Actress Ramya: ನಾನು ಮಂಡ್ಯದ ಗೌಡ್ತಿ ಅನ್ನೋದನ್ನ ಯಾರೂ ಕಿತ್ತುಕೊಳ್ಳಲು ಆಗಲ್ಲ; ರಮ್ಯಾ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮೇ 10ರಂದು ನಡೆಯುವ ಮತದಾನಕ್ಕೂ ಮುನ್ನ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ. ಕ್ಷೇತ್ರದತ್ತ ಮುಖ ಮಾಡದವರೆಲ್ಲ ಮತಯಾಚನೆಗಾಗಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಕರುನಾಡು ಕುರುಕ್ಷೇತ್ರ ಗೆಲ್ಲಲು ಬಿಜೆಪಿ, ರಾಷ್ಟ್ರೀಯ ಮತ್ತು ಜೆಡಿಎಸ್ ಪಕ್ಷಗಳು ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ. ತಮ್ಮ ಅಭ್ಯರ್ಥಿಗಳ ಪರ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ. ಇದೀಗ ಮಂಡ್ಯ ಮಾಜಿ ಸಂಸದೆ ರಮ್ಯಾ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಮಂಗಳವಾರ (ಮೇ 2)ದಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಆಗಮಿಸಿದ್ದರು.

ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ, "ನಾನು ಮೂಲತಃ ಮಂಡ್ಯದವಳೇ ಆಗಿದ್ದು, ನಾನು ಮಂಡ್ಯದ ಗೌಡ್ತಿಯಾಗಿದ್ದೇನೆ. ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ," ಎಂದು ಹೇಳಿದ್ದಾರೆ.
ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗಾಣಿಗ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ರಮ್ಯಾ, "ನಾನು ಮಂಡ್ಯಕ್ಕೆ ಬರುತ್ತಾ ಇರುತ್ತೇನೆ. ಸೋಮವಾರವೂ ನಿಮಿಷಾಂಭ ದೇವಸ್ಥಾನಕ್ಕೆ ಬಂದಿದ್ದೆ. ಮಂಡ್ಯದಲ್ಲಿ ನನಗೆ ನೆಂಟರು ಇದ್ದಾರೆ. ಸಾಕಷ್ಟು ಬಾರಿ ನಾನು ಮಂಡ್ಯಕ್ಕೆ ಬಂದಿದ್ದೇನೆ. ಆದರೆ ಕ್ಯಾಮಾರಾ ಕಣ್ಣಿಗೆ ಎಲ್ಲೂ ಕಾಣಿಸಿಕೊಂಡಿಲ್ಲ," ಎಂದರು.

ಮಂಡ್ಯ ಜನರಿಗೆ ನಾನು ಚಿರ ಋಣಿಯಾಗಿದ್ದೇನೆ. ಮಂಡ್ಯ ಜನರ ಜೊತೆ ನನ್ನ ಸಂಬಂಧ ಸದಾ ಇರುತ್ತದೆ. ರಾಜಕೀಯ ಅಂತಾ ಇಲ್ಲ, ಎಲ್ಲಾ ವಿಚಾರದಲ್ಲಿ ಮಂಡ್ಯದಲ್ಲಿ ಇರುತ್ತೇನೆ ಎಂದು ರಮ್ಯಾ ಹೇಳಿದರು.
ಇನ್ನು ನಟಿ ಕಂ ರಾಜಕಾರಣಿ ರಮ್ಯಾ ಅವರು ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದಾಗ ಅಂತಿಮ ದರ್ಶನಕ್ಕೆ ಬಾರದಿದ್ದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಂಬರೀಶ್ ಅಭಿಮಾನಿಗಳು ಕೂಡ ರಮ್ಯಾ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಸ್ವತಃ ನಟಿ ರಮ್ಯಾ ಅವರೇ ಸ್ಪಷ್ಟನೆ ನೀಡಿದ್ದಾರೆ.
ಅಂಬರೀಶ್ ಸಂತ್ಯಸಂಸ್ಕಾರಕ್ಕೆ ಬರದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಆಗ ಟ್ಯೂಮರ್ ಬಂದಿತ್ತು. ನಾನು ಆಗ ಸರ್ಜರಿ ಮಾಡಿಸಿದ್ದೆ. ನನಗೆ ಪಬ್ಲಿಕ್ ಆಗಿ ಬಂದು ದುಃಖ ಹಂಚಿಕೊಳ್ಳುವ ಅಭ್ಯಾಸ ಇಲ್ಲ. ಬೇರೆಯವರು ಕ್ಯಾಮೆರಾ ಮುಂದೆ ಬಂದು ಹಂಚಿಕೊಳ್ಳುತ್ತಾರೆ, ನಾನು ಹಾಗೇ ಸಾರ್ವಜನಿಕವಾಗಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು.

"ನಾನು ಚಿಕ್ಕವಳಿದ್ದಾಗಿನಿಂದಲೂ ಸ್ವತಂತ್ರವಾಗಿ ಇದ್ದೇನೆ. ನಾನು ಏನೇ ಇದ್ದರೂ ಕೆಲಸದ ಬಗ್ಗೆ ಮಾತನಾಡುತ್ತೇನೆ ಅಷ್ಟೆ. ವೈಯಕ್ತಿಕ ವಿಚಾರಗಳನ್ನು ಮಾತನಾಡಲ್ಲ. ಹೀಗಾಗಿ ಎಲ್ಲರೂ ಏನೇನೋ ಹಬ್ಬಿಸುತ್ತಾರೆ. ಅಪಪ್ರಚಾರ ಮಾಡಿರುವುದು ನನಗೆ ಬೇಸರವಾಗಿದೆ," ಎಂದು ತಿಳಿಸಿದರು.
"ನನಗೆ ಗೊತ್ತು ನಾನು ಯಾರು ಅಂತಾ. ನನಗೆ ತುಂಬಾ ನೋವಾಗಿದೆ, ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ಟ್ಯೂಮರ್ ಬಳಿಕ ನಾನು ಅದನ್ನು ಹಂಚಿಕೊಂಡಿದ್ದೆ. ನನಗೆ ತುಂಬಾ ತೊಂದರೆ ಆಯ್ತು. ಅದರ ಬಗ್ಗೆ ಹೇಳಿ ಸಿಂಪತಿ ತೆಗೆದುಕೊಳ್ಳುವುದಕ್ಕೆ ಇಷ್ಟಪಡಲ್ಲ," ಎಂದು ರಮ್ಯಾ ಹೇಳಿದರು.
ಗೋ-ಬ್ಯಾಕ್ ರಮ್ಯಾ ಎಂದು ಅಭಿಯಾನ
ಕೆಲವು ವರ್ಷಗಳಿಂದ ರಾಜಕೀಯದಿಂದ ದೂರವಾಗಿದ್ದ ನಟಿ ಹಾಗು ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡಲು ಮಂಗಳವಾರ ಮಂಡ್ಯಕ್ಕೆ ಬಂದಿದ್ದರು. ಈ ವೇಳೆ ಅವರ ವಿರುದ್ಧ ಗೋಬ್ಯಾಕ್ ಅಭಿಯಾನ ಆರಂಭಿಸಿದರು.
ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ದಿ. ಅಂಬರೀಶ್ ಅಭಿಮಾನಿಗಳು ರಮ್ಯಾ ಕ್ಷೇತ್ರ ಪ್ರವೇಶಕ್ಕೆ ಫುಲ್ ಗರಂ ಆಗಿದ್ದರು. ಇದು ರಮ್ಯಾ ಅವರಿಗೆ ಇರಿಸುಮುರಿಸು ಆಗಿದೆ ಎನ್ನಲಾಗಿತ್ತು. ಹೀಗಾಗಿಯೇ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications