ಕೆಆರ್ ಪೇಟೆ: ಕಳೆದ ಬಾರಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಕೊಟ್ಟ ಶಾಕ್

Recommended Video

      ಇದು ಯಡಿಯೂರಪ್ಪ ಪುತ್ರನ ಗೆಲುವು | Oneindia Kannada

      ಮಂಡ್ಯ, ಡಿಸೆಂಬರ್ 9: ಜೆಡಿಎಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಮಂಡ್ಯದಲ್ಲಿಯೂ ಕಮಲ ಅರಳಿದೆ. ಕೆಆರ್ ಪೇಟೆ ವಿಧಾನಸಭೆ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾರಾಯಣ ಗೌಡ ಗೆಲುವು ಸಾಧಿಸಿದ್ದಾರೆ. ಇದರಿಂದ ಮಂಡ್ಯದ ನೆಲದಲ್ಲಿ ತನ್ನ ಅಸ್ತಿತ್ವ ಪ್ರದರ್ಶನಕ್ಕೆ ಪ್ರಯತ್ನಿಸುತ್ತಿದ್ದ ಬಿಜೆಪಿ ಮೊದಲ ಗೆಲುವಿನ ರುಚಿ ಕಂಡಂತಾಗಿದೆ. ಜತೆಗೆ ತನ್ನ ಪ್ರಾಬಲ್ಯದ ಜಿಲ್ಲೆಯಲ್ಲಿ ಜೆಡಿಎಸ್ ಭಾರಿ ಹಿನ್ನಡೆ ಅನುಭವಿಸಿದೆ.

      ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದ ಎಲ್ಲ ಏಳೂ ವಿಧಾನಸಭೆ ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ತನ್ನ ಪಾರುಪತ್ಯವನ್ನು ಪ್ರದರ್ಶಿಸಿದ್ದ ಜೆಡಿಎಸ್, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದ ಹೊರತಾಗಿಯೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಎದುರು ಸೋಲು ಅನುಭವಿಸುವ ಮೂಲಕ ಮುಖಭಂಗ ಅನುಭವಿಸಿತ್ತು. ಈಗ ಉಪ ಚುನಾವಣೆಯಲ್ಲಿ ಕೆಆರ್ ಪೇಟೆ ಕ್ಷೇತ್ರವನ್ನು ಕಳೆದುಕೊಂಡಿರುವುದು ಜೆಡಿಎಸ್‌ಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

      ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ 7,910 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಯಡಿಯೂರಪ್ಪ ಅವರ ತವರೂರಾದ ಬೂಕನಕೆರೆ ಗ್ರಾಮವನ್ನು ಒಳಗೊಂಡ ಕೆಆರ್ ಪೇಟೆಯಲ್ಲಿನ ಗೆಲುವನ್ನು ಬಿಜೆಪಿ ಪ್ರತಿಷ್ಠೆಯಾಗಿ ಸ್ವೀಕರಿಸಿತ್ತು. ಆದರೆ ಮತ ಬಲವಿಲ್ಲದ ಬಿಜೆಪಿಗೆ ಜೆಡಿಎಸ್ ಅಭ್ಯರ್ಥಿ ಬಿಎಲ್ ದೇವರಾಜು ಹಾಗೂ ಕಾಂಗ್ರೆಸ್‌ನ ಕೆಬಿ ಚಂದ್ರಶೇಖರ್ ಅವರಿಂದ ಭಾರಿ ಪೈಪೋಟಿ ನಿರೀಕ್ಷಿಸಲಾಗಿತ್ತು. ಜೆಡಿಎಸ್‌ನ ಮತ ಬ್ಯಾಂಕ್ ಇರುವ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿದ್ದ ಬಿಜೆಪಿ ದೊರೆತ ಭಾರಿ ಜನಾಶೀರ್ವಾದ ಇದು.

      ಅಪ್ಪನ ಊರಲ್ಲಿ ಮಗನ ಪ್ರಚಾರ

      ಅಪ್ಪನ ಊರಲ್ಲಿ ಮಗನ ಪ್ರಚಾರ

      ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗಬಿವೈ ವಿಜಯೇಂದ್ರ, ಕೆಆರ್ ಪೇಟೆಯಲ್ಲಿಯೇ ವಾಸ್ತವ್ಯ ಹೂಡಿ ಸತತ ಪ್ರಚಾರ ನಡೆಸಿದ್ದರು. ಕೃಷ್ಣರಾಜ ಪೇಟೆಗಾಗಿಯೇ ಪ್ರತ್ಯೇಕ ಪ್ರಣಾಳಿಕೆಯನ್ನೂ ಬಿಜೆಪಿ ಬಿಡುಗಡೆ ಮಾಡಿತ್ತು. ಇದೆಲ್ಲವೂ ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ. ನಾರಾಯಣ ಗೌಡ ಅವರ ಮನೆಯ ಎದುರು ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಂಭ್ರಮ ಮುಗಿಲುಮುಟ್ಟಿದೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಬೆಂಬಲಿಗರು ಸಂತಸ ಹಂಚಿಕೊಂಡರು. ಯಡಿಯೂರಪ್ಪ ಅವರ ತವರು ಬೂಕನಕೆರೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

      ಠೇವಣಿ ಕೂಡ ಉಳಿಸಕೊಂಡಿರದ ಬಿಜೆಪಿ

      ಠೇವಣಿ ಕೂಡ ಉಳಿಸಕೊಂಡಿರದ ಬಿಜೆಪಿ

      ವಿಶೇಷವೆಂದರೆ ಇಲ್ಲಿ ಒಮ್ಮೆಯೂ ಗೆಲುವು ಕಾಣದ ಬಿಜೆಪಿ, 2018ರ ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಕೂಡ ಉಳಿಸಿಕೊಂಡಿರಲಿಲ್ಲ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ನಾರಾಯಣ ಗೌಡ 88,016 ಮತಗಳನ್ನು ಪಡೆದು ಸುಮಾರು 18 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಬಿಜೆಪಿ ಅಭ್ಯರ್ಥಿ ಬಿ.ಸಿ. ಮಂಜು 9819 ಮತಗಳನ್ನು ಪಡೆದಿದ್ದರು. ಕಳೆದ ಚುನಾವಣೆಯಲ್ಲಿ ಪಡೆದ ಒಟ್ಟು ಮತಗಳ ಪ್ರಮಾಣಕ್ಕೆ ಹೋಲಿಸಿದರೆ, ಅಷ್ಟೇ ಮತಗಳ ಅಂತರದಿಂದ ಈ ಬಾರಿ ಬಿಜೆಪಿ ಗೆದ್ದಿದೆ.

      ಇತಿಹಾಸದಲ್ಲಿ ಬರೆದಿಡುವ ಕ್ಷಣ

      ಇತಿಹಾಸದಲ್ಲಿ ಬರೆದಿಡುವ ಕ್ಷಣ

      ಇದು ಇತಿಹಾಸದಲ್ಲಿ ಬರೆದಿಡುವ ಕ್ಷಣ. ಪಕ್ಷ ಸಂಘಟನೆಯೇ ಗೆಲುವಿಗೆ ಕಾರಣ. ಕ್ಷೇತ್ರದ ಮತದಾರರು ಪಕ್ಷಾತೀತವಾಗಿ, ಜಾತ್ಯತೀತರಾಗಿ ನಾರಾಯಣಗೌಡ ಅವರನ್ನು ಬೆಂಬಲಿಸಿದ್ದಾರೆ. ಇದು ನನ್ನೊಬ್ಬನ ಸಾಧನೆಯಲ್ಲ. ಸಾಮೂಹಿಕ ನಾಯಕತ್ವ ಮತ್ತು ನಮ್ಮೆಲ್ಲರ ಒಗ್ಗಟ್ಟಿನಿಂದ ಗೆಲುವು ಸಾಧ್ಯವಾಯಿತು. ಕೆಆರ್ ಪೇಟೆ ತಾಲ್ಲೂಕಿನ ಮಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅದನ್ನು ಜನರು ಒಪ್ಪಿಕೊಂಡಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ. ಈ ಹಿಂದೆ ಠೇವಣಿ ಸಹ ಬಂದಿರಲಿಲ್ಲ. ಈ ಬಾರಿ 10 ಸಾವಿರ ಲೀಡ್ ಪಡೆದುಕೊಂಡಿದ್ದೇವೆ ಎಂದು ಬಿವೈ ವಿಜಯೇಂದ್ರ ಸಂತಸ ವ್ಯಕ್ತಪಡಿಸಿದರು.

      ಜೆಡಿಎಸ್‌ಗೆ ಮತ್ತೊಂದು ಆಘಾತ

      ಜೆಡಿಎಸ್‌ಗೆ ಮತ್ತೊಂದು ಆಘಾತ

      ಮಂಡ್ಯದ ಜನರು ನಮ್ಮನ್ನು ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆ ಜೆಡಿಎಸ್‌ ಮುಖಂಡರದ್ದು. ಅದು ಸತತ ಎರಡನೆಯ ಬಾರಿಗೆ ಹುಸಿಯಾಗಿದೆ. ಜಾತಿ ಕೇಂದ್ರಿತ ರಾಜಕಾರಣ ಗಟ್ಟಿಯಾಗಿರುವ ಇಲ್ಲಿ ಒಕ್ಕಲಿಗರ ಮತಗಳದ್ದೇ ಪ್ರಾಬಲ್ಯ. ಜತೆಗೆ ಬಿಜೆಪಿ ಇಲ್ಲಿ ತನ್ನ ನೆಲೆ ಕಂಡಿದ್ದೇ ಇಲ್ಲ. ಕಳೆದ ಚುನಾವಣೆಯಲ್ಲಿ ಎಲ್ಲ ಏಳೂ ಕ್ಷೇತ್ರಗಳಲ್ಲಿ ಕ್ಲೀನ್ ಸ್ವೀಪ್ ಮಾಡಿ ಬೀಗಿದ್ದ ಜೆಡಿಎಸ್‌ಗೆ, ಲೋಕಸಭೆ ಚುನಾವಣೆಯಲ್ಲಿ ಮೊದಲ ಆಘಾತ ಎದುರಾಗಿತ್ತು. ಕಾಂಗ್ರೆಸ್ ಬೆಂಬಲದೊಂದಿಗೆ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಎಚ್ ಡಿ ಕುಮಾರಸ್ವಾಮಿ ಕಣಕ್ಕಿಳಿಸಿದ್ದರು. ಆಗ ಅವರದೇ ನೇತೃತ್ವದ ಸಮ್ಮಿಶ್ರ ಸರ್ಕಾರವಿತ್ತು. ಈ ಎಲ್ಲ ಶಕ್ತಿಗಳ ನಡುವೆಯೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವು ಕಂಡಿದ್ದು, ಜೆಡಿಎಸ್‌ಗೆ ಭಾರಿ ಹೊಡೆತ ನೀಡಿತ್ತು. ಆ ಕಹಿ ಮಾಸುವ ಮುನ್ನವೇ ಮತ್ತೊಂದು ಸೋಲಿನ ಆಘಾತ ಎದುರಾಗಿದೆ.

      ಕಣ್ಣೀರಿಗೆ ಬೆಲೆ ಸಿಗಲಿಲ್ಲ!

      ಕಣ್ಣೀರಿಗೆ ಬೆಲೆ ಸಿಗಲಿಲ್ಲ!

      'ನನಗೆ ರಾಜಕೀಯವೇ ಬೇಡವೆಂದು ನಿರ್ಣಯ ಮಾಡಿದ್ದೆ, ಎರಡು ಹೊತ್ತು ಊಟಕ್ಕೆ ರಾಜಕೀಯ ಏಕೆ ಮಾಡಬೇಕು? ಆದರೆ ಕಾಂಗ್ರೆಸ್‌ನವರೇ ಬಂದು ಸಿಎಂ ಆಗಿ ಎಂದರು. ರಾಹುಲ್ ಗಾಂಧಿ ನನ್ನನ್ನು ಇಲ್ಲಿನ ಕಾಂಗ್ರೆಸ್‌ನವರಿಗೆ ತಗುಲಿಹಾಕಿದರು. ಎರಡು ಹೊತ್ತಿನ ಊಟಕ್ಕೆ ರಾಜಕೀಯ ಮಾಡಬೇಕೆ? ಎಂದು ಚುನಾವಣಾ ಪ್ರಚಾರದ ವೇಳೆ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದರು. ನಾನೇನು ತಪ್ಪು ಮಾಡಿದೆ, ನೀವು ಏಕೆ ನನ್ನ ಬಿಟ್ಟಿರಿ? ಎಂದು ಲೋಕಸಭೆ ಚುನಾವಣೆಯಲ್ಲಿ ಮಗನನ್ನು ಸೋಲಿಸಿದ್ದಕ್ಕೆ ಜನರನ್ನು ಪ್ರಶ್ನೆ ಮಾಡಿದ್ದರು. 'ನಿಮ್ಮನ್ನು (ಮಂಡ್ಯದ ಜನ) ನಂಬಿದ್ದೆ ಆದರೆ ನೀವೇ ನನ್ನ ಕೈಬಿಟ್ಟಿರಿ. ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ, ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ನನಗೆ ಇದೆಲ್ಲಾ ಬೇಕಿತ್ತಾ?' ಎಂದು ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+