ಕೋವಿಡ್ ಕೇಂದ್ರಗಳ ಸೋಂಕಿತರ ಸಮಸ್ಯೆ ಆಲಿಸಿದ ಮಂಡ್ಯ ಡಿಸಿ
ಮಂಡ್ಯ, ಏಪ್ರಿಲ್ 22: ಮಂಡ್ಯ ಜಿಲ್ಲೆಯಲ್ಲಿರುವ ಕೋವಿಡ್ ಕೇಂದ್ರಗಳಲ್ಲಿ ಊಟೋಪಚಾರ ಸೇರಿದಂತೆ ಹಲವು ಸಮಸ್ಯೆಗಳಿವೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಖುದ್ದು ಜಿಲ್ಲಾಧಿಕಾರಿಗಳೇ ಕೋವಿಡ್ ಕೇಂದ್ರಗಳಿಗೆ ತೆರಳಿ ಸೋಂಕಿತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಆಲಿಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಸಿ.ಅಶ್ವಥಿ ಅವರು ಬುಧವಾರ ದಿಢೀರ್ ಆಗಿ ಮಂಡ್ಯ, ಮದ್ದೂರು, ಮಳವಳ್ಳಿಯ ಕೋವಿಡ್ ಕೇರ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸೋಂಕಿತರೊಂದಿಗೆ ಮುಕ್ತವಾಗಿ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.
ಮೂಲಸೌಕರ್ಯ ನೀಡಲು ಸೂಚನೆ
ಬಳಿಕ ಮಂಡ್ಯ ತಾಲ್ಲೂಕಿನ ಆರೋಗ್ಯ ಅಧಿಕಾರಿಗಳಿಗೆ ಅಲ್ಲಿನ ಕೋವಿಡ್ ಕೇಂದ್ರಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳನ್ನು ವಿಚಾರಿಸಿದರು. ಈ ವೇಳೆ ಕೋವಿಡ್ ವ್ಯಕ್ತಿಗಳನ್ನು ಮಾತನಾಡಿಸಿ ಎಲ್ಲ ಮೂಲ ಸೌಕರ್ಯಗಳನ್ನು ಮತ್ತು ಊಟ, ಬಿಸಿ ನೀರಿನ ವ್ಯವಸ್ಥೆ, ಸ್ವಚ್ಛತೆ, ವೈದ್ಯಕೀಯ ಸೇವೆ ಮತ್ತು ಉತ್ತಮವಾದ ಆಹಾರದ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.
ಕೋವಿಡ್ ವ್ಯಕ್ತಿಗಳಿಗೆ ಉತ್ತಮ ಆಹಾರ ನೀಡಿ ಅವರಿಗೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಎಲ್ಲ ತಾಲ್ಲೂಕಿನ ತಹಶೀಲ್ದಾರರಿಗೆ ಸೂಚಿಸಿದರು.
ಕೋವಿಡ್ ಕೇರ್ ತೆರೆಯಲು ಸ್ಥಳ ಪರಿಶೀಲನೆ
ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳ ವ್ಯವಸ್ಥೆ, ವೆಂಟಿಲೆಟರ್ಸ್, ಹಾಸಿಗೆ ವ್ಯವಸ್ಥೆಯ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಪ್ರತಿ ತಾಲೂಕಿನಲ್ಲಿನ ತಹಶೀಲ್ದಾರರ ಜೊತೆ ಮಾತನಾಡಿ, ಸೂಚಿಸಿದರಲ್ಲದೆ ಹೆಚ್ಚಿನ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲು ಸ್ಥಳ ಪರಿವೀಕ್ಷಣೆ ನಡೆಸಿದರು.
ಈ ನಡುವೆ ಮಾಸ್ಕ್ ಧರಿಸಿ ಓಡಾಡುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಎಲ್ಲ ಅಂಗಡಿ, ಹೋಟೆಲ್ಗಳಲ್ಲಿ ಜಾಗೃತಿ ಮೂಡಿಸಲಾಯಿತಲ್ಲದೆ, ಸರ್ಕಾರದ ಹೊಸ ಮಾರ್ಗಸೂಚಿಗಳ ಬಗ್ಗೆ ತಿಳಿಸಲಾಯಿತು.
Recommended Video
ಜಿಲ್ಲಾಧಿಕಾರಿ ಸಿ.ಅಶ್ವಥಿ ಅವರು ಭೇಟಿಯ ಸಂದರ್ಭ ಆಯಾ ತಾಲ್ಲೂಕಿನ ತಹಶೀಲ್ದಾರಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ ಮತ್ತಿತರರು ಇದ್ದರು.