ಕೊಳವೆ ಬಾವಿಗಳಿಗೆ ಜೀವಸೆಲೆಯಾದ ಕೃಷಿಹೊಂಡ!
ಮಂಡ್ಯ, ನವೆಂಬರ್ 23; ಕಳೆದ ಕೆಲವು ವರ್ಷಗಳಿಂದ ಉತ್ತಮ ಮಳೆಯಾಗಿದ್ದರಿಂದ ಇವತ್ತು ಜಿಲ್ಲೆಯಲ್ಲಿರುವ ಕೆರೆಗಳು ತುಂಬಿ ತುಳುಕುತ್ತಿವೆ. ಆದರೆ ಈ ಹಿಂದೆ ಹೀಗಿರಲಿಲ್ಲ. ಬರದ ಕಾರಣದಿಂದಾಗಿ ಬಹುತೇಕ ಕೆರೆಗಳು ಬತ್ತಿಹೋಗಿದ್ದರೆ, ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಾಯವಾಗಿತ್ತು. ಇದರಿಂದ ರೈತರು ಕೃಷಿ ಮಾಡುವುದಿರಲಿ ಜಾನುವಾರುಗಳಿಗೆ ಪರದಾಡುವಂತಾಗಿತ್ತು.
ಇದೀಗ ಮಳೆ ಸುರಿಯುತ್ತಿದೆ. ಕೆರೆಕಟ್ಟೆಗಳು, ನದಿತೊರೆಗಳಲ್ಲಿ ನೀರು ಕಾಣಿಸುತ್ತಿದೆ. ಆದರೆ ಮಳೆಗೆ ಹಿಡಿಶಾಪ ಹಾಕುವ ಬದಲಿಗೆ ನೀರನ್ನು ಸಂರಕ್ಷಿಸುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾದರೂ ಅಂತರ್ಜಲವನ್ನು ಸಂರಕ್ಷಿಸಿಕೊಳ್ಳಲು ಸಾಧ್ಯವಾಗಬಹುದೇನೋ?.
ಬಹುಶಃ ಈ ಹಿಂದೆಯೇ ಇರುವ ಕೆರೆಗಳ ಹೂಳನ್ನು ತೆಗೆದು ಅಭಿವೃದ್ಧಿಪಡಿಸಿದ್ದರೆ ಈ ವೇಳೆ ಅವುಗಳಲ್ಲಿ ನೀರನ್ನು ಇನ್ನಷ್ಟು ಸಂಗ್ರಹಿಸಿಡಬಹುದಾಗಿತ್ತು. ನಾವು ಕೆರೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಅಂತರ್ಜಲದ ಸಮಸ್ಯೆಯನ್ನು ಹಿಂದೆ ಅನುಭವಿಸಿದ್ದೇವೆ. ಇದೀಗ ಮಳೆ ಸುರಿದಿದ್ದು ಮಳೆ ನೀರನ್ನು ಸಂರಕ್ಷಣೆ ಮಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ.

ಕೊಳವೆ ಬಾವಿಗೆ ನೀರಿನ ಆಸರೆ; ಇನ್ನೊಂದೆಡೆ ರೈತರು ತಮ್ಮ ಜಮೀನಿನಲ್ಲಿ ನಿರ್ಮಿಸಿದ್ದ ಕೃಷಿಹೊಂಡಗಳು ಈಗ ಉಪಯೋಗಕ್ಕೆ ಬರುತ್ತಿವೆ. ಮಳೆ ಬಂದಾಗ ತಗ್ಗು ಪ್ರದೇಶದಲ್ಲಿರುವ ಕೃಷಿಹೊಂಡಕ್ಕೆ ನೀರು ಹರಿದು ಬಂದು ಸಂಗ್ರಹಣೆಯಾಗುವುದರಿಂದ ಭೂಮಿಯ ತೇವಾಂಶ ಉಳಿಯುವುದಲ್ಲದೆ, ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗಲಿದೆ.
ಇದಕ್ಕೆ ಕೆ. ಆರ್. ಪೇಟೆ ತಾಲೂಕಿನ ಕಾಡುಮೆಣಸ ಗ್ರಾಮದ ಬಳಿ ಕೆ. ಎಸ್. ಸಂತೋಷ್ ಕುಮಾರ್ ಎರಡು ಎಕರೆಯಲ್ಲಿ ನಿರ್ಮಿಸಿರುವ ಕೃಷಿಹೊಂಡ ಸಾಕ್ಷಿಯಾಗಿದೆ. ಬರಡಾಗಿದ್ದ ಜಮೀನಿಗೆ ಈ ಕೃಷಿ ಹೊಂಡದಲ್ಲಿ ಸಂಗ್ರಹವಾಗಿರುವ ನೀರು ಆಸರೆಯಾಗಿದ್ದು, ಸುತ್ತಮುತ್ತಲಿರುವ ಕೊಳವೆ ಬಾವಿಗೆ ಜೀವಸೆಲೆಯಾಗಿದೆ ಎಂದರೆ ತಪ್ಪಾಗಲಾರದು.
8 ಕೋಟಿ ಲೀಟರ್ ನೀರು ಸಂಗ್ರಹ; ಕೆ. ಎಸ್. ಸಂತೋಷ್ಕುಮಾರ್ ಎಂಟು ಎಕರೆ ಕೃಷಿ ಭೂಮಿಯನ್ನು ಖರೀದಿಸಿ ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿದ್ದು, ಬರಡು ಭೂಮಿಯಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಹಳ್ಳದ ಇಂಗು ನೀರನ್ನು ತಡೆದು ಬೃಹತ್ ನೀರಿನ ಹೊಂಡವನ್ನು ನಿರ್ಮಿಸಿ ನೀರಿನ ಮರುಪೂರಣವನ್ನು ಮಾಡಿದ್ದು ಆ ಮೂಲಕ ಸುಮಾರು 8 ಕೋಟಿ ಲೀಟರ್ ನೀರು ಸಂಗ್ರಹಿಸುವ ಕೆಲಸ ಮಾಡಿದ್ದಾರೆ.

ತಮ್ಮ ಎಂಟು ಎಕರೆ ತೋಟದಲ್ಲಿ ಸಾವಯವವಾಗಿ ನೈಸರ್ಗಿಕ ಪದ್ದತಿಯಲ್ಲಿ ತೆಂಗು, ಅಡಿಕೆ, ಬಾಳೆ ಬೇಸಾಯ ಮಾಡುತ್ತಿದ್ದು, ತಮ್ಮ ತೋಟವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ ನಾಡಿನ ರೈತರಿಗೆ ತಮ್ಮ ತೋಟದಲ್ಲಿ ವೈಜ್ಞಾನಿಕವಾಗಿ ನೀರಿನ ಸಂರಕ್ಷಣೆ ಮಾಡುವುದು, ನೀರಿನ ಮರುಪೂರಣ ಮಾಡುವುದು, ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುವ ಬಗ್ಗೆಯೂ ಸೇರಿದಂತೆ ಹಲವು ರೀತಿಯ ಸಲಹೆಗಳನ್ನು ನೀಡಬೇಕೆಂಬ ಆಲೋಚನೆಯೂ ಅವರದ್ದಾಗಿದೆ.
ಇನ್ನೊಂದೆಡೆ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಬಯಕೆ ಹೊಂದಿರುವ ಅವರು ನೀರಿಲ್ಲದೆ ಬರಡಾಗಿದ್ದ ತಮ್ಮ ಭೂಮಿಗೆ ನೀರನ್ನು ತರುವ ಮೂಲಕ ಸುತ್ತಮುತ್ತಲಿನವರ ನಡುವೆ ಭಗೀರಥನಂತೆ ಕಂಡು ಬರುತ್ತಿದ್ದು, ಅವರ ನೀರಿನ ಸಂರಕ್ಷಣಾ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಕುರಿತಂತೆ ಮಾತನಾಡಿರುವ ಅವರು, "ರೈತರು ನೀರನ್ನು ವ್ಯರ್ಥ ಮಾಡದೆ ಒಂದೊಂದು ಹನಿ ನೀರನ್ನೂ ಸಂಗ್ರಹಿಸಿ ಭೂಮಿಯೊಳಗೆ ಇಂಗುವಂತೆ ಮಾಡಿ ನೀರಿನ ಮರುಪೂರಣ ಮಾಡಬೇಕು. ನಮ್ಮ ಹಿರಿಯರು ಅನುಸರಿಸಿದ ಸೂತ್ರವನ್ನೇ ಇಂದು ಅನುಸರಿಸಿದರೆ ಸಾಕು. ನಮ್ಮ ಮುಂದಿನ ತಲೆಮಾರಿಗೆ ನಾವು ನೀರನ್ನು ಜೋಪಾನ ಮಾಡಿ ಉಳಿಸಿ ಸಮೃದ್ಧಿ ನೆಲೆಸುವಂತೆ ಮಾಡಲು ಸಾಧ್ಯವಿದೆ. ಆದ್ದರಿಂದ ನೀರನ್ನು ವ್ಯರ್ಥವಾಗಿ ಪೋಲು ಮಾಡದೆ ಹಿತ, ಮಿತವಾಗಿ ನೀರನ್ನು ಬಳಸಿ ಜೋಪಾನ ಮಾಡಿ" ಎಂದು ರೈತರಿಗೆ ಕಿವಿ ಮಾತು ಹೇಳಿದ್ದಾರೆ.












Click it and Unblock the Notifications