'ಸಿದ್ದರಾಮಯ್ಯ ಅವರಿಂದ ಮಂಡ್ಯ ಕಾಂಗ್ರೆಸ್ ಮುಕ್ತ'
ಮಂಡ್ಯ, ಏಪ್ರಿಲ್ 30 : 'ಮೇಲುಕೋಟೆ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಾಗಿದ್ದಾರೆ' ಎಂದು ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ವ್ಯಂಗ್ಯವಾಡಿದರು.
ಕ್ಷೇತ್ರದಲ್ಲಿ ರೈತಸಂಘ ಹಾಗೂ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಸಿ.ಎಸ್.ಪುಟ್ಟರಾಜು ಅವರು, 'ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪರ್ವ ಆರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ' ಎಂದು ದೂರಿದರು.
ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿಯ ಸ್ಥಿತಿ ಏನು, ಗತಿ ಯಾರು?
'ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವೇ ಇತ್ತು. ಸಿದ್ದರಾಮಯ್ಯ ಬಂದ ಮೇಲೆ ಅನೇಕ ದಿಗ್ಗಜರು ಪಕ್ಷವನ್ನು ಬಿಡಬೇಕಾಯಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಪಕ್ಷ ತ್ಯಜಿಸಿದ್ದಾರೆ' ಎಂದರು.
'ಮೇಲುಕೋಟೆ ಕ್ಷೇತ್ರದಲ್ಲೂ ಸಹ ಅನೇಕ ನಾಯಕರು ಹಾಗೂ ಕಾರ್ಯಕರ್ತರು ಪಕ್ಷ ಬಿಡುತ್ತಿದ್ದು, ಕಾಂಗ್ರೆಸ್ ಪಕ್ಷದ ಹೆಸರಿಲ್ಲದಂತಾಗುತ್ತದೆ. ಜೆಡಿಎಸ್ಗೆ ಬಂದ ನಾಯಕರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು. ಅಲ್ಲದೆ, ನಮ್ಮ ಕಾರ್ಯಕರ್ತರು, ಮುಖಂಡರು ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ' ಎಂದು ಭರವಸೆ ನೀಡಿದರು.
ಅಮೆರಿಕಾದಿಂದ ಮೇಲುಕೋಟೆಗೆ: ರಾಜಕೀಯ ಅಖಾಡದಲ್ಲಿ ದರ್ಶನ್ ಪುಟ್ಟಣ್ಣಯ್ಯ ಸದ್ದು
'ಕಾಂಗ್ರೆಸ್ ಪಕ್ಷವು ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರನ್ನು ತಬ್ಬಲಿ ಮಾಡಿದೆ. ಆದರೆ, ನಾನು ಅವರನ್ನು ತಬ್ಬಲಿ ಮಾಡಲು ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ನಾಯಕರು ರಾಜ್ಯದಲ್ಲಿ ಆಳ್ವಿಕೆ ಮಾಡಿದ್ದಾರೆ. ಆಗಲೂ ಮಂಡ್ಯ ಜಿಲ್ಲೆಯನ್ನು ಇಷ್ಟೊಂದು ನಿರ್ಲಕ್ಷ್ಯ ಮಾಡಿರಲಿಲ್ಲ' ಎಂದರು.
'ಕಾವೇರಿ ನದಿ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಆದರೆ, ಸಿದ್ದರಾಮಯ್ಯ ಕಾವೇರಿ ನೀರು ಬಿಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಸಿದ್ದರಾಮಯ್ಯ ಅವರು ಜಿಲ್ಲೆಗೆ ಬಂದರೆ ರೈತರೇ ತಕ್ಕಪಾಠ ಕಲಿಸಲಿದ್ದಾರೆ' ಎಂದು ಹೇಳಿದರು.