ಮಿನಿ ಸಮರದಲ್ಲಿ ಯಾರ ಋಣ ತೀರಿಸುತ್ತಾರೋ ಮಂಡ್ಯ ಗೌಡ್ತಿ?
ಮಂಡ್ಯ, ನವೆಂಬರ್.19: ಮಂಡ್ಯ ರಾಜಕಾರಣ ಅಂದ್ರೆನೇ ಹಾಗೆ. ಮಂಡ್ಯ ಟು ಇಂಡಿಯಾ ಅನ್ನೋ ಮಾತು ಚುನಾವಣೆಗಳು ಎದುರಾದಾಗಲೆಲ್ಲ ಪ್ರತಿಧ್ವನಿಸುತ್ತದೆ. ಈಗ ಸಕ್ಕರೆ ನಾಡಿನಲ್ಲಿ ಮತ್ತದೇ ಮಾತು ಕೇಳಿ ಬರುತ್ತಿದೆ.
ಸದ್ಯಕ್ಕೆ ಸಕ್ಕರೆ ನಾಡಿನಲ್ಲಿ ಋಣ ರಾಜಕಾರಣ ನಡೆಯುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಎಲ್ಲ ಪಕ್ಷಗಳು ತೊಡೆ ತಟ್ಟಿದ್ದವು. ಅದಕ್ಕೆಲ್ಲ ಕಾರಣವಾಗಿದ್ದು ಒನ್ ಆಂಡ್ ಒನ್ಲಿ ಸಂಸದೆ ಸುಮಲತಾ ಅಂಬರೀಶ್ ಸ್ಪರ್ಧೆ.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷದ ನಾಯಕರು ಸುಮಲತಾ ಪರ ಪ್ರಚಾರ ಮಾಡಿದ್ದರು. ಇದೀಗ ಇದೇ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಉಪ ಚುನಾವಣೆ ಕಾವೇರಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಚಂದ್ರಶೇಖ್ ಇಬ್ಬರೂ ಕೂಡಾ ಸಂಸದೆ ಸುಮಲತಾ ಅಂಬರೀಶ್ ಅವರ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

ಯಾರಿಗೆ ಸಿಗುತ್ತೋ ಗೌಡ್ತಿ ಬೆಂಬಲ?
ಮಂಡ್ಯ ಲೋಕಸಭೆಯಲ್ಲಿ ಸುಮಲತಾ ಗೆಲುವಿಗೆ ಬಿಜೆಪಿ ಬೆಂಬಲ ಎಷ್ಟು ಕಾರಣವಾಯಿತೋ, ಅದಕ್ಕಿಂತ ಹೆಚ್ಚಾಗಿ ಕೈ ಹಿಡಿದಿದ್ದು ಕಾಂಗ್ರೆಸ್ ನಾಯಕರ ಬಹಿರಂಗ ಪ್ರಚಾರ. ಚೆಲುವರಾಯಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಸುಮಲತಾ ಪರ ಅಖಾಡಕ್ಕೆ ಇಳಿದಿದ್ದರು. ಅಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಾ ಗೌಡ್ತಿ ಬೆಂಬಲಕ್ಕೆ ನಿಂತಿದ್ದರು. ಲೋಕಸಭಾ ಚುನಾವಣೆ ಬಳಿಕ ಸುಮಲತಾ ಬಿಜೆಪಿಗೆ ಸೇರುತ್ತಾರೆ ಅಂತಲೂ ಹೇಳಲಾಗುತ್ತಿತ್ತು.
ಆದರೆ, ಈಗ ಮಂಡ್ಯ ರಾಜಕಾರಣದಲ್ಲಿ ಚಿತ್ರಣ ಬದಲಾಗಿದೆ. ಯಾವ ಪಕ್ಷಕ್ಕೂ ಸೇರದೇ ತಟಸ್ಥವಾಗಿ ಉಳಿದಿರುವ ಸುಮಲತಾ ಅಂಬರೀಶ್ ಪಾಲಿಗೆ ಇದೀಗ ಅಗ್ನಿಪರೀಕ್ಷೆ ಎದುರಾಗಿದೆ. ಯಾವ ಪಕ್ಷದ ಅಭ್ಯರ್ಥಿಗೆ ಸುಮಲತಾ ಬೆಂಬಲ ನೀಡುತ್ತಾರೆ ಎಂಬುದು ಇನ್ನೆರೆಡು ದಿನಗಳಲ್ಲಿ ಹೊರ ಬೀಳಲಿದೆ.












Click it and Unblock the Notifications