ಒಂದೂವರೆ ವರ್ಷದಲ್ಲಿ KRSನ ಎಲ್ಲಾ ಗೇಟ್ಗಳನ್ನು ಬದಲಿಸಿ 'ಅಮೃತ ಮಹೋತ್ಸವ' ಆಚರಣೆ
ಮಂಡ್ಯ, ಜುಲೈ 21: ಕಾವೇರಿ, ಕಬಿನಿ, ಹಾರಂಗಿ ನೀರಾವರಿ ಯೋಜನೆ ಆಧುನೀಕರಣಕ್ಕಾಗಿ 480 ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಬುಧವಾರ ಬಸವರಾಜ ಬೊಮ್ಮಾಯಿ ದಂಪತಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು. ಬೊಮ್ಮಾಯಿ ಮೊದಲ ಬಾರಿಗೆ ಆಷಾಢ ಮಾಸದಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಎನಿಸಿಕೊಂಡರು. ಇನ್ನೂ ಕಳೆದ 14 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಕಾವೇರಿಯ ಒಡಲು ಕೆಆರ್ಎಸ್ ಜುಲೈನಲ್ಲಿ ತುಂಬಿದೆ.
ಇನ್ನು ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾವೇರಿ ತಾಯಿ ಈ ಭಾಗದ ಜೀವನದಿ. ಈ ಭಾಗದ ಭಾಗ್ಯದ ಬಾಗಿಲು ತೆಗೆದ ತಾಯಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಒಂದು ನದಿ ಆ ಪ್ರದೇಶದ ಕೇವಲ ಬೇಕು ಬೇಡಿಕೆಗಳನ್ನು ಪೂರೈಸುವುದು ಅಷ್ಟೇ ಅಲ್ಲ, ಒಂದು ಸಂಸ್ಕೃತಿಯನ್ನು ಹುಟ್ಟುಹಾಕುತ್ತದೆ. ಇಂತಹ ಈ ನದಿಯ ಸದುಪಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಮೈಸೂರಿನ ಮಹಾರಾಜರು ಈ ಅಣೆಕಟ್ಟೆಯನ್ನು ಕಟ್ಟಿದ್ದಾರೆ. ಅವರ ಶ್ರಮ, ತ್ಯಾಗ ಮರೆಯಲು ಸಾಧ್ಯವಿಲ್ಲ. ಇದರೊಂದಿಗೆ ವಿಶ್ವೇಶ್ವರಯ್ಯನವರನ್ನೂ ನಾವು ನೆನೆಯಬೇಕಾಗಿದೆ ಎಂದು ಹೇಳಿದರು.
ಜಲಾಶಯಗಳಿಂದ ನೀರು ಹರಿಯುವ ಎಲ್ಲಾ ನಾಲೆಗಳನ್ನು ಆಧುನೀಕರಣವನ್ನು ಮಾಡುತ್ತೇವೆ. ಕೊನೇ ಭಾಗದ ರೈತರಿಗೂ ನೀರು ತಲುಪಿಸುವುದು ನಮ್ಮ ಗುರಿಯಾಗಿದೆ. ಒಟ್ಟಾರೆ ಈ ಭಾಗದ ನೀರಾವರಿ ಯೋಜನೆಗೆ ಒತ್ತು ನೀಡುತ್ತೇವೆ. ಕೃಷಿ ಭೂಮಿಯನ್ನು ಕೆಐಎಬಿಡಿ ವಶಕ್ಕೆ ಪಡೆಯುವುದನ್ನು ಕೈಬಿಡುತ್ತೇವೆ. ಕೆ.ಆರ್.ಎಸ್. ಉನ್ನತೀಕಣಕ್ಕೆ ಅಗತ್ಯ ಕ್ರಮ ಕೈಗೊಂಡು ವಿಶೇಷ ಡಿಪಿಆರ್ ತಯಾರಿಸಿ ಅತ್ಯಾಧುನಿಕವಾಗಿ ಆಧುನೀಕರಣ ಮಾಡುವುದಾಗಿ ಭರವಸೆ ನೀಡಿದರು.

ಅಮೃತ ಮಹೋತ್ಸವದ ವೇಳೆಗೆ ಎಲ್ಲಾ ಗೇಟ್ ಬದಲಾವಣೆ
ನಾನು ನೀರಾವರಿ ಸಚಿವನಾಗಿದ್ದಾಗ ಇಲ್ಲಿಗೆ ಬಂದಿದ್ದೆ, ಆಗ ಕೃಷ್ಣರಾಜಸಾಗರ ಜಲಾಶಯದ ಹಳೇ ಗೇಟ್ಗಳು ಸಂಪೂರ್ಣ ಹಾಳಾಗಿದ್ದವು. ಇದರಿಂದ ಸಾಕಷ್ಟು ನೀರು ಪೋಲಾಗುತ್ತಿತ್ತು. ಅದನ್ನು ನೋಡಿ ನನಗೆ ನಿದ್ದೆಯೇ ಬಂದಿರಲಿಲ್ಲ. ತಕ್ಷಣ ಆ ಗೇಟ್ಗಳ ಬದಲಾವಣೆಗೆ ನಿರ್ಧಾರ ಮಾಡಿದೆ. ಅದರಂತೆ ಮೊದಲು 16 ಗೇಟ್ಗಳ ದುರಸ್ಥಿ ಮಾಡಿಸಿದೆ. ಇನ್ನೂ 61 ಗೇಟ್ಗಳನ್ನು ಬದಲಾವಣೆ ಮಾಡಬೇಕಿದೆ. ಇದಕ್ಕೆ 150 ಕೋಟಿ ರೂ ವೆಚ್ಚವಾಗುತ್ತದೆ. ಒಂದೂವರೆ ವರ್ಷದಲ್ಲಿ ಎಲ್ಲಾ ಗೇಟ್ಗಳನ್ನು ಬದಲಾವಣೆ ಮಾಡಿ ಕೆಆರ್ಎಸ್ನ 75 ವರ್ಷದ ಅಮೃತ ಮಹೋತ್ಸವ ಆಚರಿಸುವುದಾಗಿ ಭರವಸೆ ನೀಡಿದರು.

ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ಆರಂಭ
ಸರ್ಕಾರಿ ಸ್ವಾಮ್ಯದಲ್ಲೇ ಮೈಷುಗರ್ ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡಿದ್ದೇನೆ. ಈಗಾಗಲೇ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಆಗಸ್ಟ್ ಎರಡು, ಮೂರನೇ ವಾರದಲ್ಲಿ ಮೈಷುಗರ್ ಆರಂಭಕ್ಕೆ ಕ್ರಮ ವಹಿಸಲಾಗಿದೆ . ಈಗಾಗಲೇ ಅಗತ್ಯ ಹಣಕಾಸಿನ ನೆರವು ನೀಡಿದ್ದೇವೆ. ಇನ್ನೂ ಹೆಚ್ಚುವರಿ ಅನುದಾನ ಅಗತ್ಯಬಿದ್ದಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು.

ಅನುಮೋದನೆ ಸಿಕ್ಕ ಕೂಡಾಲೆ ಮೇಕೆದಾಟು ಕಾಮಗಾರಿ
ಆದಷ್ಟು ಬೇಗ ಮೇಕೆದಾಟು ಯೋಜನೆ ಕಾಮಗಾರಿ ಪ್ರಾರಂಭವಾಗಲಿದೆ. ನಮ್ಮ ವಕೀಲರು ಪ್ರಬಲವಾಗಿ ವಾದ ಮಂಡಿಸಿದ್ದಾರೆ. ಮುಂದಿನ ವಾರ ನಮಗೆ ಅನುಮತಿ ಸಿಗುವ ಸಾಧ್ಯತೆ ಇದೆ. ಅನುಮತಿ ಸಿಕ್ಕ ಕೂಡಲೇ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಮೈಸೂರು ಪ್ರಾಂತ್ಯದ ರೈತರು ಶ್ರಮ ಜೀವಿಗಳು. ರೈತರ ಪರವಾದ ಸರ್ಕಾರ ನಿಮಗೆ ಸಿಕ್ಕಿದೆ. ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಸಮರ್ಪಣಾ ಭಾವದಿಂದ ಕೆಲಸ ಮಾಡುವ ಮನೋಭಾವ ಎಲ್ಲರೂ ರೂಢಿಸಿಕೊಳ್ಳೋಣ. ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡೋಣ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ಗೆ ಪ್ರತಿಭಟನೆ ಮಾಡುವುದೇ ಖಾಯಂ
ಕಾಂಗ್ರೆಸ್ನವರು ಯಾವಾಗಲೂ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಾರೆ. ಅಧಿಕಾರ ಇದ್ದಾಗ ಒಂದು ಥರ ಬೆಂಬಲ ನೀಡುತ್ತಾರೆ. ಅಧಿಕಾರವಿಲ್ಲದಿದ್ದಾಗ ಮತ್ತೊಂದು ರೀತಿಯಲ್ಲಿ ಬೆಂಬಲ ನೀಡುತ್ತಾರೆ ಎಂದು ಕಾಂಗ್ರೆಸ್ ಪ್ರತಿಭಟನೆಗೆ ತಿರುಗೇಟು ನೀಡಿದರು. ಅವರು ಖಾಯಂ ಆಗಿಯೇ ಪ್ರತಿಭಟನೆ ಮಾಡುತ್ತಲೇ ಇರಬೇಕಾದ ಪರಿಸ್ಥಿತಿ ಈಗ ಇದೆ. ಮುಂದೆಯೂ ಅದೇ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.












Click it and Unblock the Notifications