Live : ಮಂಡ್ಯದಲ್ಲಿ ಶಾಲಾ-ಕಾಲೇಜುಗಳಿಗೆ 2 ದಿನ ರಜೆ
ಮಂಡ್ಯ, ಸೆಪ್ಟೆಂಬರ್ 06 : ಮಂಡ್ಯದ ಕಾಂಗ್ರೆಸ್ ಕಚೇರಿ ಮೇಲೆ ಪ್ರತಿಭಟನಾನಿರತರು ದಾಳಿ ಮಾಡಿದ್ದಾರೆ. ಕಾರ್ಯಕರ್ತರನ್ನು ತಡೆಯಲು ಬಂದ ಪೊಲೀಸರ ಜೊತೆ ಅವರು ವಾಗ್ವಾದ ನಡೆಸಿದರು.
* ಕಾವೇರಿ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಮಂಡ್ಯದ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಣೆ ಮಾಡಲಾಗಿದೆ.[ಸರ್ಕಾರಿ ಬಸ್ಸುಗಳಿಗೆ ತಟ್ಟಿದ ಕಾವೇರಿ ಹೋರಾಟ]

* ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನಿವಾಸಕ್ಕೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸಕ್ಕೆ ವೇದಿಕೆ ರಾಜ್ಯಾಧ್ಯಕ್ಷ ನಿಲೇಶ್ ಗೌಡ ನೇತೃತ್ವದಲ್ಲಿ ಮುತ್ತಿಗೆ ಹಾಕಿದ್ದು, ತಮಿಳುನಾಡಿಗೆ ನೀರುಹರಿಸಬಾರದು ಎಂದು ಆಗ್ರಹಿಸಲಾಗುತ್ತಿದೆ.[ಬೆಂಗಳೂರಿಗರೇ ಎಚ್ಚರ!, ಕುಡಿಯೋಕೆ ಕಾವೇರಿ ನೀರು ಸಿಗಲ್ಲ!]
* ಮಂಡ್ಯದಲ್ಲಿ ತೀವ್ರಗೊಂಡ ಕಾವೇರಿ ಹೋರಾಟ. ಸಂಜಯ್ ಥಿಯೇಟರ್ ಮುಂದಿನ ಅಂಬರೀಶ್ ಫೆಕ್ಸ್ ಕಿತ್ತುಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು.[ಕಾವೇರಿ ವಿವಾದ : ಹೊಸೂರು, ಮೈಸೂರು ರಸ್ತೆಗೆ ಕಾಲಿಡಬೇಡಿ!]
* ಕಾವೇರಿ ಪ್ರತಿಭಟನೆ ಹಿನ್ನಲೆಯಲ್ಲಿ ತಮಿಳುನಾಡಿನಿಂದ ಬರುವ 481 ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.[ಕಾವೇರಿ ವಿವಾದ : ಸರ್ವಪಕ್ಷ ಸಭೆ ಕರೆದ ಸಿದ್ದರಾಮಯ್ಯ]
* ಮೈಸೂರಿನಿಂದ ಮಂಡ್ಯಕ್ಕೆ ಸರ್ಕಾರಿ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಗ್ರಾಮಾಂತರ ಸಾರಿಗೆ ಬಸ್ಸುಗಳನ್ನು ಕೆಎಸ್ಆರ್ಟಿಸಿ ಸ್ಥಗಿತಗೊಳಿಸಿದೆ.

* ಕಾವೇರಿ ಹೋರಾಟದಲ್ಲಿ ಮೈಸೂರಿನ ಜನರು ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಗಿದೆ. ಮೈಸೂರು ನಗರಕ್ಕೆ ನೀರು ಪೂರೈಕೆ ಮಾಡುವ ಕೇಂದ್ರಗಳಿಗೆ ಪ್ರತಿಭಟನಾನಿರತರು ಬೀಗ ಹಾಕಿದ್ದಾರೆ.[ಗಾಯದ ಮೇಲೆ ಬರೆ: ತಮಿಳುನಾಡಿಗೆ ನೀರು ಹರಿಸಿ ಎಂದ ಸುಪ್ರೀಂ]
* ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿರುವುದರಿಂದ 4 ದಿನಗಳ ಕಾಲ ಕೆಆರ್ಎಸ್ಗೆ ಪ್ರವೇಶ ನಿಷೇಧಿಸಲಾಗಿದೆ. ಈ ಕುರಿತು ಮಂಡ್ಯ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ.

* ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ತಮಿಳುನಾಡಿನ ವಾಹನಗಳನ್ನು ಹೊಸೂರು ಬಳಿ ನಿಲ್ಲಿಸಲಾಗಿದೆ. ಯಾವುದೇ ವಾಹನಗಳು ಬೆಂಗಳೂರು ನಗರ ಪ್ರವೇಶಿಸುತ್ತಿಲ್ಲ.[ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]
* 'ಇಂದಿನ ಮಂಡ್ಯ ಬಂದ್ನಲ್ಲಿ ಪ್ರತಿಮನೆಯಿಂದ ಒಬ್ಬರು ಪಾಲ್ಗೊಳ್ಳಬೇಕು. ರೈತರ ಪ್ರತಿಭಟನೆ ನಡುವೆಯೂ ನೀರು ಹರಿಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ' ಎಂದು ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಮಾದೇಗೌಡ ಅವರು ಎಚ್ಚರಿಕೆ ನೀಡಿದರು.
ಹಿಂದಿನ ಸುದ್ದಿಗಳು : ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ ಮಂಗಳವಾರ ಮಂಡ್ಯ ಬಂದ್ಗೆ ಕರೆ ನೀಡಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ, ಸಂಜಯ್ ಸರ್ಕಲ್, ಶ್ರೀರಂಗಪಟ್ಟಣ ಮುಂತಾದ ಕಡೆ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಎಸ್ಪಿ ಸುಧೀರಕುಮಾರ ರೆಡ್ಡಿ ಮನವಿ ಮಾಡಿದ್ದಾರೆ.
ಮಂಡ್ಯ ಬಂದ್ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೊಲ್ವೋ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮುಂಜಾನೆಯಿಂದ ಕೇವಲ 10 ಸರ್ಕಾರಿ ಬಸ್ಸುಗಳು ಮೈಸೂರಿಗೆ ತೆರಳಿದ್ದು, ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ.
ಮಂಡ್ಯ ಬಂದ್ ಹಿನ್ನಲೆಯಲ್ಲಿ 950 ಅರೆಸೇನಾ ಪಡೆ ಸಿಬ್ಬಂದಿ, 1300 ಸಿವಿಎಲ್ ಪೊಲೀಸ್ ಸೇರಿದಂತೆ 2400 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜನೆಗಾಗಿ ಮಾಡಲಾಗಿದೆ.

* ಬೂತನಹೊಸೂರು ಗ್ರಾಮಸ್ಥರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ
* ಮಂಡ್ಯ-ಕೆ.ಎಂ.ದೊಡ್ಡಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುತ್ತಿದೆ
ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ಇನ್ನೂ ತಮಿಳುನಾಡಿಗೆ ನೀರು ಹರಿಸಿಲ್ಲ. 124 ಅಡಿ ಗರಿಷ್ಠ ಸಾರ್ಮರ್ಥ್ಯದ ಜಲಾಶಯದಲ್ಲಿ ಸದ್ಯ 93 ಅಡಿ ನೀರಿನ ಸಂಗ್ರಹವಿದೆ. ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 15000 ಕ್ಯೂಸೆಕ್ ನೀರನ್ನು 10 ದಿನಗಳ ಕಾಲ ಹರಿಸಬೇಕಾಗಿದೆ.
ಮಂಡ್ಯ ಜಿಲ್ಲಾ ಸಂಚಾರಿ ಪೊಲೀಸರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಂಚಾರ ಬಂದ್ ಆಗಿರುವ ಮಾರ್ಗಗಳ ಬಗ್ಗೆ ಕ್ಷಣ-ಕ್ಷಣದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.












Click it and Unblock the Notifications