Karnataka Dam: ವಾಡಿಕೆಗಿಂತ 28% ಹೆಚ್ಚು ಮಳೆ; ರಾಜ್ಯದ ಜಲಾಶಯಗಳು ಬಹುತೇಕ ಭರ್ತಿ
ಶ್ರೀರಂಗಪಟ್ಟಣ: ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 28 ರಷ್ಟು ಹೆಚ್ಚು ಮಳೆಯಾಗಿದ್ದು, ರಾಜ್ಯದ ಜಲಾಶಯಗಳು ಬಹುತೇಕ ಭರ್ತಿಯಾಗಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಪಟ್ಟಣದ ವೆಲ್ಲೆಸ್ಲಿ ಸೇತುವೆ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ, ಆದರೆ ರಾಜ್ಯದಲ್ಲಿ 6 ಜಿಲ್ಲೆಗಳಲ್ಲಿ ವಾಡಿಕೆಗಿಂತ ಸಾಧಾರಣ ಮಳೆಯಾಗಿದೆ. ಹೆಚ್ಚಿನ ಮಳೆಯಾಗಿ ಜಲಾಶಯಗಳು ಭರ್ತಿಯಾಗಿರುವುದರಿಂದ ನೀರು ಹೊರ ಬಿಡಲಾಗುತ್ತಿದೆ.

ಹೇಮಾವತಿ ಸಹ ತುಂಬಿ ಹರಿಯುತ್ತಿದ್ದು ಜಲಾಶಯದಿಂದ ಹೆಚ್ಚು ನೀರು ಬಿಡಲಾಗಿದೆ. ಕೆಆರ್ಎಸ್ ಅಣೆಕಟ್ಟೆಯಿಂದ 1.20 ಲಕ್ಷ ಕ್ಯೂಸೆಕ್ಕ್ಕೂ ಹೆಚ್ಚು ನೀರು ಜಲಾಶಯದಿಂದ ಬಿಡಲಾಗುತ್ತಿದ್ದು, ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ ಅವುಗಳನ್ನು ಪರಿಶೀಲಿಸಲಾಗಿದೆ ಎಂದರು.
ಕೇರಳದ ವಯನಾಡಿನಲ್ಲಿ ಹೆಚ್ಚು ಮಳೆಯಾಗಿದ್ದು, ಕಬಿನಿ ಜಲಾಶಯ ತುಂಬಿದೆ ಅಲ್ಲಿಯೂ 80 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಒಟ್ಟಾರೆ ಕೆಆರ್ಎಸ್-ಕಬಿನಿಯಿಂದ 1.60 ಲಕ್ಷ ಕ್ಯೂಸೆಕ್ ನೀರು ಬಿಳಿಗುಂಡ್ಲುವಿನಿಂದ ತಮಿಳುನಾಡಿಗೆ ಹೋಗುತ್ತಿದೆ ಇದಕ್ಕೆಲ್ಲಾ ಲೆಕ್ಕವಿದೆ ಎಂದು ಮಾಹಿತಿ ನೀಡಿದರು.
ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ
ಕಾವೇರಿ ನದಿ ತೀರದ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಎಚ್ಚರಿಸಿ, ಅವರಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಸರ್ಕಾರದಿಂದ ಅವರಿಗೆ ತೆರವು ಮಾಡಲು ಸಹಕಾರ ನೀಡಲಾಗುತ್ತಿದೆ. ಕೃಷ್ಣ, ಘಟಪ್ರಭ ಸೇರಿದಂತೆ ಇತರ ನದಿಗಳು ಉಕ್ಕಿ ಹರಿದಿವೆ. ಕೆಆರ್ ಎಸ್ ಕೆಳಭಾಗದಲ್ಲಿನ ಜನರಿಗೆ ಇನ್ನು ಅಪಾಯ ಮಟ್ಟದಿಂದ ಕಡಿಮೆ ಇದೆ. ಈಗ 1.20 ಲಕ್ಷ ಕ್ಯೂಸೆಕ್ ಬರುತ್ತಿದೆ. ಈ ಹಿಂದೆ 1.70 ಲಕ್ಷ ಕ್ಯೂಸೆಕ್ವರೆವಿಗೂ ನೀರು ಬಿಟ್ಟಿರುವ ದಾಖಲೆಗಳಿವೆ. ಆದಷ್ಟು ತಗ್ಗು ಪ್ರದೇಶದಲ್ಲಿರುವ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸರ್ಕಾರದ ಮಟ್ಟದಲ್ಲಿ ಸಹಕಾರ ನೀಡುತ್ತದೆ ಎಂದರು.
ಈಗಾಗಲೆ ತಗ್ಗು ಪ್ರದೇಶಗಳಲ್ಲಿ ಹಾನಿಯಾಗಿರುವ ಬಗ್ಗೆ ಮಾಹಿತಿಗಳು ಬಂದಿವೆ. ರಾಜ್ಯ ಸರ್ಕಾರದಲ್ಲಿ ಇರುವ ಹಣ ಬಳಕೆ ಮಾಡಿಕೊಂಡು ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ವಿಪತ್ತು ನಿರ್ವಹಣೆಗಾಗಿ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಗೆ ಒಟ್ಟು 770 ಕೋಟಿ ಹಣವನ್ನು ಮೀಸಲಿರಿಸಲಾಗಿದೆ. ಮಂಡ್ಯ ಜಿಲ್ಲೆಗೂ ಸಹ 20 ಕೋಟಿ ಹಣ ನೀಡಲಾಗಿದೆ. ಎಲ್ಲಾ ತಾಲ್ಲೂಕುಗಳಿಗೆ 25 ಲಕ್ಷ ರೂ ನೀಡಲಾಗಿದೆ ಎಂದರು. ಸಣ್ಣ ಪುಟ್ಟ ತೊಂದರೆಯಾದಾಗ ರಾಜ್ಯ ಸರ್ಕಾರ ನಿಭಾಯಿಸುತ್ತದೆ. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಹಾನಿ ಆದಾಗ ಮಾತ್ರ ಎನ್ಡಿಆರ್ ಎಫ್ ತಂಡವನ್ನು ಕರೆಸಬೇಕು ಎಂದರು.












Click it and Unblock the Notifications