ಮಂಡ್ಯ ಟಿಕೆಟ್ ಬೇಕಿಲ್ಲ, ಉಪಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಪ್ರಜ್ವಲ್ ರೇವಣ್ಣ
Recommended Video

ಮಂಡ್ಯ, ಅಕ್ಟೋಬರ್ 09: 'ಯಾವುದೇ ಕಾರಣಕ್ಕೂ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಅದು ವಿಧಾನಸಭೆ ಆದರೂ ಸರಿ, ಲೋಕಸಭೆ ಆದರೂ ಸರಿ' ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ ಪ್ರಜ್ವಲ್ ರೇವಣ್ಣ.
ಸಚಿವ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಊಹಾಪೋಹ ಹರಿದಾಡುತ್ತಿದ್ದ ಕಾರಣ ಅವರು ಮಾಧ್ಯಮಗಳಿಗೆ ಇಂದು ಸ್ಪಷ್ಟನೆ ನೀಡಿದ್ದಾರೆ.
ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಕುಡಿ ಪ್ರಜ್ವಲ್ ರೇವಣ್ಣ ಅವರು, ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಅವರ ಹೆಸರು ರಾಮನಗರ ಮತ್ತು ಮಂಡ್ಯ ಕ್ಷೇತ್ರದಲ್ಲಿ ಕೇಳಿ ಬಂದಿತ್ತು. ಆದರೆ ಅವರು ಸುದ್ದಿಯನ್ನು ನಿರಾಕಿರಿಸಿದ್ದಾರೆ.
'ರಾಮನಗರದಿಂದಲೂ ನಾನು ಸ್ಪರ್ಧಿಸುವುದಿಲ್ಲ ಹಾಗೂ ಮಂಡ್ಯದಿಂದಲೂ ಸ್ಪರ್ಧಿಸುವುದಿಲ್ಲ. ಈ ಉಪಚುನಾವಣೆಯಲ್ಲಿ ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂದು ನಾನೇ ಸ್ವತಃ ದೇವೇಗೌಡರ ಬಳಿ ಮನವಿ ಮಾಡಿದ್ದೇನೆ' ಎಂದು ಪ್ರಜ್ವಲ್ ಹೇಳಿದ್ದಾರೆ.

ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ
ನಾನು ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೇ ಅಲ್ಲ ಎಂದ ಪ್ರಜ್ವಲ್ ರೇವಣ್ಣ ಅವರು, ಮಂಡ್ಯದ ಜೆಡಿಎಸ್ ಕಾರ್ಯಕರ್ತರು ಇಲ್ಲಿಯೇ ಚುನಾವಣೆಗೆ ನಿಲ್ಲಬೇಕು ಎಂದು ಒತ್ತಾಯ ಮಾಡಿದ್ದಾರೆ ಆದರೆ ನಾನು ಮಂಡ್ಯ ಜಿಲ್ಲೆಯ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ರಾಮನಗರ ಕ್ಷೇತ್ರಕ್ಕೂ ಪ್ರಜ್ವಲ್ ಹೆಸರು ಕೇಳಿತ್ತು
ರಾಮನಗರ ಕ್ಷೇತ್ರಕ್ಕೂ ಈ ಮುಂಚೆ ಪ್ರಜ್ವಲ್ ರೇವಣ್ಣ ಅವರ ಹೆಸರು ಕೇಳಿಬಂದಿತ್ತು. ಆದರೆ ಅದನ್ನೂ ನಿರಾಕರಿಸಿದ ಅವರು, ದೇವೇಗೌಡರ ಅಣತಿಯಂತೆ ಅಭ್ಯರ್ಥಿ ಅಂತಿಮವಾಗಿದೆ. ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈ ಮೊದಲೆ ಅವರಿಗೆ ಹೇಳಿದ್ದೆ ಎಂದು ಅವರು ಹೇಳಿದ್ದಾರೆ.

ಎರಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದೆ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೇಳಿದ್ದು ನಿಜ ಎರಡು ಕ್ಷೇತ್ರಗಳ ಮೇಲೆ ನಾನು ಗಮನಹರಿಸಿ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದೆ ಆದರೆ ಟಿಕೆಟ್ ಸಿಗಲಿಲ್ಲ. ಆದರೆ ಈ ಬಾರಿ ಲೋಕಸಭೆ ಚುನಾವಣೆಗೆ ಟಿಕೆಟ್ ದೊರಕುವ ಸಾಧ್ಯತೆ ಇದೆ, ಅಕಸ್ಮಾತ್ ಈ ಬಾರಿಯೂ ಸಿಗಲಿಲ್ಲವೆಂದರೆ ಹಣೆಬರಹ ಸರಿ ಇಲ್ಲವೆಂದು ಸುಮ್ಮನಾಗುತ್ತೇನೆ ಎಂದು ಪ್ರಜ್ವಲ್ ಹೇಳಿದ್ದಾರೆ.

ತಂದೆ-ತಾಯಿ ದೊಡ್ಡಗೌಡರ ಬಳಿ ಲಾಭಿ ಮಾಡಿಲ್ಲ
ನನಗೆ ಟಿಕೆಟ್ ಕೊಡುವಂತೆ ತಂದೆ ಎಚ್ಡಿ ರೇವಣ್ಣ ಆಗಲಿ ತಾಯಿ ಭವಾನಿ ರೇವಣ್ಣ ಅವರಾಗಲಿ ದೇವೇಗೌಡರ ಬಳಿ ಲಾಭಿ ಮಾಡಿಲ್ಲ. ನನ್ನ ಸಂಘಟನಾ ಶಕ್ತಿ, ಗೆಲ್ಲುವ ಶಕ್ತಿ ನೋಡಿಯೇ ಹೈಕಮಾಂಡ್ ನನಗೆ ಟಿಕೆಟ್ ಕೊಡಲಿದೆ ಎಂದು ಪ್ರಜ್ವಲ್ ಹೇಳಿದರು.












Click it and Unblock the Notifications