ಕೆಆರ್ ಪೇಟೆ: ಗೌಡ್ರ ಕುಟುಂಬದ ಸ್ಪರ್ಧೆ 'ವಿರುದ್ದ' ಆಗಲೇ ಮಾಸ್ಟರ್ ಪ್ಲ್ಯಾನ್
Recommended Video
ಕಳೆದ ಮಂಡ್ಯ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ನಾವೆಲ್ಲಾ ಎಷ್ಟೇ ಭಾಯಿಭಾಯಿ ಅಂದರೂ, ಗ್ರೌಂಡ್ ರಿಯಾಲಿಟಿ ಪ್ರಕಾರ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಒಂದಾಗಲೇ ಇಲ್ಲ.
ಕೆಲವು ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದರು. ಪರಿಣಾಮವಾಗಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದು ಇತಿಹಾಸ.
ಈಗ, ಅನರ್ಹಗೊಂಡ ಶಾಸಕರುಗಳ ಕ್ಷೇತ್ರಗಳಲ್ಲಿ , ಉಪಚುನಾವಣೆಯ ನಡೆಯಬೇಕಾಗಿರುವುದರಿಂದ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಆರಂಭಿಸಿದೆ. ಉಪಚುನಾವಣೆಯಲ್ಲೂ ಇವರಿಬ್ಬರದು ಮೈತ್ರಿ ಇರುತ್ತೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೋ ಎನ್ನುವ ಪ್ರಶ್ನೆಯ ನಡುವೆ, ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ, ವೀಕ್ಷಕರನ್ನು ನೇಮಿಸಿದೆ.
ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಕೆ ಆರ್ ಪೇಟೆಗೆ ಕಾಂಗ್ರೆಸ್ ವೀಕ್ಷಕರನ್ನಾಗಿ ನೇಮಿಸಿರುವ ಮೂವರು ಮುಖಂಡರಲ್ಲಿ ಎಲ್ಲರೂ ಒಂದು ಕಾಲದ ದೇವೇಗೌಡರ ಆಪ್ತರು, ಈಗಿನ ಪರಮದ್ವೇಷಿಗಳು. ಜೊತೆಗೆ, ಮೂವರಲ್ಲಿ ಒಬ್ಬರು ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಬೇರೆ.

ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲ್ಲಿದ್ದಾರೆ ಎನ್ನುವ ಸುದ್ದಿ
ಅನರ್ಹಗೊಂಡ ಶಾಸಕರಲ್ಲಿ ಮೂವರು ಜೆಡಿಎಸ್ ನವರು, ಅದರಲ್ಲಿ ಕೆ ಆರ್ ಪೇಟೆಯ ನಾರಾಯಣ ಗೌಡ್ರು ಕೂಡಾ. ಇವರ ವಿರುದ್ದ ಸ್ಪರ್ಧಿಸಲು ಜೆಡಿಎಸ್ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜೊತೆಗೆ, ಭವಾನಿ ರೇವಣ್ಣ ಹೆಸರು ಕೂಡಾ ಬಂದು ಹೋಗುತ್ತಿದೆ.

ವಿಧಾನಸಭೆಗಾದರೂ ಮೊಮ್ಮಗನನ್ನು ಕಳುಹಿಸಲು ಗೌಡ್ರ ಚಿಂತನೆ
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ, ಮಂಡ್ಯ ಜಿಲ್ಲಾ ವ್ಯಾಪ್ತಿಯ ಎಲ್ಲಾ ಏಳು ಕ್ಷೇತ್ರಗಳನ್ನು ಜೆಡಿಎಸ್ ಗೆದ್ದು ಕ್ಲೀನ್ ಸ್ವೀಪ್ ಮಾಡಿತ್ತು. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ಸೋತರೆ ಏನಂತೆ, ವಿಧಾನಸಭೆಗಾದರೂ ಮೊಮ್ಮಗನನ್ನು ಕಳುಹಿಸಲು ಗೌಡ್ರ ಚಿಂತನೆ ನಡೆದಿದೆ, ಇದಕ್ಕೆ ತಂದೆ ಕುಮಾರಸ್ವಾಮಿ ಒಪ್ಪಿಗೆ ನೀಡುತ್ತಾರೋ ಇಲ್ಲವೋ ಎನ್ನುವುದು ಪ್ರಶ್ನೆ.

ಚೆಲುವರಾಯಸ್ವಾಮಿ ಸಂಭಾವ್ಯ ಅಭ್ಯರ್ಥಿ ಕೂಡಾ
ಚೆಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಮತ್ತು ನರೇಂದ್ರಸ್ವಾಮಿಯವರನ್ನು ಕಾಂಗ್ರೆಸ್ ತನ್ನ ವೀಕ್ಷಕರನ್ನಾಗಿ ನೇಮಿಸಿದೆ. ಇವರೆಲ್ಲರೂ ಗೌಡ್ರ ಆಪ್ತವಲಯದಿಂದ ದೂರ ಸರಿದು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮುಗ್ಗರಿಸಿದ್ದವರು. ಇದಲ್ಲದೇ, ಕೆ ಆರ್ ಪೇಟೆಯ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಚೆಲುವರಾಯಸ್ವಾಮಿಯ ಹೆಸರೂ ಕೂಡಾ ಇದೆ.

ಮಂಡ್ಯ ಲೋಕಸಭಾ ಚುನಾವಣೆ
ಮಂಡ್ಯ ಲೋಕಸಭಾ ಚುನಾವಣೆಯ ವೇಳೆ, ಹೆಸರಿಗೆ ಮಾತ್ರ ಈ ಮೂವರು ವೀಕ್ಷಕರು ತಟಸ್ಥರಾಗಿದ್ದರು, ಗೌಡ್ರು ಮತ್ತು ಕುಮಾರಸ್ವಾಮಿಯವರ ಮೇಲಿನ ಇವರ ಸಿಟ್ಟಿನ ಜ್ವಾಲೆ ಉರಿಯುತ್ತಲೇ ಇತ್ತು. ರಾಹುಲ್ ಗಾಂಧಿ, ದೇವೇಗೌಡ್ರು, ಸಿದ್ದರಾಮಯ್ಯ ಯಾರೇ ಪ್ರಚಾರಕ್ಕೆ ಬಂದರೂ, ಇವರೆಲ್ಲರೂ ಗೈರಾಗಿದ್ದರು. ಈಗ, ಜಿಲ್ಲೆಯ ಮತ್ತೊಂದು ಕ್ಷೇತ್ರದ ಚುನಾವಣೆ ಎದುರಾಗಿದೆ. ಇಲ್ಲಿ ಮತ್ತೆ ಗೌಡ್ರ ಕುಟುಂಬವನ್ನು ಸೋಲಿಸಬೇಕೆಂದು ಹಠಕ್ಕೆ ಬಿದ್ದರೆ ಎನ್ನುವುದು ಪ್ರಶ್ನೆ.

ರಾಹುಲ್ ಮತ್ತು ಗೌಡ್ರು ಒಪ್ಪಿದರೆ, ಎಲ್ಲಾ 17 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ
ಉಪಚುನಾವಣೆಗೆ ಪ್ರತ್ಯೇಕವಾಗಿ ಸ್ಪರ್ಧಿಸೋಣ ಎನ್ನುವ ಒತ್ತಾಯ ಜೆಡಿಎಸ್ - ಕಾಂಗ್ರೆಸ್ ಎರಡೂ ಪಕ್ಷದಲ್ಲಿದೆ. ಒಂದು ವೇಳೆ, ಇದಕ್ಕೆ ರಾಹುಲ್ ಮತ್ತು ಗೌಡ್ರು ಒಪ್ಪಿದರೆ, ಎಲ್ಲಾ ಹದಿನೇಳು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ. ಗೌಡ್ರ ಕುಟುಂಬದ ವಿರುದ್ದ ಹರಿಹಾಯುತ್ತಲೇ ಬರುತ್ತಿರುವ ಮೂವರನ್ನು ವೀಕ್ಷಕರನ್ನಾಗಿ ನೇಮಿಸುವ ಮೂಲಕ, ಕಾಂಗ್ರೆಸ್ ತೊಡೆತಟ್ಟಿತೇ ಎನ್ನುವ ಪ್ರಶ್ನೆ ಎದುರಾಗಿದೆ.












Click it and Unblock the Notifications