ಚುನಾವಣೆ ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸವಿಲ್ಲ: ಸುಮಲತಾ
Recommended Video
ಬೆಂಗಳೂರು, ಮೇ 14: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುತ್ತೇನೆಂಬ ವಿಶ್ವಾಸವಿದೆ ಆದರೆ ಅತಿಯಾದ ಆತ್ಮವಿಶ್ವಾಸವಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಹೇಳಿದ್ದಾರೆ.
ಸುಮಲತಾ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಗೆದ್ದೇ ಗೆಲ್ಲುತ್ತೇನೆ, ಇಷ್ಟೇ ಅಂತರದಿಂದ ಗೆಲ್ಲುತ್ತೇನೆ ಎಂದೆಲ್ಲಾ ಹೇಳಲಾರೆ ಆದರೆ ನನ್ನ ಪರವಾಗಿ ಧನಾತ್ಮಕ ಅಲೆ ಇದೆ ಎಂದು ಸುಮಲತಾ ಅವರು ಹೇಳಿದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಫಲಿತಾಂಶದ ಬಗ್ಗೆ ನಾವು ಯಾವ ಸಮೀಕ್ಷೆಗಳನ್ನೂ ಮಾಡಿಸಿಲ್ಲ, ನನಗೆ ಚುನಾವಣಾ ಸಮೀಕ್ಷೆಗಳ ಮೇಲೆ ನಂಬಿಕೆಯೂ ಇಲ್ಲ, ಪ್ರತಿದಿನ ಒಂದೊಂದು ಸಮೀಕ್ಷೆ ನಡೆಯುತ್ತಿರುತ್ತದೆ, ಅದರ ಮೇಲೆಲ್ಲಾ ನನಗೆ ನಂಬಿಕೆ ಇಲ್ಲ, ನನಗೆ ಮಂಡ್ಯದ ಮತದಾರರ ಮೇಲೆ ನಂಬಿಕೆ ಇದೆ ಎಂದು ಸುಮಲತಾ ಹೇಳಿದ್ದಾರೆ.
ಹೊಲೆಟ್ನಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ನಡೆದ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ಹೊಟೆಲ್ನಲ್ಲಿ ಹುಟ್ಟುಹಬ್ಬ ಕಾರ್ಯಕ್ರಮವಿತ್ತು, ಅದಕ್ಕೆ ನಾನೂ ಹೋಗಿದ್ದೆ, ಅವರೂ ಬಂದಿದ್ದರು, ಸಹಜವಾಗಿ ಮಾತನಾಡಿದೆವು, ಇದಕ್ಕೆ ಬಣ್ಣ ಬಳಿಯುವುದು ಬೇಡ ಎಂದು ಅವರು ಹೇಳಿದರು.

ಎರಡೂ ಪಕ್ಷದವರು ಸಹಾಯ ಮಾಡಿದ್ದಾರೆ: ಸುಮಲತಾ
ಮಂಡ್ಯದಲ್ಲಿ ಮೈತ್ರಿ ಸರಿಯಾಗಿ ಆಗಲಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರು ಹಲವರು ನನಗೆ ನೇರವಾಗಿಯೇ ಸಹಾಯ ಮಾಡಿದ್ದಾರೆ, ಆದರೆ ಮುಖಂಡರ ವಾಕ್ಸಮರದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸುಮಲತಾ ಹೇಳಿದ್ದಾರೆ.

'ಅಂಬರೀಶ್ ಫಲಿತಾಂಶದ ವೇಳೆ ಕೂಲ್ ಆಗಿರುತ್ತಿದ್ದರು'
ಅಂಬರೀಶ್ ಅವರು ನೆನಪಿಸಿಕೊಂಡ ಅವರು, ಚುನಾವಣಾ ಫಲಿತಾಂಶದ ವೇಳೆ ಅಂಬರೀಶ್ ಸದಾ ಕೂಲ್ ಆಗಿ ಇರುತ್ತಿದ್ದರು, ನಾನು ಬಹಳ ಟೆನ್ಶನ್ ಮಾಡಿಕೊಳ್ಳುತ್ತಿದ್ದೆ, ಆದರೆ ಈ ಬಾರಿ ನಾನು ಕೂಲ್ ಆಗಿ ಇದ್ದೇನೆ ಎಂದು ಸುಮಲತಾ ಅವರು ಹೇಳಿದರು.

'ಎಲ್ಲಿದ್ದೀಯಪ್ಪಾ, ಜೋಡೆತ್ತು ಸಿನಿಮಾ ನಿರ್ಮಾಪಕರಿಗೆ ಒಳ್ಳೇದಾಗಲಿ'
ನಿಖಿಲ್ ಎಲ್ಲಿದ್ದೀಯಪ್ಪಾ, ಜೋಡೆತ್ತು ಸಿನಿಮಾ ಟೈಟಲ್ ಬುಕ್ ಆಗಿರುವ ಬಗ್ಗೆ ಮಾತನಾಡಿದ ಸುಮಲತಾ, ಎರಡೂ ಚಿತ್ರ ಮಾಡುವವರಿಗೆ ಒಳ್ಳೆಯದಾಗಲಿ ಎಂದಷ್ಟೆ ಹಾರೈಸಿ ಸುಮ್ಮನಾದರು. ಅಷ್ಟೆ ಅಲ್ಲದೆ ಅಂತ ಚಿತ್ರವನ್ನು ಮರುಬಿಡುಗಡೆ ಆದಷ್ಟು ಬೇಗ ಮಾಡಲಾಗುವುದು ಎಂದು ಅವರು ಹೇಳಿದರು.

ಮಂಡ್ಯದಲ್ಲಿ ಮನೆ ನಿರ್ಮಿಸುವ ಯೋಜನೆ: ಸುಮಲತಾ
ಮಂಡ್ಯದಲ್ಲಿ ಜಮೀನಿದೆ, ಅಲ್ಲಿಯೇ ಒಂದು ಮನೆ ನಿರ್ಮಾಣದ ಬಗ್ಗೆ ಯೋಚನೆ ನಡೆಸಿದ್ದೇವೆ, ನನಗೆ ಸೈದ್ಧಾಂತಿಕ ರಾಜಕೀಯ ಮತ್ತಿತರೆಗಳಿಗಿಂತಲೂ ಮಂಡ್ಯದ ಅಭಿವೃದ್ಧಿಯಷ್ಟೆ ಮುಖ್ಯ ಎಂದ ಸುಮಲತಾ, ಅಂಬರೀಶ್ ಹುಟ್ಟುಹಬ್ಬವನ್ನು ಮೇ 23 ರ ಫಲಿತಾಂಶದ ಬಳಿಕ ಆಚರಿಸುವುದಾಗಿ ಹೇಳಿದರು.

ಮಂಡ್ಯದಲ್ಲಿ ಭಾರಿ ತುರುಸಿನ ಪೈಪೋಟಿ
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅವರು ಪರಸ್ಪರ ಎದುರಾಳಿಯಾಗಿದ್ದರು, ಭಾರಿ ತುರುಸಿನ ಪೈಪೋಟಿ ಬಳಿಕ ಮತದಾನ ಅಂತ್ಯವಾಗಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ಕೆಲವು ಸಮೀಕ್ಷೆಗಳ ಪ್ರಕಾರ ಸುಮಲತಾ ಅವರ ಕೈ ಮೇಲಾಗುವ ಸಂಭವ ಇದೆ ಎನ್ನಲಾಗುತ್ತಿದೆ.












Click it and Unblock the Notifications