ಮಂಡ್ಯ ಚುನಾವಣೆ : ಎಡವಟ್ಟು ಮಾಡಿಕೊಂಡ ಎಲ್.ಆರ್.ಶಿವರಾಮೇಗೌಡ!
Recommended Video

ಮಂಡ್ಯ, ಅಕ್ಟೋಬರ್ 30 : ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಚುನಾವಣೆ ಹತ್ತಿರವಿರುವಾಗಲೇ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರು ಮಾಜಿ ಸಚಿವ ಅಂಬರೀಶ್ ಅವರನ್ನು ಟೀಕಿಸಿದ್ದಾರೆ.
ನಾಗಮಂಗಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಅವರನ್ನು ಓಲೈಸಲು ಹೋದ ಶಿವರಾಮೇಗೌಡರು, ಅಂಬರೀಶ್ ಅವರ ಹೆಸರನ್ನು ಹೇಳದೇ ಅವರನ್ನು ಟೀಕಿಸಿದರು. ಇದರಿಂದ ಅಂಬರೀಶ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.
ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಸಮಾವೇಶದಲ್ಲಿ ಚಲುವರಾಯಸ್ವಾಮಿ ಮತ್ತು ಶಿವರಾಮೇಗೌಡರ ಮುನಿಸು ಮತ್ತೊಮ್ಮೆ ಬಹಿರಂಗವಾಯಿತು. ಎಲ್ಲರಿಗೂ ಸೇರಿಸಿ ಬೃಹತ್ ಹಾರ ಹಾಕುವಾಗ ಚಲುವರಾಯಸ್ವಾಮಿ ಅವರು ಹಾರಕ್ಕೆ ಕೊರಳೊಡ್ಡಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಜಿಲ್ಲೆಯಲ್ಲಿ ಇನ್ನೂ ಒಂದಾಗಿಲ್ಲ
ನವೆಂಬರ್ 3ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಜೆಡಿಎಸ್ನಿಂದ ಎಲ್.ಆರ್.ಶಿವರಾಮೇಗೌಡ, ಬಿಜೆಪಿಯಿಂದ ಡಾ. ಸಿದ್ದರಾಮಯ್ಯ ಅವರು ಕಣದಲ್ಲಿದ್ದಾರೆ. ನವೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಎಲ್.ಆರ್.ಶಿವರಾಮೇಗೌಡ ಹೇಳಿದ್ದೇನು?
ಪ್ರಚಾರ ಸಭೆಯಲ್ಲಿ ಮಾತನಾಡಿದ ಎಲ್.ಆರ್.ಶಿವರಾಮೇಗೌಡ ಅವರು, 'ಅವರನ್ನು ಸೋಲಿಸುವುದಕ್ಕಾಗಿಯೇ 2009 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ. ನನಗೆ 1.50 ಲಕ್ಷ ಮತಗಳು ಬಂದವು. ಅವುಗಳಲ್ಲಿ ಬಹುತೇಕ ಕಾಂಗ್ರೆಸ್ ಮತಗಳು.ಇದರಿಂದ ಅವರು ಸೋತು, ಚಲುವರಾಯಸ್ವಾಮಿ ಗೆದ್ದರು' ಎಂದು ಅಂಬರೀಶ್ ಹೆಸರು ಹೇಳದೇ ಟೀಕೆ ಮಾಡಿದರು.

2009ರಲ್ಲಿ ಏನಾಗಿತ್ತು?
2009ರ ಲೋಕಸಭೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಅವರು ಜೆಡಿಎಸ್ನಿಂದ, ಅಂಬರೀಶ್ ಅವರು ಕಾಂಗ್ರೆಸ್ನಿಂದ, ಎಲ್.ಆರ್.ಶಿವರಾಮೇಗೌಡ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಚಲುವರಾಯಸ್ವಾಮಿ ಗೆದ್ದಿದ್ದರು.
* ಚಲುವರಾಯಸ್ವಾಮಿ 384443 ಮತ
* ಅಂಬರೀಶ್ 360943 ಮತ
* ಎಲ್.ಆರ್.ಶಿವರಾಮೇಗೌಡ 144875 ಮತಗಳನ್ನು ಪಡೆದಿದ್ದರು.

ರಮ್ಯಾ ಅಭಿಮಾನಿಗಳ ಆಕ್ರೋಶ
ಇಂತಹ ಹೇಳಿಕೆಯಿಂದಾಗಿಯೇ ಎಲ್.ಆರ್.ಶಿಮರಾಮೇಗೌಡ ಅವರು ಈಗಾಗಲೇ ಮಾಜಿ ಸಂಸದೆ ರಮ್ಯಾ ಅಭಿಮಾನಿಗಳ ವಿರೋಧ ಕಟ್ಟಿಕೊಂಡಿದ್ದಾರೆ. 'ಜೆಡಿಎಸ್ ಸೇರಿದ ಬಳಿಕ ಶಿವರಾಮೇಗೌಡ ಅವರು ರಮ್ಯಾ ಸೋಲಿಗೆ ತಾನೇ ಕಾರಣ' ಎಂದು ಸಭೆಯಲ್ಲಿ ಹೇಳಿಕೆ ನೀಡಿದ್ದರು.
ಈ ಹೇಳಿಕೆ ವಿರುದ್ಧ ರಮ್ಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ನವೆಂಬರ್ 3ರಂದು ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಾಗಿ ಘೋಷಣೆ ಮಾಡಿದ್ದಾರೆ.

ಅಂಬರೀಶ್ ಬೆಂಬಲ ಕೇಳಿದ್ದರು
ಕೆಲವು ದಿನಗಳ ಹಿಂದೆ ಎಲ್.ಆರ್.ಶಿವರಾಮೇಗೌಡ ಅವರು ಮಾಜಿ ಸಚಿವ ಅಂಬರೀಶ್ ಅವರನ್ನು ಭೇಟಿ ಮಾಡಿ ಉಪ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. 'ನಿಂತ ಎಲ್ಲಾ ಚುನಾವಣೆಯಲ್ಲೂ ಸೋತಿದ್ದೀಯಾ, ಈ ಬಾರಿಯಾದರೂ ಗೆಲ್ಲು' ಎಂದು ಅಂಬರೀಶ್ ಅವರು ಹೇಳಿ ಕಳಿಸಿದ್ದರು.

ಬಿಜೆಪಿಗೆ ಲಾಭ
ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವೆ ಅಸಮಾಧಾನ ಇದ್ದೇ ಇದೆ. ಈಗ ಶಿವರಾಮೇಗೌಡರು ಅಂಬರೀಶ್ ಟೀಕಿಸಿದ್ದು ಮತ್ತಷ್ಟು ಮುನಿಸಿಗೆ ಕಾರಣವಾಗುವ ಸಾಧ್ಯತೆ ಇದೆ. ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರು ಅಸಮಾಧಾನವನ್ನು ಬಳಸಿಕೊಂಡರೆ ಉಪ ಚುನಾವಣೆಯಲ್ಲಿ ಗೆಲ್ಲಲು ಸಹಕಾರಿಯಾಗಲಿದೆ.












Click it and Unblock the Notifications