ಮಂಡ್ಯದಲ್ಲಿ ಅಂತರ್ಜಾತಿ ವಿವಾಹ: 22 ವರ್ಷದ ನವವಿವಾಹಿತನಿಗೆ ಚಾಕು ಇರಿತ, ಸ್ಥಿತಿ ಗಂಭೀರ
ಮಂಡ್ಯ, ಮಾರ್ಚ್ 13: ಮಂಡ್ಯ ಜಿಲ್ಲೆಯ ಮೇಳಾಪುರದಲ್ಲಿ ನವವಿವಾಹಿತ ಯುವಕನಿಗೆ ಪತ್ನಿಯ ತಂದೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಆ ಸಮಯದಲ್ಲಿ ದಂಪತಿ ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದರು. ಘಟನೆಯ ನಂತರ, ಎಲ್ಲಾ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ.
ಹಲ್ಲೆಗೀಡಾದ ವ್ಯಕ್ತಿಯನ್ನು ಮಡಿವಾಳ ಸಮುದಾಯದ ಶಶಾಂಕ್ (22) ಎಂದು ಗುರುತಿಸಲಾಗಿದ್ದು, ಇತ್ತೀಚೆಗೆ ಕುರುಬ ಸಮುದಾಯದ 19 ವರ್ಷದ ಯುವತಿಯನ್ನು ಮದುವೆಯಾಗಿದ್ದರು. ಈ ಮದುವೆಗೆ ಆಕೆಯ ಕುಟುಂಬದವರು ಒಪ್ಪಿಗೆ ಸೂಚಿಸಿರಲಿಲ್ಲ. ಹೀಗಾಗಿ ತಮ್ಮ ಒಪ್ಪಿಗೆಗೆ ವಿರುದ್ಧವಾಗಿ ಮದುವೆಯಾದ ಕಾರಣ ಆಕೆಯ ತಂದೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ವರದಿಗಳ ಪ್ರಕಾರ, ಮೈಸೂರಿನ ಯುವತಿಯ ತಂದೆ ಜೆ.ಪಿ.ಆನಂದ್ ಸೇರಿದಂತೆ ದುಷ್ಕರ್ಮಿಗಳು ಶಶಾಂಕ್ನನ್ನು ಎದುರಿಸಿ ಚಾಕುವಿನಿಂದ ಅಮಾನುಷವಾಗಿ ಇರಿದಿದ್ದಾರೆ. ಹಲ್ಲೆಯಿಂದ ಆತನ ಕರುಳಿಗೆ ತೀವ್ರ ಗಾಯಗಳಾಗಿವೆ. ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ಕಳೆದ ಮೂರು ವರ್ಷಗಳಿಂದ ಈ ದಂಪತಿ ಪ್ರೀತಿಸುತ್ತಿದ್ದರು. ಶಶಾಂಕ್ ಬೇರೆ ಸಮುದಾಯಕ್ಕೆ ಸೇರಿದವನಾಗಿರುವುದರಿಂದ ಯುವತಿಯ ಮನೆಯವರು ಅವರ ಸಂಬಂಧವನ್ನು ವಿರೋಧಿಸುತ್ತಿದ್ದರು" ಎಂದು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್ ಕುಮಾರ್ ಹೇಳಿದ್ದಾರೆ.
ಯುವತಿಯ ಕುಟುಂಬವು ಅವರ ಸಮುದಾಯದಿಂದ ಒಬ್ಬರನ್ನು ಆಯ್ಕೆ ಮಾಡಿ ಆಕೆಗೆ ಮದುವೆ ಮಾಡಲು ಹೊರಟಿತ್ತು. ಆಕೆಯ ಇಚ್ಛೆಗೆ ವಿರುದ್ಧವಾಗಿ ನಿಶ್ಚಿತಾರ್ಥದ ಸಮಾರಂಭವನ್ನು ಸಹ ನಡೆಸಿತು. ಆದರೆ ಮಾರ್ಚ್ 6 ರಂದು ಆಕೆ ಓಡಿಹೋಗಿ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲಿ ಶಶಾಂಕ್ ಎಂಬಾತನನ್ನು ಮದುವೆಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
"ಮದುವೆಯಾದ ನಂತರ, ಯುವತಿಯ ತಂದೆ ಮಗಳನ್ನು ಭೇಟಿ ಮಾಡಿ ತನ್ನ ಮನೆಗೆ ಕರೆದಿದ್ದಾರೆ. ಆದರೆ ಅವರು ಹೋಗಲು ನಿರಾಕರಿಸಿದ್ದಾರೆ. ಕೋಪೋದ್ರಿಕ್ತ ತಂದೆ ನಂತರ ಹುಡುಗನನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದ್ದಾರೆ. ಆದರೆ, ಅವರು ದಾಳಿಯಿಂದ ಬಚಾವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
"ನಾವು ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 141 (ಕಾನೂನುಬಾಹಿರ ಸಭೆ), 149 , 325 (ಗಂಭೀರ ನೋವುಂಟುಮಾಡುವುದು), ಮತ್ತು 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಅವರನ್ನು ಬಂಧಿಸಿ ಶ್ರೀರಂಗಪಟ್ಟಣ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ" ಎಂದು ಇನ್ಸ್ಪೆಕ್ಟರ್ ತಿಳಿಸಿದ್ದಾರೆ.












Click it and Unblock the Notifications