ಮಂಡ್ಯ ಬಂದ್ ಯಶಸ್ವಿ: ರೈತರ ಕರೆಗೆ ವ್ಯಾಪಕ ಬೆಂಬಲ
ಮಂಡ್ಯ, ಡಿಸೆಂಬರ್ 19: ಒಂದು ಟನ್ ಕಬ್ಬಿಗೆ 4500 ರೂಪಾಯಿ ಹಾಗೂ ಹಾಲಿಗೆ ವೈಜ್ಞಾನಿಕ ದರ ನೀಡುವಂತೆ ಒತ್ತಾಯಿಸಿ ರೈತ ಸಂಘ ಕರೆ ನೀಡಿದ್ದ ಮಂಡ್ಯ ಬಂದ್ ಯಶಸ್ವಿಯಾಗಿದೆ.
ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಂದ್ಗೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವರ್ತರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಕೆಲ ಹೊಟೇಲ್ಗಳ ಮಾಲೀಕರು ಸಹ ಬಂದ್ಗೆ ಬೆಂಬಲ ಸೂಚಿಸಿದ್ದು, ಮತ್ತೆ ಕೆಲವರು ಹೊಟೇಲ್ ತೆರೆದು ಗ್ರಾಹಕರಿಗೆ ಸೇವೆ ನೀಡಿದ್ದಾರೆ.
ಬಂದ್ ಬಗ್ಗೆ ಸಾರ್ವಜನಿಕರು, ವರ್ತಕರಲ್ಲಿ ಅರಿವು ಮೂಡಿಸುವ ಸಲುವಾಗಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಬೆಂಗಳೂರು-ಮೈಸೂರು ಹೆದ್ದಾರಿ, ನೂರಡಿ ರಸ್ತೆ, ಗುತ್ತಲು ರಸ್ತೆ, ಪೇಟೆ ಬೀದಿ, ಹೊಳಲು ವೃತ್ತ, ಹೊಸಹಳ್ಳಿ ವೃತ್ತ, ಬನ್ನೂರು ರಸ್ತೆ, ವಿ.ವಿ. ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರಲ್ಲದೆ, ಅಂಗಡಿಗಳು ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿದ್ದರವನ್ನು ಸಹ ಮನವೊಲಿಸಿ ಅಂಗಡಿ ಮುಚ್ಚಿಸುವಲ್ಲಿ ಯಶಸ್ವಿಯಾದರು.
ರೈತರ ಬೈಕ್ ರ್ಯಾಲಿಯಿಂದ ಹೊಟೇಲ್ ಉದ್ಯಮಕ್ಕೂ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೂ ಬಂದ್ ಬಿಸಿ ತಟ್ಟಿದೆ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ಬಂದ್ ಹಿನ್ನೆಲೆಯಲ್ಲಿ ಚಲನಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನ ರದ್ದು ಮಾಡಲಾಗಿತ್ತು. ಹೆದ್ದಾರಿಯಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಕೆಲ ಕಾಲ ವ್ಯಾಪಾರ ಸ್ಥಗಿತ ಮಾಡಲಾಗಿತ್ತು.

ಬಂದ್ನಿಂದಾಗಿ ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸಾರಿಗೆ ಬಸ್ಗಳ ಓಡಾಟ ನಗರದಲ್ಲಿ ಸ್ಥಗಿತವಾಗಿತ್ತು. ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿತ್ತು. ಸಾರಿಗೆ ಬಸ್ಗಳನ್ನು ತಡೆದು ನಗರ ಪ್ರವೇಶಕ್ಕೆ ಅನುಮತಿ ನಿರಾಕರಣೆಯಿಂದಾಗಿ ಹೊರ ವಲಯದಲ್ಲೇ ಪ್ರಯಾಣಿಕರು ಇಳಿದು ನಗರ ಪ್ರವೇಶಕ್ಕೆ ಬರಲು ಪರದಾಡಿದ್ದಾರೆ.
ರೈತರ ಬಂದ್ಗೆ ಆಟೋ ಚಾಲಕರು ಮತ್ತು ಮಾಲೀಕರು ಬೆಂಬಲ ವ್ಯಕ್ತಪಡಿಸಿದ್ದ ಕಾರಣ ಆಟೋ ಮತ್ತು ಟ್ಯಾಕ್ಸಿಗಳ ಸಂಚಾರವೂ ವಿರಳವಾಗಿತ್ತು. ಬಂದ್ ಕಾರಣದಿಂದಾಗಿ ಮಂಡ್ಯ ನಗರಕ್ಕೆ ಸಾರಿಗೆ ಸಂಸ್ಥೆಯ ಬಸ್ಸುಗಳು ಸೇರಿದಂತೆ ಎಲ್ಲ ರೀತಿಯ ವಾಹನಗಳಿಗೂ ಮಾರ್ಗ ಬದಲಾವಣೆ ಮಾಡಲಾಗಿತ್ತು. ಮೈಸೂರಿನಿಂದ ಬರುವ ವಾಹನಗಳನ್ನು ನಗರದ ಹೊರ ವಲಯದಲ್ಲಿರುವ ವಿ.ಸಿ. ಗೇಟ್ ಬಳಿ ತಡೆದು ಮಾರ್ಗ ಬದಲಾವಣೆ ಮಾಡಿ ತೆರಳುವಂತೆ ಸೂಚಿಸಲಾಗುತ್ತಿತ್ತು. ಇನ್ನು ಜಿಲ್ಲೆಯಲ್ಲಿ ಶಾಲೆ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದೆ.
ಬೆಂಗಳೂರು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಉಮ್ಮಡಹಳ್ಳಿ ಗೇಟ್, ಹೊಸಬೂದನೂರು ಬಳಿ ತಡೆದು ಮಾರ್ಗ ಬದಲಾಯಿಸಲಾಗಿತ್ತು. ಕೆಲವು ವಾಹನಗಳಿಗೆ ಮದ್ದೂರು ಬಳಿಯೇ ತಡೆದು ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗುತ್ತಿತ್ತು. ಈ ಬಾರಿ ರೈತ ಸಂಘದ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ನಗರದ ವ್ಯಾಪಾರಸ್ಥರು ಬಂದ್ಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದು, ರೈತರಿಗೆ ಆನೆ ಬಲ ಬಂದಂತಾಗಿದೆ.












Click it and Unblock the Notifications