ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಇಂದಿರಾ, ಕವಿತಾ ಲಂಕೇಶ್
ಮಂಡ್ಯ, ಅಕ್ಟೋಬರ್ 7: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ತಾಯಿ ಇಂದಿರಾ ಲಂಕೇಶ್ ಹಾಗೂ ಸಹೋದರಿ ಕವಿತಾ ಲಂಕೇಶ್ ಶುಕ್ರವಾರ ಹೆಜ್ಜೆ ಹಾಕಿದ್ದು 6ನೇ ದಿನದ ಪಾದಯಾತ್ರೆಯ ಹೈಲೈಟ್ಸ್ ಆಗಿತ್ತು.
ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್ನಲ್ಲಿ ಜೊತೆಗೆ ಇಂದಿರಾ ಲಂಕೇಶ್ ಕೈ ಹಿಡಿದು ರಾಹುಲ್ ಗಾಂಧಿ ಹೆಜ್ಜೆಯಾಕಿದರು. ಸ್ವತಃ ಈ ಕುರಿತು ರಾಹುಲ್ ಟ್ವೀಟ್ ಮಾಡಿದ್ದು, "ಗೌರಿ ಲಂಕೇಶ್ ಸತ್ಯದ ಪರ ನಿಂತಿದ್ದರು, ಗೌರಿ ಧೈರ್ಯದ ಪರ ನಿಂತಿದ್ದರು, ಗೌರಿ ಸ್ವಾತಂತ್ರ್ಯದ ಪರ ನಿಂತಿದ್ದರು. ಭಾರತದ ನೈಜ ಆತ್ಮವನ್ನು ಪ್ರತಿನಿಧಿಸುವ ಗೌರಿ ಲಂಕೇಶ್ ಮತ್ತು ಅವರಂತಹ ಅಸಂಖ್ಯಾತರ ಪರವಾಗಿ ನಾನು ನಿಲ್ಲುತ್ತೇನೆ. ಭಾರತ್ ಜೋಡೋ ಯಾತ್ರೆ ಅವರ ಧ್ವನಿಯಾಗಿದೆ, ಇದನ್ನು ಎಂದಿಗೂ ಮೌನಗೊಳಿಸಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.
ಸಕ್ಕರೆ ನಾಡಿನಲ್ಲಿ ಭಾರತ್ ಜೋಡೋ ಯಶಸ್ವಿ; ಆದಿಚುಂಚನಗಿರಿಯಲ್ಲಿ ವಾಸ್ತವ್ಯ
ಪಾದಯಾತ್ರೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ಕವಿತಾ ಲಂಕೇಶ್, "ರಾಹುಲ್ ಗಾಂಧಿಯವರು ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದರು. ಏಕೆಂದರೆ, ಅವರ ಅಜ್ಜಿ, ತಂದೆ ಕೂಡ ಗೌರಿ ರೀತಿಯೇ ಅಂತ್ಯ ಕಂಡಿದ್ದರು. ಅದರ ನೋವು ಅವರಿಗೂ ಇದೆ. ಹಾಗಾಗಿ ಪ್ರಕರಣದ ಬಗ್ಗೆ ವಿಚಾರಿಸಿದರು. ಹತ್ಯೆ ಮಾಡಿದವರು ಯಾವ ಉದ್ದೇಶದಿಂದ ಕೊಲೆ ಮಾಡಿದರು ಎಂಬುದನ್ನು ಕೇಳಿದರು. ಆದರೆ ಇದು ಆ ಘಟನೆ ಬಗ್ಗೆ ಈಗ ಮಾತನಾಡುವುದಕ್ಕೆ ಉತ್ತಮ ಸನ್ನಿವೇಶವಲ್ಲ ಹಾಗಾಗಿ ಸ್ವಲ್ಪ ಮಾತನಾಡಿದೆವು'' ಎಂದರು.
ಪಾದಯಾತ್ರೆ ಮನಸ್ಸಿಗೆ ಮುಟ್ಟುತ್ತಿದೆ
ಪಾದಯಾತ್ರೆ ಪರಿಣಾಮಕಾರಿಯಾಗಲಿದಿಯಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಶೇಕಡಾ ಒಂದು ಪರ್ಸೆಂಟ್ ಬದಲಾವಣೆಯಾದರೆ ಸಾಕು ಅನ್ನಿಸುತ್ತಿದೆ, ಓಟ್ ಬ್ಯಾಂಕ್ ಬಗ್ಗೆ ಗೊತ್ತಿಲ್ಲ, ಆದರೆ ಜನರ ಪ್ರೀತಿ ಮನಸ್ಸನ್ನು ಮುಟ್ಟಿದೆ. ಸಾಮಾಜಿಕ ಜಾಲಾತಾಣದಲ್ಲಿ ಇದರ ಕೆಲವು ಫೋಟೋ, ವಿಡಿಯೋಗಳನ್ನು ನೋಡಿದರೆ ಮನುಷ್ಯತ್ವ ಇರುವ ಯಾರಿಗಾದರೂ ಈ ಪಾದಯಾತ್ರೆ ಮನಸ್ಸಿಗೆ ಮುಟ್ಟುತ್ತದೆ ಎಂದರು.
ಹಳೇ ಮೈಸೂರು; ಹೀನಾಯ ಸ್ಥಿತಿಯಲ್ಲಿದ್ದ ಕೈ ಪಡೆಗೆ ರಾಹುಲ್ ಗಾಂಧಿ ಟಾನಿಕ್
ಚರಿತ್ರೆಯನ್ನು ಬದಲಾಯಿಸಬಾರದು
ಪಠ್ಯ ಪುಸ್ತಕ ಬದಲಾವಣೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿ, ಸರಕಾರ ಚರಿತ್ರೆಯನ್ನೇ ಬದಲಾಯಿಸುತ್ತಿದ್ದಾರೆ. ಕೆಟ್ಟದ್ದಾದರೂ, ಒಳ್ಳೆಯದಾದರೂ ಹಿಂದೆ ನಡೆದಿರುವುದನ್ನು ತಿಳಿದುಕೊಳ್ಳಬೇಕು. ನಮಗೆಲ್ಲಾ ಅದೇ ಇತ್ತು, ಆದರೆ ಅದನ್ನೆಲ್ಲಾ ಬದಲಾಯಿಸುವುದು ತುಂಬಾ ಅಪಾಯಕಾರಿ. ನಮ್ಮ ಮಕ್ಕಳಿಗೆ ಇತಿಹಾಸದ ಬಗ್ಗೆ ಮಾಹಿತಿ ಸಿಗಲ್ಲ, ಚರಿತ್ರೆಯನ್ನು ಬದಲಾಯಿಸಬಾರದು ಎಂದು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕವಿತಾ ಲಂಕೇಶ್ ತಿಳಿಸಿದರು.
ನಾಗಮಂಗದಲ್ಲಿ ಭಾರಿ ಜನಸ್ತೋಮ
ಭಾರತ್ ಜೋಡೋ ಯಾತ್ರೆ ನಾಗಮಂಗಲ ಪಟ್ಟಣ ಪ್ರವೇಶಿಸುತ್ತಿದ್ದಂತೆ ಭಾರೀ ಸಂಖ್ಯೆಯ ಜನತೆ ಪಾದಯಾತ್ರೆಯನ್ನು ಸ್ವಾಗತಿಸಿದರು. ನಾಗಮಂಗಲ ಪ್ರವಾಸಿ ಮಂದಿರ ವೃತ್ತವನ್ನು ಬಳಸಿಕೊಂಡು ಮುನ್ನಡೆದ ರಾಹುಲ್ಗಾಂಧಿ ಮತ್ತಿತರರು ಉಪ್ಪಾರಹಳ್ಳಿ ಗೇಟ್ ಬಳಿ ಬೆಳಗಿನ ಉಪಹಾರ ಸೇವಿಸಿ ಕೆಲ ಸಮಯ ವಿಶ್ರಾಂತಿ ಪಡೆದರು. ಮತ್ತೆ 9.30ಕ್ಕೆ ಪಾದಯಾತ್ರೆ ಮುಂದುವರಿಸಿ ತಾಲೂಕಿನ ಅಂಚೆಭೂವನಹಳ್ಳಿ ಬಳಿ ಬೆಳಗ್ಗೆ 10.30ರ ವೇಳೆಗೆ ತಲುಪಿ ವಿಶ್ರಾಂತಿ ಪಡೆದರು.
ಪಾದಯಾತ್ರೆಯಲ್ಲಿ ಮಕ್ಕಳು ಭಾಗಿ
ಈ ಸಂದರ್ಭದಲ್ಲಿ ಕೆಲ ಯುವತಿಯರು ರಾಹುಲ್ರೊಂದಿಗೆ ಹೆಜ್ಜೆಹಾಕಿ ಸೆಲ್ಫಿ ಗಿಟ್ಟಿಸಿಕೊಂಡರು. ಮತ್ತೆ ಕೆಲವರು ತಮ್ಮ ಪುಟ್ಟ ಮಕ್ಕಳೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಜೊತೆಗೆ ತಮ್ಮ ಮೊಬೈಲ್ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಗು ನಗುತ್ತಲೇ ಅವರ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ನೀಡಿದ ರಾಹುಲ್ ಅವರನ್ನೂ ತಮ್ಮೊಡನೆ ಕರೆದುಕೊಂಡು ಪಾದಯಾತ್ರೆ ಮುಂದುವರಿಸಿದ್ದು ವಿಶೇಷವಾಗಿತ್ತು. ಪುಟ್ಟ ಮಕ್ಕಳಿಗೆ ಚಾಕೋಲೇಟ್ ನೀಡಿದ ರಾಹುಲ್ ಗಾಂಧಿ ಅವರು ಮಕ್ಕಳ ಕೆನ್ನೆ ಸವರಿ, ಮೈದಡವಿ ಮುನ್ನಡೆಯುತ್ತಿದ್ದರು. ಕೆಲ ಯುವಕರು ಅವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಇಂದೂ ಸಹ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.