ಒಂದೇ ಸೂರಿನಡಿ ಸೇವೆ; ಮಂಡ್ಯದಲ್ಲಿ ಕರ್ನಾಟಕ ಒನ್ ಆರಂಭ
ಮಂಡ್ಯ, ಆಗಸ್ಟ್ 07 : ಬೆಂಗಳೂರು ಒನ್ ಮಾದರಿಯಲ್ಲಿ ಒಂದೇ ಸೂರಿನಡಿ ಹಲವು ಸರ್ಕಾರಿ ಸೇವೆ ಒದಗಿಸುವ ಕರ್ನಾಟಕ ಒನ್ ಕೇಂದ್ರ ಮಂಡ್ಯದಲ್ಲಿ ಆರಂಭವಾಗಿದೆ. ಮಂಡ್ಯದಲ್ಲಿ 2 ಕೇಂದ್ರ ಆರಂಭಿಸಲು ಬೇಡಿಕೆ ಇಡಲಾಗಿತ್ತು.
ಮಂಡ್ಯ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಕರ್ನಾಟಕ ಒನ್ ಕೇಂದ್ರವನ್ನು ಬುಧವಾರ ಉದ್ಘಾಟಿಸಿದರು.
ಮಂಡ್ಯದ ನಗರಸಭೆ ವಾಣಿಜ್ಯ ಮಳಿಗೆಯಲ್ಲಿ ಇಡಿಸಿಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆ, ಜಿಲ್ಲಾಡಳಿತ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಆರಂಭವಾಗಿದೆ.
"ಪ್ರತಿ ಜಿಲ್ಲೆಯಲ್ಲಿಯೂ ಕರ್ನಾಟಕ ಒನ್ ಕೇಂದ್ರ ಆರಂಭವಾಗುತ್ತಿದೆ. ಅದರಂತೆ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಕೂಡ 2 ಕೇಂದ್ರವನ್ನು ಆರಂಭಿಸಬೇಕು ಎಂದು ಮನವಿ ಮಾಡಲಾಗಿತ್ತು. ಬೇಡಿಕೆ ಅನುಗುಣವಾಗಿ ಇಂದು ಒಂದು ಕೇಂದ್ರವನ್ನು ಆರಂಭಿಸಲಾಗಿದೆ" ಎಂದು ಎನ್. ಮಂಜುಶ್ರೀ ಹೇಳಿದರು.

ನೂತನವಾಗಿ ಆರಂಭವಾಗಿರುವ ಕೇಂದ್ರದಲ್ಲಿ 5 ಕೌಂಟರ್ಗಳಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೌಂಟರ್ ಅವಶ್ಯಕತೆ ಇದ್ದರೆ ತೆರೆಯಲಾಗುತ್ತದೆ. ಬೆಳಗ್ಗೆ 8ರಿಂದ ಸಂಜೆ 7 ಗಂಟೆಯವರೆಗೆ ಕರ್ನಾಟಕ ಒನ್ ಕಚೇರಿ ತೆರೆದಿರುತ್ತದೆ.
ರಾಷ್ಟ್ರೀಯ ಹಬ್ಬ-ಹರಿದಿನಗಳನ್ನು ಹೊರತು ಪಡಿಸಿ ಮಿಕ್ಕ ಎಲ್ಲ ದಿನಗಳಲ್ಲೂ ಕೇಂದ್ರ ಕಾರ್ಯನಿರ್ವಹಿಸುತ್ತದೆ. ಕರ್ನಾಟಕ ಒನ್ ಯೋಜನೆಯ ಮುಖ್ಯ ಉದ್ದೇಶ ಎಲ್ಲಾ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ನೀಡುವುದಾಗಿದೆ.
ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಕರ್ನಾಟಕ ಒನ್ ಕೇಂದ್ರದಿಂದ ಪಡೆಯಬಹುದು. ವಿದ್ಯುತ್ ಬಿಲ್, ಹೆಚ್ಚುವರಿ ಭದ್ರತಾ ಠೇವಣಿ ಪಾವತಿ, ಪೊಲೀಸ್ ವೆರೀಫಿಕೇಷನ್, ವಾಹನಗಳ ವಿಚಾರಣ ವರದಿಗಾಗಿ ಶುಲ್ಕ ಪಾವತಿ, ಪಡಿತರ ಚೀಟಿಗಾಗಿ ಅರ್ಜಿ, ಆಧಾರ್ ನೊಂದಣಿ, ಇ-ಆಧಾರ್ ಮುದ್ರಿತ ಒಳಗೊಂಡತೆ 50ಕ್ಕೂ ಹೆಚ್ಚು ಸೌಭ್ಯ ಈ ಕೇಂದ್ರದಲ್ಲಿ ದೊರೆಯುತ್ತವೆ.












Click it and Unblock the Notifications