ನಿಗಮ ಮಂಡಳಿ ಅಧಿಕಾರ ಪಡೆಯಲು ಮಂಡ್ಯದವರ ಕಸರತ್ತು!
ಮಂಡ್ಯ, ಜುಲೈ 14 : ನಿಗಮ-ಮಂಡಳಿ, ಪ್ರಾಧಿಕಾರಕ್ಕೆ ನೇಮಕ ಮಾಡಿದ್ದ ಅಧ್ಯಕ್ಷ-ಉಪಾಧ್ಯಕ್ಷರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಈ ನಡುವೆ ಮಂಡ್ಯ ಜಿಲ್ಲಾ ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ ಮೂಡಿದೆ.
ಹಲವು ಮುಖಂಡರು ಅಧಿಕಾರ ಪಡೆಯುವುದಕ್ಕೆ ತಮ್ಮ ಬೆಂಬಲಿಗ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಎರಡು ವರ್ಷಗಳಿಂದ ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದ್ದು, ಈಗ ಬದಲಾವಣೆಗೆ ಸರ್ಕಾರ ಒಲವು ತೋರಿದ್ದು, ಇದರ ಬೆನ್ನಲ್ಲೇ ಆಕಾಂಕ್ಷಿಗಳಿಂದ ಲಾಭಿಯೂ ತೀವ್ರಗೊಳ್ಳುತ್ತಿದೆ.
ಅಲ್ಲದೆ ಸ್ವತಃ ಮುಖ್ಯಮಂತ್ರಿಗಳೇ ಹೊಸಬರಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ತಿಳಿಸಿರುವುದರಿಂದ ಹುದ್ದೆಗಳನ್ನು ಪಡೆಯಲು ಲಾಬಿ ನಡೆಯುತ್ತಿದೆ. ಆಕಾಂಕ್ಷಿಗಳು ಹಿರಿಯ ನಾಯಕರ ಮೂಲಕ ಪ್ರಭಾವ ಬೀರಲು ಸಿದ್ಧರಾಗುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರದ್ದುಪಡಿಸಿರುವ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರ ಪಟ್ಟಿಯಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷರ ಹೆಸರೂ ಸೇರಿದೆ. ಕಳೆದೆರಡು ವರ್ಷಗಳಿಂದ ಮೈಷುಗರ್ ಸಕ್ಕರೆ ಕಾರ್ಖಾನೆಗೆ ಶಿವಲಿಂಗೇಗೌಡ ಅಧ್ಯಕ್ಷರಾಗಿದ್ದರು. ಆ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿಎಂ ಆಪ್ತ ಎಂದೇ ಗುರುತಿಸಿಕೊಂಡಿರುವ ಎಲೆಚಾಕನಹಳ್ಳಿ ಬಸವರಾಜು ಅಧ್ಯಕ್ಷರಾಗುವುದಕ್ಕೆ ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ.

ಎಸ್ಎಂ ಕೃಷ್ಣ ಮೂಲಕ ಸಿಎಂಗೆ ಹೂತಗೆರೆ ಪ್ರಸನ್ನ ಲಾಬಿ
ಮದ್ದೂರು ತಾಲೂಕಿನ ಹೂತಗೆರೆ ಪ್ರಸನ್ನ ಮೈಸೂರು ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಅಧ್ಯಕ್ಷ ಅಥವಾ ಕೆಎಸ್ಟಿಡಿಸಿ ಉಪಾಧ್ಯಕ್ಷ ಸ್ಥಾನ ನೀಡುವಂತೆ ಮಾಜಿ ಸಿಎಂ ಎಸ್. ಎಂ. ಕೃಷ್ಣ ಅವರಿಂದ ಶಿಫಾರಸು ಪತ್ರ ಪಡೆದು ಸಿಎಂ ಬಸವರಾಜ ಬೊಮ್ಮಾಯಿಗೆ ನೀಡಿದ್ದಾರೆ. ಮೂರು ವರ್ಷದ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಎಸ್. ಎಂ. ಕೃಷ್ಣ ಶಿಫಾರಸ್ಸಿನ ಮೇರೆಗೆ ಮನ್ಮುಲ್ ನಿರ್ದೇಶಕ ಸ್ಥಾನಕ್ಕೆ ಸರಕಾರದಿಂದ ಹೂತಗೆರೆ ಪ್ರಸನ್ನ ನಾಮನಿರ್ದೇಶನಗೊಂಡಿದ್ದರು. ಆದರೆ, ತಕ್ಷಣವೇ ಆ ಆದೇಶವನ್ನು ಹಿಂಪಡೆಯಲಾಗಿತ್ತು. ಈಗ ಅವರನ್ನು ಪರಿಗಣಿಸುವಂತೆ ಕೋರಿದ್ದು, ಎಸ್. ಎಂ. ಕೃಷ್ಣ ಕೋರಿಕೆಗೆ ಸಿಎಂ ಸ್ಪಂದನೆ ಹೇಗಿರುತ್ತದೆ? ಎನ್ನುವುದನ್ನು ಕಾದುನೋಡಬೇಕಿದೆ.

ಕಾಡಾ ಮೇಲೆ ಕೆ. ಎಸ್. ನಂಜುಂಡೇಗೌಡ ಕಣ್ಣು
ಮೈಸೂರಿನ ಕಾವೇರಿ ಅಚ್ಚುಕಟ್ಟು ಪ್ರಾಕಾರದ ಮೇಲೆ ಕೆ. ಎಸ್. ನಂಜುಂಡೇಗೌಡ ದೃಷ್ಟಿ ನೆಟ್ಟಿದ್ದಾರೆ. ಈ ಹಿಂದೆ ಜಿಲ್ಲೆಯವರೇ ಆದ ಎನ್. ಶಿವಲಿಂಗಯ್ಯ ಅಧ್ಯಕ್ಷರಾಗಿದ್ದರು. ಮಾಜಿ ಸಿಎಂ ಎಸ್. ಎಂ. ಕೃಷ್ಣ ಶಿಫಾರಸ್ಸಿನ ಮೇರೆಗೆ ಅವರಿಗೆ ಹುದ್ದೆ ನೀಡಲಾಗಿತ್ತು. ಈಗ ಅದೇ ಹುದ್ದೆಯನ್ನು ಮಂಡ್ಯ ಜಿಲ್ಲೆಯವರಿಗೆ ನೀಡಿದಲ್ಲಿ ಕೆ. ಎಸ್. ನಂಜುಂಡೇಗೌಡರಿಗೆ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ.

ಡಾ. ಸಿದ್ದರಾಮಯ್ಯ ಮತ್ತೊಮ್ಮೆ ಪ್ರಯತ್ನ
ಬಿಜೆಪಿ ಪಕ್ಷದಲ್ಲಿರುವ ಹಿರಿಯರಾದ ಡಾ. ಸಿದ್ದರಾಮಯ್ಯ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಅಧಿಕಾರ ಪಡೆಯುವುದಕ್ಕೆ ಸಾಕಷ್ಟು ಪ್ರಯತ್ನ ನಡೆಸಿದರೂ ಈವರೆಗೂ ಸಿಕ್ಕಿಲ್ಲ. ಆದರೂ ನಿರಾಶರಾಗದೆ ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ನಿಷ್ಠಾವಂತರ ಕಡೆಗಣನೆಗೆ ಅಸಮಾಧಾನ
ಇನ್ನುಳಿದಂತೆ ಬಿಜೆಪಿ ಮಾಜಿ ಅಧ್ಯಕ್ಷ ಹೆಚ್. ಮಹೇಶ್, ಜಿಪಂ ಮಾಜಿ ಉಪಾಧ್ಯಕ್ಷ ಕೆ. ಪ್ರಭಾಕರ್, ಮನ್ಮುಲ್ ಮಾಜಿ ನಿರ್ದೇಶಕ ಶೀಳನೆರೆ ಅಂಬರೀಶ್, ಬಿಜೆಪಿ ಮುಖಂಡರಾದ ಹೆಚ್. ಆರ್. ಅರವಿಂದ್, ಹೊಸಹಳ್ಳಿ ನಾಗೇಶ್, ಡಾ. ಸದಾನಂದ ಸೇರಿದಂತೆ ಹಲವಾರು ಮಂದಿ ನಿಗಮ-ಮಂಡಳಿಗಳ ಅಧ್ಯಕ್ಷ -ಉಪಾಧ್ಯಕ್ಷರಾಗುವ ಆಕಾಂಕ್ಷೆಯನ್ನು ಹೊಂದಿದ್ದರೂ ಇವರ ಬೇಡಿಕೆಗಳಿಗೆ ನಾಯಕರಿಂದ ಸರಿಯಾದ ಸ್ಪಂದನೆಯೇ ಸಿಗುತ್ತಿಲ್ಲ.
ಪಕ್ಷ ಸಂಘಟನೆ, ಕಾರ್ಯಕ್ರಮಗಳ ಆಯೋಜನೆಗಷ್ಟೇ ಸೀಮಿತವಾಗಿ ದುಡಿಸಿಕೊಳ್ಳುತ್ತಿರುವುದರಿಂದ ತೀವ್ರ ಬೇಸರಗೊಂಡಿದ್ದಾರೆ. ನಿಷ್ಠಾವಂತ ಮುಖಂಡರು-ಕಾರ್ಯಕರ್ತರಿಗೆ ಅಕಾರ ದೊರಕಿಸಿಕೊಡದೆ ಪಕ್ಷದ ನಾಯಕರು ಕಡೆಗಣಿಸುತ್ತಿರುವ ಬಗ್ಗೆ ಒಡಲಾಳದಲ್ಲಿ ನೋವಿದ್ದರೂ ಬಹಿರಂಗವಾಗಿ ತೋರ್ಪಡಿಸಿಕೊಳ್ಳಲಾಗುತ್ತಿಲ್ಲ. ಆದರೂ ಅಧಿಕಾರ ಸಿಗುವ ಆಶಾಭಾವನೆಯೊಂದಿಗೆ ಈಗಲೂ ಎದುರುನೋಡುತ್ತಲೇ ಇದ್ದಾರೆ.
ಅಧಿಕಾರದ ಕುರ್ಚಿಯಲ್ಲಿ ಒಮ್ಮೆಯಾದರೂ ಕೂರಬೇಕೆನ್ನುವುದು ಹಲವರ ಕನಸಾಗಿದೆ. ಈ ಕನಸನ್ನು ಹೊತ್ತವರು ನಾಯಕರಿಗೆ ಬೆನ್ನುಹತ್ತಿ ಅಧಿಕಾರ ಹಿಡಿಯುವ ಸಾಹಸಕ್ಕೆ ಇಳಿದಿದ್ದಾರೆ. ಇನ್ನು ಕೆಲವರು ಈಗ ಕೊಡುವುದಾದರೆ ರಾಜ್ಯಮಟ್ಟದ ನಿಗಮ-ಮಂಡಳಿ ಕೊಡುವಂತೆ ಪಟ್ಟು ಹಿಡಿದು ಹಿರಿಯ ನಾಯಕರಿಂದ ಒತ್ತಡ ಹೇರುತ್ತಿದ್ದಾರೆ.












Click it and Unblock the Notifications