ಕಲ್ಲಹಳ್ಳಿ ಭೂವರಹನಾಥ ದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ: ಕ್ಷೇತ್ರದ ವಿಶೇಷತೆ ತಿಳಿಯಿರಿ
ಮಂಡ್ಯ, ಮಾರ್ಚ್ 04: ಕೃಷ್ಣರಾಜಪೇಟೆ ತಾಲೂಕಿನ ಕಲ್ಲಹಳ್ಳಿ ಭೂವರಹನಾಥ ದೇವಾಲಯದಲ್ಲಿ ರೇವತಿ ನಕ್ಷತ್ರದ ಹಿನ್ನಲೆಯಲ್ಲಿ ಕ್ಷೀರಾಭಿಷೇಕ, ಪುಷ್ಪಾಭಿಷೇಕ, ಪಟ್ಟಾಭಿಷೇಕ ಸೇರಿದಂತೆ ಅಡ್ಡಪಲ್ಲಕಿ ಉತ್ಸವ, ಶ್ರೀನಿವಾಸ ಕಲ್ಯಾಣೋತ್ಸವ, ವಿಶೇಷ ಪೂಜೆ ಪುರಸ್ಕಾರಗಳು, ಹೋಮ ಹವನಗಳನ್ನು ನಡೆಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಇದೇ ವೇಳೆ ಹದಿನೇಳು ಅಡಿ ಎತ್ತರದ ಭೂದೇವಿ ಸಮೇತ ಶ್ರೀಲಕ್ಷ್ಮೀವರಹನಾಥಸ್ವಾಮಿಯ ಸಾಲಿಗ್ರಾಮ ಶ್ರೀಕೃಷ್ಣ ಶಿಲಾಮೂರ್ತಿಗೆ ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಕಬ್ಬಿನಹಾಲು, ಐನೂರು ಲೀಟರ್ ಎಳನೀರು, ಜೇನುತುಪ್ಪ, ಮೊಸರು, ಹಸುವಿನ ತುಪ್ಪ, ಸುಗಂದ ದ್ರವ್ಯಗಳು, ಅರಿಶಿನ, ಶ್ರೀಗಂಧ ಅಭಿಷೇಕ ನಡೆಸಲಾಯಿತು.

ಮಲ್ಲಿಗೆ ಜಾಜಿ, ಸಂಪಿಗೆ, ಸೇವಂತಿಗೆ, ತುಳಸಿ, ಪವಿತ್ರ ಪತ್ರೆಗಳು, ಧವನ, ಗುಲಾಬಿ, ಕಮಲ ಸೇರಿದಂತೆ 58 ಬಗೆಯ ಅಪರೂಪದ ಹೂವುಗಳಿಂದ ಪುಷ್ಪಾಭಿಷೇಕ ನಡೆಸಿ, ಸ್ವಾಮಿಯ ಉತ್ಸವ ಮೂರ್ತಿಯ ಅಡ್ಡಪಲ್ಲಕಿ ಉತ್ಸವ ಮಾಡಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಮೂಲಕ ಇಂದು ವಿಶೇಷ ಪೂಜೆ ಪುರಸ್ಕಾರಗಳು ಹಾಗೂ ಹೋಮ ಹವನಗಳನ್ನು ನಡೆಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಭೂದೇವಿಯನ್ನು ಸಂರಕ್ಷಿಸಿದ ಶುಭ ಮುಹೂರ್ತ
ಈ ವೇಳೆ ಕಲ್ಲಹಳ್ಳಿ ಭೂವರಹನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸಂಚಾಲಕ ಡಾ.ಶ್ರೀನಿವಾಸರಾಘವನ್ ಮಾತನಾಡಿ, ಶ್ರೀಹರಿಯು ಹಂದಿಯ ರೂಪವನ್ನು ತಾಳಿ ದುಷ್ಟನಾದ ಹಿರಣ್ಯಾಕ್ಷನನ್ನು ಕೊಂದು ರಸಾತಳದಲ್ಲಿ ಬಂಧಿಸಿಟ್ಟಿದ್ದ ಭೂದೇವಿಯನ್ನು ಸಂರಕ್ಷಿಸಿದ ಶುಭ ಮುಹೂರ್ತವು ರೇವತಿ ನಕ್ಷತ್ರವಾದ್ದರಿಂದ ಪ್ರತೀ ರೇವತಿ ನಕ್ಷತ್ರದ ದಿನದಂದು ಭೂವರಹನಾಥಸ್ವಾಮಿಗೆ ವಿಶೇಷವಾಗಿ ಅಭಿಷೇಕ, ಪುಷ್ಪಾಭಿಶೇಕ ಮಾಡಿ ಪಟ್ಟಾಭಿಷೇಕ ಮಾಡಿ ಸಂಭ್ರಮಿಸಲಾಗುತ್ತಿದೆ ಎಂದು ಹೇಳಿದರು.

ಕಲ್ಲಹಳ್ಳಿಯಲ್ಲಿ ರೇವತಿ ನಕ್ಷತ್ರದ ಶುಭ ದಿನವಾದ್ದರಿಂದ ವಿಶ್ವದಲ್ಲಿಯೇ ಅಪರೂಪದ್ದಾಗಿರುವ 17ಅಡಿ ಎತ್ತರದ ಭೂದೇವಿ ಸಮೇತ ಶ್ರೀಲಕ್ಷ್ಮೀವರಹನಾಥಸ್ವಾಮಿಯ ಶಿಲಾಮೂರ್ತಿಗೆ ಅಭಿಷೇಕ ಮಾಡಿ, ಪುಷ್ಪಾಭಿಷೇಕ ನಡೆಸಿ ಪಟ್ಟಾಭಿಷೇಕ ಮಾಡಿ ಸಂಭ್ರಮಿಸಲಾಗುತ್ತಿದೆ. ದೇವಾನುದೇವತೆಗಳೇ ಖುದ್ದಾಗಿ ಹಿರಣ್ಯಾಕ್ಷನ ಸಂಹಾರವಾದ ಸಮಯದಲ್ಲಿ ಕ್ಷೀರಾಭಿಷೇಕ ಹಾಗೂ ಪುಷ್ಪಾಭಿಷೇಕ ಮಾಡಿ ಸಂಭ್ರಮಿಸಿದ್ದಾರೆ ಎಂದು ಹೇಳಿದರು.
ಮನೆ ನಿರ್ಮಾಣದ ಬಯಕೆ ಈಡೇರಿಸುವ ಕ್ಷೇತ್ರ
ಭೂಮಿಯ ವ್ಯಾಜ್ಯಗಳಿಂದ ಬಳಲುತ್ತಿರುವವರು, ಸ್ವಂತ ಸೂರನ್ನು ಹೊಂದಬೇಕೆಂಬ ಆಕಾಂಕ್ಷಿತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಮಣ್ಣು, ಇಟ್ಟಿಗೆಯನ್ನು ಪೂಜಿಸಿ ಸಂಕಲ್ಪ ಮಾಡಿ ಸ್ವಂತ ಮನೆಯನ್ನು ನಿರ್ಮಿಸಬೇಕೆಂದು ಪ್ರಾರ್ಥನೆ ನಡೆಸಿ ತೆಗೆದುಕೊಂಡು ಹೋಗಿ ಮನೆಯ ನಿರ್ಮಾಣ ಆರಂಭಿಸಿದರೆ ಸಾಕು ವರಹನಾಥ ಸ್ವಾಮಿಯು ಆಶೀರ್ವದಿಸಿ ಅನುಗ್ರಹಿಸುತ್ತಾನೆ. ತಮ್ಮ ಇಷ್ಠಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು.

ತಿರುಮಲ-ತಿರುಪತಿಯ ಮಾದರಿಯಲ್ಲಿ ಭೂವರಹನಾಥ ಕ್ಷೇತ್ರವನ್ನು ಪರಕಾಲ ಸ್ವಾಮೀಜಿಗಳು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿದ್ದು ಇನ್ನು ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದಲೇ ಹೊಯ್ಸಳ ವಾಸ್ತು ಶಿಲ್ಪಕಲಾ ಮಾದರಿಯಲ್ಲಿ ದೇವಾಲಯದ ನಿರ್ಮಾಣ ಹಾಗೂ 176 ಅಡಿ ಎತ್ತರದ ಬೃಹತ್ ರಾಜಗೋಪುರ ನಿರ್ಮಾಣವಾಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯರು, ಭಕ್ತರು ಭಾಗಿ
ಇದೇ ವೇಳೆ ಮಾಜಿ ಸಚಿವ ಡಾ.ನಾರಾಯಣಗೌಡ, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹದೇವಸ್ವಾಮಿ, ಚಲನಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಡಾಲುರವಿ, ಎಂ.ಬಿ.ಹರೀಶ್ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತಾಧಿಗಳು ರೇವತಿ ನಕ್ಷತ್ರದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಸಿಹಿಪೊಂಗಲ್, ಬಿಸಿಬೇಳೆಭಾತ್, ಮೊಸರನ್ನ ಹಾಗೂ ಸಜ್ಜಪ್ಪ ಪ್ರಸಾದವನ್ನು ವಿತರಿಸಲಾಯಿತು.












Click it and Unblock the Notifications