ಸೈನಿಕರಿಗೆ ಅವಮಾನ ಮಾಡಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
ಮದ್ದೂರು, ಏಪ್ರಿಲ್ 13: ಎಲ್ಲರನ್ನೂ ಪ್ರೀತಿಯಿಂದ ಕಾಣುವ ನಾನು, ಸೈನಿಕರಿಗೆ ಅವಮಾನ ಮಾಡಿಲ್ಲ ಎಂದು ಕುಮಾರಸ್ವಾಮಿ ಇಂದು ಹೇಳಿದ್ದಾರೆ.
'ಬಡತನದ ಕಾರಣದಿಂದ, ತಿನ್ನಲು ಎರಡು ಹೊತ್ತು ಊಟ ಸಿಗದ ಕಾರಣ ಯುಕವರು ಸೈನ್ಯಕ್ಕೆ ಸೇರುತ್ತಾರೆ' ಎಂದು ಕುಮಾರಸ್ವಾಮಿ ಹೇಳಿದ್ದರು, ಕುಮಾರಸ್ವಾಮಿ ಅವರ ಈ ಹೇಳಿಕೆ ಸೈನಿಕರಿಗೆ ಮಾಡಿದ ಅವಮಾನ ಎಂದು ಆಕ್ರೋಶದ ದನಿಗಳು ಹುಟ್ಟಿದ್ದವು.
ನಿನ್ನೆ ಗಂಗಾವತಿಯಲ್ಲಿ ಸಮಾವೇಶ ನಡೆಸಿದ್ದ ಮೋದಿ ಅವರು ಸಹ ಕುಮಾರಸ್ವಾಮಿ ಅವರ ಈ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು, ಸೈನಿಕರನ್ನು ಅವಮಾನ ಮಾಡಿದವರು ಮುಳುಗಿ ಸಾಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ನಾನು ಹೇಳಿದ್ದರಲ್ಲಿ ಸುಳ್ಳಿಲ್ಲ, ಆದರೆ ನನ್ನ ಹೇಳಿಕೆಯನ್ನು ಸೈನಿಕರಿಗೆ ಅಪಮಾನವೆಂದು ಬಿಂಬಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸೈನ್ಯದಲ್ಲಿರುವ ಸೈನಿಕರು ಬಡವರ ಮಕ್ಕಳು, ಅವರನ್ನು ಮುಂದಿಟ್ಟುಕೊಂಡು ಮೋದಿ ರಾಜಕಾರಣ ಮಾಡುತ್ತಿದ್ದಾರೆ ಅದನ್ನೇ ನನ್ನ ಭಾಷಣದಲ್ಲಿ ನಾನು ಟೀಕಿಸಿದ್ದೆ. ನಾನು ಎಲ್ಲರನ್ನೂ ಪ್ರೀತಿಸುವ ವ್ಯಕ್ತಿ ನಾನು ಸೈನಿಕರಿಗೆ ಅವಮಾನ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ಗುರು ಪತ್ನಿ ಕಲಾವತಿಗೆ ಉದ್ಯೋಗ ಕೊಡಿಸಿದ್ದೇನೆ, ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದೇನೆ ಇದನ್ನು ಮೋದಿ ಮಾಡಿದ್ದಲ್ಲ ಹಾಗಿದ್ದರೆ ಯಾರು ಸೈನಿಕರಿಗೆ ಗೌರವ ಕೊಟ್ಟಂತಾಯಿತು ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications