ಕಾಲಭೈರವೇಶ್ವರನಿಗೆ ನಮೋ ಎಂದ ಎಚ್ಡಿಕೆ ದಂಪತಿ!
ಮೂರು ಅಮಾವಾಸ್ಯೆಗಳಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರೆ ಬಯಸಿದ್ದು ಈಡೇರುತ್ತಂತೆ! ಅದಕ್ಕಾಗಿಯೇ ಕುಮಾರಸ್ವಾಮಿ ಅವರು ಪತ್ನಿ ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿದ್ದಾರೆಯೇ?
ಮಂಡ್ಯ, ಏಪ್ರಿಲ್ 27: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗುವ ಬಯಕೆ ಹೊಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಮಾವಾಸ್ಯೆ ದಿನ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಏಕೆಂದರೆ ಮೂರು ಅಮಾವಾಸ್ಯೆಗಳಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರೆ ಬಯಸಿದ್ದನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. ಹೀಗಾಗಿ ಕುಮಾರಸ್ವಾಮಿ ಅವರು ಪತ್ನಿ ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿರಬಹುದೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.[ಕೂಲಿ ನೀಡಿದ ನಂಜನಗೂಡು ಜನತೆಗೆ ಧನ್ಯವಾದ: ಸಿಎಂ]

ಈ ಕುರಿತಂತೆ ಮಾತನಾಡಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಮೂರು ಅಮಾವಾಸ್ಯೆಯಂದು ದೇವಾಲಯಕ್ಕೆ ಭೇಟಿ ನೀಡಿದರೆ ಕಾಲಭೈರವೇಶ್ವರ ಸಂಕಲ್ಪ ಈಡೇರಿಸುತ್ತಾನೆ ಎಂಬ ನಂಬಿಕೆಯಿದ್ದು, ಹೀಗಾಗಿ ಕುಟುಂಬ ಸಮೇತನಾಗಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದಾಗಿ ಹೇಳಿದ್ದಾರೆ.

ನಾಡಿಗೆ ಬಂದೊದಗಿರುವ ಸಂಕಷ್ಟ ದೂರ ಮಾಡುವ ಸಲುವಾಗಿ ಇನ್ನೂ ಎರಡು ಅಮಾವಾಸ್ಯೆ ಪೂಜೆ ಸಲ್ಲಿಸಿ, ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲೆಂದು ದೇವರಲ್ಲಿ ಎಂದು ಪ್ರಾರ್ಥಿಸುತ್ತೇನೆ. ನಮಗೆ ರಾಜ್ಯದ ಅಭಿವೃದ್ಧಿಯ ಇಚ್ಛಾಶಕ್ತಿ ಇದೆ. ಆದ್ದರಿಂದ ದೇವರ ಮುಂದೆ ರಾಜ್ಯದ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಿರುವುದಾಗಿ ಈ ಸಂದರ್ಭದಲ್ಲಿ ಕುಮಾರ್ಸವಾಮಿ ಹೇಳಿದರು.
ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತ ನೋಡಿ ಜನತೆ ಭ್ರಮನಿರಸನಗೊಂಡಿದೆ. ನಾಡಿನ ಸಮಸ್ಯೆ ಪರಿಹರಿಸಲು ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು. ಅದಕ್ಕೆ ಜನತೆಯೇ ಹಾದಿ ಮಾಡಿಕೊಡಬೇಕೆಂದರು. ಇಲ್ಲಿಯೂ ಬಂಡಾಯ ಶಾಸಕ ಚಲುವರಾಯಸ್ವಾಮಿ ಬಗ್ಗೆ ಮಾತನಾಡಿ ಆ ದೇವರೇ ನೋಡಿಕೊಳ್ಳಲಿ ಎಂದರು.[ದೇವೇಗೌಡರಿಗೆ ಮತ್ತೊಮ್ಮೆ ಸಿದ್ದು ಕೃತಜ್ಞತೆ ಹೇಳಿದ್ದೇಕೆ?]

ಅಮೂಲ್ಯ ಪೂಜೆ
ನಟಿ ಅಮೂಲ್ಯ ಮತ್ತು ಭಾವಿ ಪತಿ ಶ್ರೀ ಕಾಲಭೈರವೇಶ್ವರಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರಲ್ಲದೆ, ತಮ್ಮ ವಿವಾಹದ ಆಮಂತ್ರಣ ಪತ್ರ ನೀಡಿ ಆತ್ಮೀಯವಾಗಿ ಆಹ್ವಾನಿಸಿದರು.
ಅಮಾವಾಸ್ಯೆ ಪೂಜೆ ಹಿನ್ನಲೆಯಲ್ಲಿ ಸಹಸ್ರಾರು ಜನ ಭಾಗವಹಿಸಿ ಕಾಲಭೈರವೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಕೃತಾರ್ಥರಾದರು.












Click it and Unblock the Notifications