ರಮ್ಯಾಗೆ ಲಾಲಿಪಪ್ ಕಳಿಸಿದ ಬಿಜೆಪಿ ಕಾರ್ಯಕರ್ತರು
ನಟಿ-ಮಾಜಿ ಸಂಸದೆ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಟೀಕೆಗೆ ಪ್ರತಿಕ್ರಿಯಿಸಿರುವ ಮಂಡ್ಯದ ಬಿಜೆಪಿ ಕಾರ್ಯಕರ್ತರು ಮಕ್ಕಳು ತಿನ್ನುವ ಸಿಹಿ ತಿನಿಸನ್ನು ಪೋಸ್ಟ್ ಮೂಲಕ ಕಳುಹಿಸಿದ್ದಾರೆ
ಮಂಡ್ಯ, ಮೇ 18: ಮಾಜಿ ಸಂಸದೆ-ನಟಿ, ಈಗಷ್ಟೇ ಕಾಂಗ್ರೆಸ್ ನಲ್ಲಿ ಹೊಸ ಜವಾಭ್ದಾರಿ ವಹಿಸಿಕೂಂಡಿರುವ ರಮ್ಯಾ ಅವರಿಗೆ ಬಿಜೆಪಿ ಕಾರ್ಯಕರ್ತರು ಮಕ್ಕಳು ತಿನ್ನುವ ಸಿಹಿ ತಿನಿಸನ್ನು ಪೋಸ್ಟ್ ಮೂಲಕ ಕಳುಹಿಸಿ ವ್ಯಂಗ್ಯವಾಡಲಾಗಿದೆ. ಇದು ಒಂದು ರೀತಿ ರಮ್ಯಾ ಅವರಿಗೆ ತಿರುಗೇಟು ನೀಡುವ ಪ್ರಯತ್ನದಂತೆ ಕಾಣುತ್ತಿದೆ. ಏಕೆಂದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಮ್ಯಾ ಟೀಕೆ ಮಾಡಿದ್ದರು.
ಮೋದಿ ಸರಕಾರದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ. ದೇಶದಲ್ಲಿ ಬರಗಾಲ ವಿಪರೀತವಾಗಿ ಇರುವ ವೇಳೆಯಲ್ಲೂ ಪ್ರಧಾನಿ ವಿದೇಶ ಪ್ರವಾಸ ಮಾಡಿದ್ದಾರೆ ಎಂದು ರಮ್ಯಾ ಟೀಕೆ ಮಾಡಿದ್ದರು. ಈ ಎಲ್ಲ ಟೀಕೆಗಳಿಗೆ ಉತ್ತರ ಎಂಬಂತೆ ಬಿಜೆಪಿ ಕಾರ್ಯಕರ್ತರು ಅಣಕವಾಡಿದ್ದಾರೆ. ಸಾಮಾಜಿಕ ಜಾಲತಾಣ ನಿರ್ವಹಣೆ ಕುರಿತು ಬೇರೆ ಯಾವುದಾದರೂ ದೇಶದಿಂದ ತರಬೇತಿ ಪಡೆದುಕೊಳ್ಳಿ ಎಂದು ಕಾಲೆಳೆದಿದ್ದಾರೆ.[ಓದುಗರು ಕೇಳಿರುವ ಪ್ರಶ್ನೆಗಳಿಗೆ ರಮ್ಯಾ ಉತ್ತರಿಸುವರೆ?]
ಅಷ್ಟೇ ಅಲ್ಲ, ಮಕ್ಕಳು ತಿನ್ನುವ ಸಿಹಿ ತಿನಿಸನ್ನು ಪೋಸ್ಟ್ ಮೂಲಕ ಕಳುಹಿಸಿರುವ ಬಿಜೆಪಿ ಕಾರ್ಯಕರ್ತರಾದ ಮಂಜುನಾಥ್, ಶಿವಕುಮಾರ್ ಆರಾಧ್ಯ ರಮ್ಯಾಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹೊಸ ಜವಾಬ್ದಾರಿಯನ್ನು ಇತ್ತೀಚೆಗಷ್ಟೇ ವಹಿಸಿಕೊಂಡ ರಮ್ಯಾ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡು, ಮಾಧ್ಯಮಗಳ ಮುಂದೆ ಬಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನ ಇಮೇಜ್ ಕಾಯ್ದುಕೊಂಡು, ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಜನ ಜಾಗೃತಿ ಮೂಡಿಸುವ ಹೊಣೆ ಅವರ ಮೇಲಿದೆ.