ಕಾಂಗ್ರೆಸ್ ಪ್ರಣಾಳಿಕೆ ಘೋಷಣೆಯಿಂದ ಬಿಜೆಪಿ ತಬ್ಬಿಬ್ಬು-ಚಲುವರಾಯಸ್ವಾಮಿ

ಮಂಡ್ಯ, ಜನವರಿ 23: ಕಾಂಗ್ರೆಸ್ ಪಕ್ಷ ಘೋಷಿಸಿರುವ ಪ್ರಣಾಳಿಕೆಯಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಬ್ಬಿಬ್ಬಾಗಿವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್. ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ 200 ಯುನಿಟ್ ವಿದ್ಯುತ್ ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ ಪ್ರತೀ ಕುಟುಂಬದ ಮಹಿಳೆಗೆ 2 ಸಾವಿರ ರೂಪಾಯಿ ನೀಡುವ ಘೋಷಣೆ ಮಾಡಿರುವುದನ್ನು ಅವರು ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್‌ನವರಿಗೆ ಯಾವ ರೀತಿ ಆಡಳಿತ ನೀಡಬೇಕು ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನೆಲ್ಲಾ ಮಾಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿಯವರಿಗೆ ಅನುಭವದ ಕೊರತೆ ಇದೆ. ಆರ್ಥಿಕ ಶಿಸ್ತಿನ ಅರಿವಿಲ್ಲದಿರಬಹುದು. ನಾವು ಅದೆಲ್ಲವನ್ನೂ ಗೊತ್ತಿದ್ದೇ ಮಾಡುತ್ತಿದ್ದೇವೆ. ಯಾವ ರೀತಿ ಯೋಜನೆ ರೂಪಿಸುತ್ತೇವೆ ಎಂಬುದನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೋಡಿ ಎಂದು ನುಡಿದರು.

ಐದು ವರ್ಷಗಳ ಆಡಳಿತಾವಧಿಯಲ್ಲಿ ಪ್ರತೀ ಕುಟುಂಬಕ್ಕೂ 3 ಲಕ್ಷ ರೂಪಾಯಿ ತಲುಪುವ ಘೋಷಣೆಯಾಗಿದೆ. ಇನ್ನೂ ಹಲವಾರು ಘೋಷಣೆಗಳನ್ನು ಪ್ರತ್ಯೇಕವಾಗಿ ಮಾಡಲು ಸಿದ್ಧತೆ ನಡೆಯುತ್ತಿದೆ. ರಾಜ್ಯದ ಎಲ್ಲಾ ಭಾಗದ ಸಮಸ್ಯೆಗಳು, ಯುವಕರು, ಮಹಿಳೆಯರು, ಕಾರ್ಮಿಕರು, ದಲಿತರನ್ನು ದೃಷ್ಠಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತದೆ ಎಂದು ಹೇಳಿದರು.

ಸೋಲಿನ ಭೀತಿಯಿಂದ ಯೋಜನೆಗಳ ಘೋಷಣೆ

ಸೋಲಿನ ಭೀತಿಯಿಂದ ಯೋಜನೆಗಳ ಘೋಷಣೆ

ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 7 ಕೆ.ಜಿ. ಅಕ್ಕಿ ನೀಡುತ್ತಿದ್ದೇವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು 5 ಕೆ.ಜಿ.ಗೆ ಇಳಿಕೆ ಮಾಡಿತ್ತು. ನಾವು ಈಗ 10 ಕೆ.ಜಿ. ಅಕ್ಕಿ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತಿದ್ದಂತೆ ಎಚ್ಚೆತ್ತ ಬಿಜೆಪಿ 12 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ಕೇವಲ ಗಿಮಿಕ್ ರಾಜಕಾರಣ ಅಷ್ಟೆ. ಕಳೆದ ಮೂರೂವರೆ ವರ್ಷಗಳಿಂದ ಕೊಡದ ಬಿಜೆಪಿ ಸರ್ಕಾರ ಈಗ ನೀಡಲು ಮುಂದಾಗಿದೆ ಎಂದರೆ ಅದು ಕೇವಲ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಲ್ಲವೇ ಎಂದು ಪ್ರಶ್ನಿಸಿದರು.

ಘೋಷಿತ ಯೋಜನೆಗಳು ಶೇ. 90ರಷ್ಟು ಮಂದಿಗೆ ತಲುಪಲಿದೆ

ಘೋಷಿತ ಯೋಜನೆಗಳು ಶೇ. 90ರಷ್ಟು ಮಂದಿಗೆ ತಲುಪಲಿದೆ

ಪ್ರಸ್ತುತ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಯೋಜನೆಗಳು ರಾಜ್ಯದ ಬಹುತೇಕ ಬಿಪಿಎಲ್ ಕುಟುಂಬದವರಿಗೆ ತಲುಪುತ್ತದೆ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದಕ್ಕೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಘೋಷಿತ ಯೋಜನೆಗಳು ಗ್ರಾಮೀಣ ಪ್ರದೇಶದ ಶೇ. 90ರಷ್ಟು ಮಂದಿಗೆ ತಲುಪಲಿದೆ. ಇದರಲ್ಲಿ ಯಾವುದೇ ಲೋಪವಾಗುವುದಿಲ್ಲ ಎಂದು ಹೇಳಿದರು.

ಎಲ್ಲರಿಗೂ ಟಿಕೆಟ್ ಸಿಗುವುದಿಲ್ಲ

ಎಲ್ಲರಿಗೂ ಟಿಕೆಟ್ ಸಿಗುವುದಿಲ್ಲ

ಭಾನುವಾರ ತಾಲೂಕಿನ ಹುಲಿನವಾ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಬೇಕಿತ್ತು. ತುರ್ತು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬರಲಾಗಲಿಲ್ಲ. ಅಷ್ಟಕ್ಕೆ ತಪ್ಪು ಸಂದೇಶ ಬೇಡ, ಎಲ್ಲರೂ ಎಲ್ಲಾ ಕಡೆ ಹೋಗಲು ಸಾಧ್ಯವಾಗುವುದಿಲ್ಲ. ಒಬ್ಬರು ಕರೆದಾಗ ಒಂದಿಬ್ಬರು ಗೈರಾಗಬಹುದು. ಅದಕ್ಕೆ ಭಿನ್ನಾಭಿಪ್ರಾಯ ಎಂದು ಅರ್ಥವಿಲ್ಲ. ವೈಯಕ್ತಿಕ ಕೆಲಸ ಕಾರ್ಯಕ್ರಮಗಳು ಇರುತ್ತವೆ. ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಮಾಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸಂಘಟನೆಯಲ್ಲಿ ಶೇ.100ರಷ್ಟು ಒಗ್ಗಟ್ಟು ಇದೆ. 16 ಮಂದಿ ಆಕಾಂಕ್ಷಿತರಿದ್ದಾರೆ. ಎಲ್ಲರಿಗೂ ಟಿಕೆಟ್ ಸಿಗುವುದಿಲ್ಲ. ಒಬ್ಬರಿಗೆ ಮಾತ್ರ ಟಿಕೆಟ್ ಸಿಗುತ್ತದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗುತ್ತೆ ಎಂದು ಹೇಳಿದರು.

ಎಲ್.ಆರ್. ಶಿವರಾಮೇಗೌಡರ ಜೊತೆ ದೂರವಾಣಿಯಲ್ಲಿ ಅನೌಪಚಾರಿಕವಾಗಿ ಮಾತನಾಡಿದ್ದೇವೆಯೇ ಹೊರತು ಅದರಲ್ಲಿ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಬೇರೆ ಮುಖಂಡರ ಜೊತೆಗೆ ಮಾತನಾಡಬಾರದೆಂದಿದೆಯಾ, ಅದರಲ್ಲಿ ಗೊಂದಲದ ಯಾವ ಮಾತೂ ಇಲ್ಲ. ಸಹಜವಾಗಿ ದೂರವಾಣಿ ಕರೆ ಮಾಡಿದ್ದರು. ಅದಕ್ಕೆ ಮಾತನಾಡಿದ್ದೇನೆ ಅಷ್ಟೆ ಎಂದು ಶಿವರಾಮೇಗೌಡರ ಮತ್ತು ತಮ್ಮ ನಡುವಿನ ದೂರವಾಣಿ ಮಾತುಕತೆಗೆ ಸ್ಪಷ್ಟನೆ ನೀಡಿದರು.

ಸ್ಪರ್ಧೆ ವಿಚಾರ ಪಕ್ಷದ ತೀರ್ಮಾನ

ಸ್ಪರ್ಧೆ ವಿಚಾರ ಪಕ್ಷದ ತೀರ್ಮಾನ

ನಾಗಮಂಗಲದ ವಿಧಾನ ಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಮಂಡ್ಯ ಕ್ಷೇತ್ರದ ಜನತ ಪ್ರೀತಿಯಿಂದ ಕರೆಯುತ್ತಿದ್ದಾರೆ. ಆದರೆ ಇಲ್ಲಿಗೆ ಬರುವುದಿಲ್ಲ. ಈಗಾಗಲೇ ನಾನು ನಾಗಮಂಗಲದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ . ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡುವುದು ಆ ಕ್ಷೇತ್ರದ ಅಭ್ಯರ್ಥಿಯೇ ಹೊರತು ಬೇರೆ ನಾಯಕರಲ್ಲ, ಎರಡನೇ ಹಂತದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನೂ ಸಹ ಮದ್ದೂರು ಜನತೆ ಆಹ್ವಾನ ಮಾಡಿದ್ದಾರೆ. ಜನರು ಪ್ರೀತಿಯಿಂದ ಕರೆಯುತ್ತಾರೆ. ಆದರೆ ಸ್ಪರ್ಧೆ ವಿಚಾರ ಪಕ್ಷ ಮತ್ತು ವೈಯಕ್ತಿಕ ತೀರ್ಮಾನವಾಗುತ್ತದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+