ನಾನು ಕೂಡ ಬಿಜೆಪಿಗೆ ಸೇರಬೇಕೆಂದುಕೊಂಡಿದ್ದೆ: ಜೆಡಿಎಸ್ ಶಾಸಕ
ಮಂಡ್ಯ, ಆಗಸ್ಟ್ 23: "ನಾನು ಕೂಡ ಬಿಜೆಪಿಗೆ ಹೋಗಬೇಕು ಅಂದುಕೊಂಡಿದ್ದೆ. ಆದರೆ ಆತ್ಮಾವಲೋಕನ ಮಾಡಿಕೊಂಡು ಹಿಂದೆ ಸರಿದೆ" ಎಂದು ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೂ ಬಿಜೆಪಿಗೆ ಹೋಗಬೇಕು ಅನ್ನಿಸಿತ್ತು. ಸರ್ಕಾರ ಬಿದ್ದು ಹೋದ ಮೇಲೆ ಛೇ ಹೋಗಬೇಕಿತ್ತು ಎಂದು ಬೇಸರವಾಗಿತ್ತು. ಆದರೆ ಅನರ್ಹ ಶಾಸಕರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ನಾವು ತೆಗೆದುಕೊಂಡ ನಿರ್ಧಾರವೇ ಸರಿ ಎನಿಸುತ್ತದೆ. ಅವರನ್ನು ಅನರ್ಹ ಮಾಡಿದ ಒಂದು ಗಂಟೆಯಲ್ಲೇ ಸುಪ್ರೀಂ ಕೋರ್ಟ್ ನಿಂದ ತಡೆ ಸಿಗುತ್ತದೆ ಎಂದಿದ್ದರು. ಆದರೆ 24 ದಿನವಾದರೂ ತಡೆ ಸಿಕ್ಕಿಲ್ಲ" ಎಂದರು.

"ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರನ್ನೂ ಬಿಜೆಪಿಗೆ ಕರೆದಿದ್ದರು. ಇನ್ನು ನನ್ನನ್ನ ಬಿಟ್ಟಿರ್ತಾರಾ?" ಎಂದ ಅವರು, "ಈಗಿನ ಪರಿಸ್ಥಿತಿ ನೋಡಿದ್ರೆ ಮಧ್ಯಂತರ ಚುನಾವಣೆಗೆ ಸಿದ್ಧವಾಗುವುದು ಒಳ್ಳೆಯದು. ಈಗಾಗಲೇ ನಮ್ಮ ವರಿಷ್ಠರು ಮಧ್ಯಂತರ ಚುನಾವಣೆಗೆ ತಯಾರಾಗುವಂತೆ ಸಹ ತಿಳಿಸಿದ್ದಾರೆ. ಕಾಂಗ್ರೆಸ್ ಜೊತೆ ಹೋಗುವುದು ತಪ್ಪು ಅಂತ ಮೊದಲೇ ವರಿಷ್ಠರಿಗೆ ಹೇಳಿದ್ದೆ. ಈ ಭಾಗದಲ್ಲಿ ನಮಗೆ ಪ್ರಬಲವಾಗಿ ಪೈಪೋಟಿ ಕೊಡೋದೇ ಕಾಂಗ್ರೆಸ್ ನವರು. ಹಾಗಾಗಿ ಮೈತ್ರಿ ಬೇಡ ಅಂತ ಹೇಳಿದ್ದೆ. ಜಾತ್ಯತೀತ ತತ್ವದ ಮೇಲೆ ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ದರು. ಈಗ ನಾವು ಹೇಳಿದ್ದೆ ಸರಿ ಅಂತ ಅನ್ನಿಸಿರಬಹುದೇನೋ" ಎಂದರು.
ಇನ್ನು ಮೈಸೂರು ಭಾಗದಲ್ಲೂ ಬಿಜೆಪಿ ಪ್ರಬಲಗೊಳಿಸುವ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸುರೇಶ್ ಗೌಡ, "ಹೊಸದರಲ್ಲಿ ಆರಂಭ ಶೂರತ್ವ. ಅವರಿಗೆ ಹಳೇ ಮೈಸೂರು ಭಾಗದ ಬಗ್ಗೆ ಏನು ಗೊತ್ತು?" ಎಂದು ವ್ಯಂಗ್ಯವಾಡಿದರು.












Click it and Unblock the Notifications