹೋಗುವ ಎಲ್ಲ ಸಾಧ್ಯತೆಯೂ ಇದೆ.
ಹೀಗಾಗಿಯೇ ಎಚ್ಚೆತ್ತುಕೊಂಡಿರುವ ಶಾಸಕರು ಮತ್ತು ಪಕ್ಷದ ನಾಯಕರು ಮಂಡ್ಯದ ಜನ ಜೆಡಿಎಸ್ ನ್ನು ಕೈಬಿಟ್ಟಿಲ್ಲ ಎಂಬುದನ್ನು ತೋರಿಸಿಕೊಡಬೇಕಾದರೆ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರಮುಖ ಅಸ್ತ್ರವಾಗಿದ್ದು, ಅಲ್ಲಿ ತಮ್ಮ ಪಕ್ಷ ಬೆಂಬಲಿತ ಸದಸ್ಯರನ್ನು ಗೆಲ್ಲಿಸಿ ಕಾಂಗ್ರೆಸ್ ನಿಂದ ಅಧಿಕಾರವನ್ನು ಕಿತ್ತುಕೊಳ್ಳುವುದು ಅನಿವಾರ್ಯವಾಗಿದೆ. ಆ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಗೆ ತಮ್ಮ ಬಲವನ್ನು ತೋರಿಸಿಕೊಡುವ ಉದ್ದೇಶ ಜೆಡಿಎಸ್ ನದ್ದಾಗಿದೆ.

ಜೆಡಿಎಸ್ ಶಾಸಕರಿಂದ ಸಭೆ
ಇತರೆ ಪಕ್ಷಗಳು ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಇನ್ನೂ ಕೂಡ ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಆದರೆ ಜೆಡಿಎಸ್ ನಾಯಕರು ಈಗಿನಿಂದಲೇ ಕಾರ್ಯತಂತ್ರವನ್ನು ಆರಂಭಿಸಿದ್ದಾರೆ. ಈಗಾಗಲೇ ಮಂಡ್ಯದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು, ಡಿ.ಸಿ ತಮ್ಮಣ್ಣ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಎಂ.ಶೀನಿವಾಸ್, ಕೆ.ಸುರೇಶ್ ಗೌಡ, ಡಾ.ಕೆ.ಅನ್ನದಾನಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಉಪಸ್ಥಿತಿಯಲ್ಲಿ ಸಭೆ ಸೇರಿ ಡಿಸಿಸಿ ಬ್ಯಾಂಕ್ ಅಧಿಕಾರವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ಏನೇನು ಮಾಡಬೇಕು ಎಂಬುದರ ಕುರಿತಂತೆ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನ
ಡಿಸಿಸಿ ಬ್ಯಾಂಕ್ ಆಡಳಿತ ಸದ್ಯ ಕಾಂಗ್ರೆಸ್ ವಶದಲ್ಲಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸುವ ಅಗತ್ಯತೆಯಿದ್ದು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಂಡು ಕಣಕ್ಕಿಳಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಜನಾನುರಾಗಿಯಾಗಿದ್ದು, ಗೆಲ್ಲಲು ಸಮರ್ಥವಿರುವ ಅಭ್ಯರ್ಥಿಯನ್ನು ಸ್ಥಳೀಯ ಶಾಸಕರ ಅಭಿಪ್ರಾಯದಂತೆ ಆಯ್ಕೆ ಮಾಡಲು ಎಲ್ಲ ನಾಯಕರು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ಆಗಸ್ಟ್ 16 ರಂದು ಚುನವಾಣೆ ಘೋಷಣೆಯಾಗಿದ್ದು, ಪ್ರಸ್ತುತ ಕಾಂಗ್ರೆಸ್ ಪಕ್ಷದ ಪುಟ್ಟರಾಮು ಅಧ್ಯಕ್ಷರಾಗಿದ್ದು, ಆಡಳಿತ ಮಂಡಳಿ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೂತನ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯು ಜೆಡಿಎಸ್ ಮತ್ತು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿದೆ. ಇದುವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿತ್ತಾದರೂ ಇದೀಗ ಇಲ್ಲಿ ನಿಧಾನವಾಗಿ ಸಂಘಟನೆಗೊಳ್ಳುತ್ತಿರುವ ಬಿಜೆಪಿ ಸ್ಪರ್ಧೆ ನೀಡಿದರೂ ಅಚ್ಚರಿಪಡಬೇಕಾಗಿಲ್ಲ.

12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ
ಒಂದು ವೇಳೆ ಅಭ್ಯರ್ಥಿಗಳ ಆಯ್ಕೆ ವೇಳೆ ಭಿನ್ನಾಭಿಪ್ರಾಯಗಳು ಉಂಟಾದರೆ ಅದರ ಲಾಭ ಪಡೆಯಲು ಬಿಜೆಪಿ ಹವಣಿಸಿದರೆ ಅದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಸಮಸ್ಯೆ ಎದುರಾಗಬಹುದು. ಇದನ್ನು ಮನಗಂಡ ಜೆಡಿಎಸ್ ಈಗಿನಿಂದಲೇ ಅಖಾಡಕ್ಕಿಳಿದಿದೆ. ಇನ್ನು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ 15 ನಿರ್ದೇಶಕ ಸ್ಥಾನಗಳಿದ್ದು, ಈ ಪೈಕಿ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸರ್ಕಾರ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕಿನಿಂದ ತಲಾ ಓರ್ವ ಪ್ರತಿನಿಧಿ ನಿರ್ದೇಶಕರಾಗಿ ನಾಮ ನಿರ್ದೇಶನಗೊಳ್ಳಲಿದ್ದಾರೆ. ಜಿಲ್ಲಾ ನೊಂದಣಾಧಿಕಾರಿಯು ನಿರ್ದೇಶಕರಾಗಿ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಚುನಾವಣೆ ನಡೆಯಲಿರುವ 12 ಸ್ಥಾನಗಳ ಪೈಕಿ ಜಿಲ್ಲೆಯ ಏಳು ತಾಲೂಕುಗಳ ಕೃಷಿ ಪ್ರಾಥಮಿಕ ಸಹಕಾರ ಬ್ಯಾಂಕ್ ಗಳ ಪ್ರತಿನಿಧಿಯಾಗಿ ಪ್ರತಿ ತಾಲ್ಲೂಕಿನಿಂದ ಒಬ್ಬರು ಆಯ್ಕೆಯಾಗುತ್ತಾರೆ.

ಜೆಡಿಎಸ್ ಗೆ ಕಾಂಗ್ರೆಸ್ ನ ಪ್ರತಿತಂತ್ರವೇನು?
ಜಿಲ್ಲಾ ಹಾಲು ಒಕ್ಕೂಟದ ಪ್ರತಿನಿಧಿಯಾಗಿ ಪಾಂಡವಪುರ ಹಾಗೂ ಮಂಡ್ಯ ಉಪವಿಭಾಗದ ಪ್ರತಿನಿಧಿಯಾಗಿ ಎರಡು ನಿರ್ದೇಶಕ ಸ್ಥಾನ ಹಾಗೂ ಇನ್ನುಳಿದ ಮೂರು ನಿರ್ದೇಶಕ ಸ್ಥಾನಕ್ಕೆ ತಲಾ ಒಂದರಂತೆ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಸ್ಥೆಗಳ (ಟಿಎಪಿಸಿಎಂಎಸ್) ವತಿಯಿಂದ, ಪತ್ತಿನ ಸಹಕಾರ ಸಂಘಗಳಿಂದ ಹಾಗೂ ಕೈಗಾರಿಕಾ ಸಹಕಾರ ಸಂಘ ಸೇರಿದಂತೆ ಇತರೆ ಕ್ಷೇತ್ರಗಳಿಂದ ತಲಾ ಒಬ್ಬ ನಿರ್ದೇಶಕರು ಆಯ್ಕೆಯಾಗಬೇಕಿದೆ. ಏನೇ ಆಗಲಿ ಕಾಂಗ್ರೆಸ್ ಗೆ ಈ ಬಾರಿ ಅಧಿಕಾರ ಬಿಟ್ಟುಕೊಡಬಾರದು ಎಂಬ ತೀರ್ಮಾನಕ್ಕೆ ಬಂದಿರುವ ಜೆಡಿಎಸ್ ನಾಯಕರು ಈಗಿನಿಂದಲೇ ಅಖಾಡಕ್ಕಿಳಿದಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನವರು ಅಧಿಕಾರ ಉಳಿಸಿಕೊಳ್ಳಲು ಯಾವ ತಂತ್ರ ರೂಪಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications