KRS Dam: ಅಣೆಕಟ್ಟಿನ ಮುಂದೆ ಇರುವ ಪರ್ಷಿಯನ್ ಭಾಷೆಯ ನಾಮಫಲಕ ತೆರವುಗೊಳಿಸುವಂತೆ ಒತ್ತಾಯ
ಮಂಡ್ಯ, ಸೆಪ್ಟೆಂಬರ್, 13: ಕನ್ನಂಬಾಡಿ ಅಣೆಕಟ್ಟೆಯಲ್ಲಿರುವ ಅನುಮಾನಾಸ್ಪದ ಪರ್ಷಿಯನ್ ಭಾಷೆಯ ನಾಮಫಲಕದ ಶಿಲೆಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಜಿಲ್ಲಾ ಬಿಜೆಪಿ ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್, ಕಚೇರಿ ಕಾರ್ಯದರ್ಶಿ ಹರ್ಷ ಇತರರು ಡಿಸಿಗೆ ಮನವಿ ಸಲ್ಲಿಸಿ ತಕ್ಷಣ ಕಲ್ಲನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇರಾನ್ ದೇಶದ ಶಿಲಾ ಶಾಸನವನ್ನ ಟಿಪ್ಪು ಸುಲ್ತಾನ್ ಶಾಸನ ಅಂತ ಸುಳ್ಳು ಹೇಳಲಾಗುತ್ತಿದೆ. ಪರ್ಷಿಯನ್ ಭಾಷೆಯ ಶಾಸನದಲ್ಲಿ ಎಲ್ಲೂ ಟಿಪ್ಪು ಅಥವಾ ಅಣೆಕಟ್ಟೆಯ ಬಗ್ಗೆ ಮಾಹಿತಿ ಇಲ್ಲ. ಬದಲಾಗಿ ದರಾಜ್ ಅರ್ಕಾನ್ ಬಜಾರ್ ಎಂಬ ಇರಾನ್ ದೇಶದ ಸಿಹಿಗೆಣಸಿನ ಮಾರುಕಟ್ಟೆ ಬಗ್ಗೆ ಉಲ್ಲೇಖ ಇದೆ. ಇದನ್ನು ಇಲ್ಲಿಗೆ ತಂದು ಸುಳ್ಳು ಇತಿಹಾಸ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಟಿಪ್ಪು ಸುಲ್ತಾನ್ 1799ರ ಮೇ 4ರಂದು ಮೃತಪಟ್ಟಿದ್ದು, ಕನ್ನಂಬಾಡಿ ಕಟ್ಟೆಯು 1911ರಲ್ಲಿ ಪ್ರಾರಂಭವಾಗಿ 1932ಕ್ಕೆ ಲೋಕಾಪರ್ಣೆಗೊಂಡಿದೆ. ಅಂದಿಗೆ ಟಿಪ್ಪು ಮರಣ ಹೊಂದಿ 133 ವರ್ಷಗಳು ಉರುಳಿದ್ದವು. ಹಳೇ ಮೈಸೂರು ಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಮಾಡಿರುವ ಸಾಮಾಜಿಕ ಕ್ರಾಂತಿಯಿಂದಾಗಿ ಮನೆ ಮಾತಾಗಿದೆ. ಹಲವರು ನಾಲ್ವಡಿ ಹಾಗೂ ವಿಶ್ವೇಶ್ವರಯ್ಯ ಅವರ ಫೋಟೋಗಳನ್ನು ತಮ್ಮ ಮನೆಗಳಲ್ಲಿಟ್ಟು ಪೂಜೆ ಸಲ್ಲಿಸುತ್ತಿದ್ದಾರೆ ಎಂದರು.
ಕನ್ನಂಬಾಡಿ ಕಟ್ಟೆ ಕಟ್ಟುವ ಸಂದರ್ಭದಲ್ಲಿ ಹಣದ ಕೊರತೆಯಾದಾಗ ಅರಮನೆಯ ಚಿನ್ನಾಭರಣಗಳನ್ನು ಮುಂಬೈನಲ್ಲಿ ಮಾರಿ ಅಣೆಕಟ್ಟೆಯನ್ನು ಕಟ್ಟಿಸಿ ಲಕ್ಷಾಂತರ ಮಂದಿ ರೈತರ ಮನೆ ದೀಪವಾಗಿದ್ದಾರೆ. ಇಂತಹ ನಾಲ್ವಡಿಯವರ ಪರೋಪಕಾರಿ ಕೆಲಸವನ್ನು ಹೈಜಾಕ್ ಮಾಡುವ ಕೆಲಸವಾಗಿದೆ ಎಂದು ಅಲ್ಲಿ ಸ್ಥಾಪಿಸಲಾಗಿರುವ ಪರ್ಷಿಯನ್ ಲಿಪಿಯ ಬರಹಕ್ಕೂ ಕನ್ನಂಬಾಡಿ ಕಟ್ಟೆಗೂ ಯಾವುದೇ ಸಂಬಂಧವಿಲ್ಲ. ಟಿಪ್ಪು ಸುಲ್ತಾನ್ ಹೆಸರಾಗಲೀ, ಕರ್ನಾಟಕ ಹೆಸರಾಗಲಿ ಬರಹದಲ್ಲಿ ಇಲ್ಲ.
ಪರ್ಷಿಯನ್ ಬಲ್ಲ ಪರಿಣಿತರು ಇರಾನ್ ಮಾರುಕಟ್ಟೆಯ ಕಲ್ಲು ಎಂದಿದ್ದಾರೆ. ಗೂಗಲ್ ಟ್ರಾನ್ಸ್ ಲೇಟ್ನಲ್ಲಿ ಕೂಡ ಅದೇ ರೀತಿ ತೋರಿಸುತ್ತಿದೆ. ಇತಿಹಾಸ ತಿರುಚುವ ದೃಷ್ಟಿಯಲ್ಲಿ ಕಲ್ಲನ್ನು ಕೆ.ಆರ್.ಎಸ್ ಅಣೆಕಟ್ಟೆಯ ಮುಖ್ಯದ್ವಾರದ ಬಳಿ ಸ್ಥಾಪಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಈ ಕುರಿತು ಪರಾಮರ್ಶೆ ಮಾಡಿ ಕಲ್ಲು ತೆರವು ಮಾಡುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಬಿಜೆಪಿ ಮುಖಂಡರಾದ ಶಿವಕುಮಾರ್ ಕೆಂಪಯ್ಯ, ಪ್ರಸನ್ನ, ಶಶಿಕುಮಾರ್, ಧರಣಿ, ಶಂಕರ್, ಬಾಲಚಂದ್ರ, ವಿನೋಭ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications